ಬೆಳಗಾವಿ: ‘ಸಮಾಜ ಸುಧಾರಣೆಗೆ ಪೊಲೀಸ್ ಇಲಾಖೆಯಲ್ಲಿ ಎಲ್ಲ ಹಂತದ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಅವಕಾಶಗಳಿವೆ. ಇದರ ಸದ್ಬಳಕೆ ಮಾಡಿಕೊಳ್ಳಬೇಕು. ಸೈಬರ್ ಸೇರಿದಂತೆ ಯಾವುದೇ ಅಪರಾಧಗಳು ನಡೆಯದಂತೆ ಕ್ರಮ ವಹಿಸಬೇಕು’ ಎಂದು ಉತ್ತರ ವಲಯ ಐಜಿಪಿ ವಿಕಾಶಕುಮಾರ್ ವಿಕಾಶ್ ಹೇಳಿದರು.
ಇಲ್ಲಿನ ಪೊಲೀಸ್ ಕವಾಯತು ಮೈದಾನದಲ್ಲಿ ನಗರ ಪೊಲೀಸ್ ಕಮಿಷನರೇಟ್ ಹಾಗೂ ಜಿಲ್ಲಾ ಪೊಲೀಸ್ ಮಂಗಳವಾರ ಆಯೋಜಿಸಿದ್ದ ರಾಜ್ಯ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಬೇರೆ ಇಲಾಖೆಗಳಿಗೆ ಹೋಲಿಸಿದರೆ, ಪೊಲೀಸ್ ಇಲಾಖೆ ಉತ್ತಮ. ಹಾಗಾಗಿ ತಮ್ಮ ಕೆಲಸದ ಬಗ್ಗೆ ಗೌರವ ಇರಬೇಕು. ಆರಕ್ಷಕರು ಇರದಿದ್ದರೆ, ಸಮಾಜದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಡುತ್ತದೆ. ಅಶಾಂತಿ ಉಂಟಾಗುತ್ತದೆ. ಹಾಗಾಗಿ ಜನರೊಂದಿಗೆ ಸೌಜನ್ಯದಿಂದ ವರ್ತಿಸಿ, ಆರೋಗ್ಯಕರ ಸಮಾಜ ಕಟ್ಟಲು ಕೈಜೋಡಿಸಬೇಕು’ ಎಂದು ಕರೆ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ, ‘ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದವರು ಮತ್ತು ಅವರ ಕುಟುಂಬದವರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ರಾಜ್ಯ ಪೊಲೀಸ್ ದಿನ ಆಚರಿಸಲಾಗುತ್ತದೆ’ ಎಂದರು.
ನಿವೃತ್ತ ಎಎಸ್ಐ ಮದರಸಾಬ್ ವಣ್ಣೂರ ಮಾತನಾಡಿದರು. ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಡಿಸಿಪಿ ರೋಹನ ಜಗದೀಶ್ ಇತರರಿದ್ದರು.
ಬೆಳಗಾವಿಯ ಸಿಎಆರ್ ತುಕಡಿ, ಡಿಎಆರ್ ತುಕಡಿ, ಜಿಲ್ಲಾ ನಾಗರಿಕ ತುಕಡೆ ಮತ್ತು ಕೆಎಆರ್ಪಿ ತುಕಡಿಯವರು ಆಕರ್ಷಕ ಪಥಸಂಚಲನ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.