ADVERTISEMENT

ಹೊರ ರಾಜ್ಯದ ವರ್ತಕರ ವ್ಯಾಪಾರ ನೀತಿಗೆ ವಿರೋಧ: ಸಂಕೇಶ್ವರ ಬಂದ್

​ಪ್ರಜಾವಾಣಿ ವಾರ್ತೆ
Published 10 ಜುಲೈ 2024, 16:02 IST
Last Updated 10 ಜುಲೈ 2024, 16:02 IST
ಸಂಕೇಶ್ವರದಲ್ಲಿ ವ್ಯಾಪಾರಿಗಳ ಸಂಘದ ವತಿಯಿಂದ ಹೊರ ರಾಜ್ಯಗಳ ವರ್ತಕರ ಧೋರಣೆ ವಿರೋಧಿಸಿ ಉಪ–ತಹಶೀಲ್ದಾರ್ ಸಿ.ಎ.ಪಾಟೀಲ ಅವರಿಗೆ ಮನವಿ ಸಲ್ಲಿಸಲಾಯಿತು
ಸಂಕೇಶ್ವರದಲ್ಲಿ ವ್ಯಾಪಾರಿಗಳ ಸಂಘದ ವತಿಯಿಂದ ಹೊರ ರಾಜ್ಯಗಳ ವರ್ತಕರ ಧೋರಣೆ ವಿರೋಧಿಸಿ ಉಪ–ತಹಶೀಲ್ದಾರ್ ಸಿ.ಎ.ಪಾಟೀಲ ಅವರಿಗೆ ಮನವಿ ಸಲ್ಲಿಸಲಾಯಿತು   

ಸಂಕೇಶ್ವರ: ‘ಸಂಕೇಶ್ವರ ಪಟ್ಟಣಕ್ಕೆ ಬಂದಿರುವ ಹೊರ ರಾಜ್ಯಗಳ ವರ್ತಕರು ಕಳಪೆ ಗುಣಮಟ್ಟದ ವಸ್ತುಗಳನ್ನು ಕಡಿಮೆ ದರದಲ್ಲಿ ಕೊಟ್ಟು ಗ್ರಾಹಕರಿಗೆ ಮೋಸ ಮಾಡುತಿದ್ದಾರೆ. ಇದರಿಂದ ಸ್ಥಳೀಯವಾಗಿ ಗ್ರಾಹಕರಿಗೆ ಹಾಗೂ ವ್ಯಾಪಾರಿಗಳಿಗೆ ತೊಂದರೆಯಾಗುತ್ತಿದೆ’ ಎಂದು ಆರೋಪಿಸಿ ಪಟ್ಟಣದಲ್ಲಿ ವರ್ತಕರು ಬುಧವಾರ ಬಂದ್ ಆಚರಿಸಿದರು.

ಎಲ್ಲ ಅಂಗಡಿ, ಹೋಟೆಲ್‌ಗಳು ಬಂದ್ ಆಗಿದ್ದವು. ವ್ಯಾಪಾರಿಗಳ ಸಂಘದ ವತಿಯಿಂದ ಮಹಾತ್ಮ ಗಾಂಧಿ ವೃತ್ತದಿಂದ ಪ್ರಮುಖ ರಸ್ತೆಗಳಲ್ಲಿ ವರ್ತಕರು ಪ್ರತಿಭಟನಾ ಮೆರವಣಿಗೆ ನಡೆಸಿ, ಕಿತ್ತೂರು ಚನ್ನಮ್ಮ ವೃತ್ತದ ಬಳಿ ಉಪ–ತಹಶೀಲ್ದಾರ ಸಿ.ಎ.ಪಾಟೀಲ ಅವರಿಗೆ ಮನವಿ ಸಲ್ಲಿಸಿದರು.

ಮಾಜಿ ಸಂಸದ ರಮೇಶ ಕತ್ತಿ ಮಾತನಾಡಿ, ‘ಸಂಕೇಶ್ವರದ ಭವಿಷ್ಯದ ದೃಷ್ಟಿಯಿಂದ ಸ್ಥಳೀಯ ಅಂಗಡಿಗಳ ಮಾಲೀಕರು ಸ್ಥಳೀಯ ವರ್ತಕರಿಗೆ ಮಾತ್ರ ಬಾಡಿಗೆ ನೀಡಬೇಕು. ಇದರಿಂದ ವರ್ತಕರು ಮತ್ತು ಗ್ರಾಹಕರ ನಡುವೆ ಸೌಹಾರ್ದ ಸಂಬಂಧ ಬೆಳೆಯುತ್ತದೆ. ಸ್ಥಳೀಯ ವರ್ತಕರು ಸಹಿತ ಉತ್ಪಾದನಾ ಕೇಂದ್ರದಿಂದಲೇ ಸಗಟಾಗಿ ಸರಕುಗಳನ್ನು ಖರೀದಿಸಿ ಅವುಗಳನ್ನು ಸ್ಪರ್ಧಾತ್ಮಕ ದರದಲ್ಲಿ ಗ್ರಾಹಕರಿಗೆ ಮಾರಾಟ ಮಾಡಿ ಹೊರ ರಾಜ್ಯಗಳ ವರ್ತಕರಿಗೆ ಸ್ಪರ್ಧೆ ನೀಡಬೇಕು’ ಎಂದರು.

ADVERTISEMENT

‘ಪುರಸಭೆಯವರು ವ್ಯಾಪಾರದ ಪರವಾನಗಿ ನೀಡುವಾಗ ಎಲ್ಲವನ್ನೂ ಪರಿಶೀಲಿಸಿ ಪರವಾನಗಿ ನೀಡಬೇಕು’ ಎಂದು ವರ್ತಕರು ಪುರಸಭೆ ಮುಖ್ಯಾಧಿಕಾರಿಗೆ ಮನವಿ ನೀಡಿದರು.

ವರ್ತಕರಾದ ಎಸ್.ಎಸ್. ಶಿರಕೋಳಿ, ರಾಜೇಂದ್ರ ಪಾಟೀಲ, ಅಮರ ನಲವಡೆ, ಸುನೀಲ ಪರ್ವತರಾವ, ಬಸವರಾಜ ಬಾಗಲಕೋಟೆ, ಶಂಕರರಾವ ಹೆಗಡೆ, ಸುರೇಶ ಶೆಟ್ಟಿಮನಿ, ರಾಜು ಸುತಾರ, ಆನಂದ ಸಂಸುದ್ದಿ, ಸುಭಾಷ ಕಾಸರಕರ ಇದ್ದರು.

ಸಂಕೇಶ್ವರದಲ್ಲಿ ವ್ಯಾಪಾರಿಗಳ ಸಂಘದ ವತಿಯಿಂದ ಹೊರ ರಾಜ್ಯಗಳ ವರ್ತಕರ ವ್ಯಾಪಾರಿ ಧೋರಣೆ ವಿರೋಧಿಸಿ ಬಂದ್ ಆಚರಿಸಲಾಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.