ಚಿಕ್ಕೋಡಿ: ಚಿಕ್ಕೋಡಿ ತಾಲ್ಲೂಕು ವ್ಯಾಪ್ತಿಯ ರಾಯಬಾಗ ವಿಧಾನಸಭಾ ಕ್ಷೇತ್ರದ ಕೆಲವು ಗ್ರಾಮಗಳನ್ನು ರಾಯಬಾಗ ತಾಲ್ಲೂಕು ವ್ಯಾಪ್ತಿಯಲ್ಲಿ ಸೇರ್ಪಡೆಗೆ ವಿರೋಧಿಸಿ ನಾಗರಮುನ್ನೋಳಿ ಹೋಬಳಿಯ ಗ್ರಾಮಸ್ಥರು ಚಿಕ್ಕೋಡಿ ತಹಶೀಲ್ದಾರರಿಗೆ ಗುರುವಾರ ಮನವಿ ಸಲ್ಲಿಸಿದರು.
ಕಳೆದ ಹಲವು ವರ್ಷಗಳಿಂದ ಚಿಕ್ಕೋಡಿ ತಾಲ್ಲೂಕು ವ್ಯಾಪ್ತಿಯಲ್ಲಿ ನಾಗರಮುನ್ನೋಳಿ, ಬಂಬಲವಾಡ, ಬೆಳಕೂಡ, ಕರೋಶಿ, ಉಮರಾಣಿ, ಹತ್ತರವಾಟ, ಜಾಗನೂರ, ಜೈನಾಪುರ, ಮುಗಳಿ, ಕರಗಾಂವ, ವಡ್ರಾಳ ಮುಂತಾದ ಗ್ರಾಮ ಪಂಚಾಯಿತಿಗಳು ಹಾಗೂ ಕಬ್ಬೂರ ಪಟ್ಟಣ ಪಂಚಾಯಿತಿ ರಾಯಬಾಗ ವಿಧಾನಸಭಾ ಕ್ಷೇತ್ರಕ್ಕೆ ಒಳಪಟ್ಟಿದ್ದರೂ, ಚಿಕ್ಕೋಡಿ ಪಟ್ಟಣಕ್ಕೆ ಸಮೀಪದಲ್ಲಿವೆ.
ಚಿಕ್ಕೋಡಿ ಉಪ ವಿಭಾಗವನ್ನು ಹೊಂದಿದ್ದು, ಹೀಗಾಗಿ ಆಡಳಿತಾತ್ಮಕ, ಕಂದಾಯ ಹಾಗೂ ಇನ್ನಿತರ ಇಲಾಖೆಯ ಕಚೇರಿಗಳು ತಮಗೆ ಅನುಕೂಲವಾಗುತ್ತಿವೆ. ಹೀಗಾಗಿ ಈ ಎಲ್ಲಾ ಗ್ರಾಮಗಳು ಚಿಕ್ಕೋಡಿ ತಾಲ್ಲೂಕು ವ್ಯಾಪ್ತಿಯಲ್ಲಿ ಮುಂದುವರೆಸುವಂತೆ ಚಿಕ್ಕೋಡಿ ಗ್ರೇಡ್ 2 ತಹಶೀಲ್ದಾರ್ ಕಿರಣ ಬೆಳವಿ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ದುಂಡಪ್ಪ ಬೆಂಡವಾಡೆ, ವಿಜಯ ಕೋಠಿವಾಲೆ, ರಮೇಶ ಕಾಳನ್ನವರ, ರಾಜು ಹರಗನ್ನವರ, ಮಹಾಲಿಂಗ ಹಂಜಿ, ಪ್ರಭು ಡಬ್ಬನ್ನವರ, ಎಂ ವಿ ಆಲೂರೆ, ಮಹಾದೇವ ಬಾನಿ, ಮನಗೂಳಿ ಮುಂತಾದವರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.