ADVERTISEMENT

ಸತ್ತಿಗೇರಿ: ‘ಪ್ರಜಾವಾಣಿ’ ಪರೀಕ್ಷೆ ದಿಕ್ಸೂಚಿ ವಿತರಣೆ

​ಪ್ರಜಾವಾಣಿ ವಾರ್ತೆ
Published 1 ಜುಲೈ 2024, 14:43 IST
Last Updated 1 ಜುಲೈ 2024, 14:43 IST
ಸತ್ತಿಗೇರಿಯ ಕರ್ನಾಟಕ ಪಬ್ಲಿಕ್ ಶಾಲೆಯ ಎಸ್‌ಎಸ್‌ಎಲ್‌ಸಿ ತರಗತಿಯ ವಿದ್ಯಾರ್ಥಿಗಳಿಗೆ ಸೋಮವಾರ ‘ಪ್ರಜಾವಾಣಿ’ ಪರೀಕ್ಷೆ ದಿಕ್ಸೂಚಿ ಪತ್ರಿಕೆಗಳನ್ನು ವಿತರಿಸಲಾಯಿತು
ಸತ್ತಿಗೇರಿಯ ಕರ್ನಾಟಕ ಪಬ್ಲಿಕ್ ಶಾಲೆಯ ಎಸ್‌ಎಸ್‌ಎಲ್‌ಸಿ ತರಗತಿಯ ವಿದ್ಯಾರ್ಥಿಗಳಿಗೆ ಸೋಮವಾರ ‘ಪ್ರಜಾವಾಣಿ’ ಪರೀಕ್ಷೆ ದಿಕ್ಸೂಚಿ ಪತ್ರಿಕೆಗಳನ್ನು ವಿತರಿಸಲಾಯಿತು   

ಸತ್ತಿಗೇರಿ: ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆಯ ಎಸ್‌ಎಸ್‌ಎಲ್‌ಸಿ ತರಗತಿಯ ವಿದ್ಯಾರ್ಥಿಗಳಿಗೆ ಸೋಮವಾರ ‘ಪ್ರಜಾವಾಣಿ’ ಪರೀಕ್ಷೆ ದಿಕ್ಸೂಚಿ ಪತ್ರಿಕೆಗಳನ್ನು ವಿತರಿಸಲಾಯಿತು.

‘ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂದು ಗ್ರಾಮ ಪಂಚಾಯಿತಿಯಿಂದ ಶೇಕಡ 25 ಎಸ್‍ಸಿ– ಎಸ್‍ಟಿ ಅನುದಾನದಲ್ಲಿ ಅವರು ಸತತ 6 ತಿಂಗಳ ಕಾಲ ಈ ಪತ್ರಿಕೆಯನ್ನು ಉಚಿತವಾಗಿ ನೀಡಿದ್ದಾರೆ. ಅವರ ಕಾಳಜಿ ಅಪಾರ. ವಿದ್ಯಾರ್ಥಿಗಳ ಓದಿಗೆ ಪರೀಕ್ಷೆ ದಿಕ್ಸೂಚಿ ಸಹಾಯಕವಾಗಿದೆ. ನುರಿತ ಪ್ರಾಧ್ಯಾಪಕರಿಂದ ತಯಾರಿಸಿದ ವಿವಿಧ ವಿಷಯಗಳ ಪಾಠ, ಮಾದರಿ ಪ್ರಶ್ನೋತ್ತರಗಳು ಮತ್ತು ಸಾಮಾನ್ಯ ಜ್ಞಾನ ಅರಿಯಲು ಮಕ್ಕಳಿಗೆ ಪೂರಕ. ವಿದ್ಯಾರ್ಥಿಗಳು ಸದುಪಯೋಗ ಪಡೆದು, ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆಯುವ ಮೂಲಕ ಶಾಲೆಯ ಕೀರ್ತಿ ಹೆಚ್ಚಿಸಬೇಕು’ ಎಂದು ಶಾಲೆಯ ಉಪ ಪ್ರಾಂಶುಪಾಲ ಎಂ.ಕೆ.ಹಾದಿಮನಿ ಹೇಳಿದರು.

‌ಪಿಡಿಒ ಎ.ಬಿ. ಬಂಗಾರಿ ಮಾತನಾಡಿ, ‘ಇಂದಿನ ಸ್ಪರ್ಧಾತ್ಮಕ ಜೀವನದಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷ ಣ ಕೊಡುವುದಷ್ಟೇ ಪಾಲಕರ ಜವಾಬ್ದಾರಿ ಅಲ್ಲ; ಅವರ ಆರೋಗ್ಯದ ಕಡೆಗೂ ಹೆಚ್ಚಿನ ಗಮನ ಕೊಡಬೇಕು. ವಿದ್ಯಾರ್ಥಿಗಳು ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛತೆಯಿಂದ ನೋಡಿಕೊಳ್ಳಬೇಕು. ಕಳೆದ ವರ್ಷವು ‘ಪ್ರಜಾವಾಣಿ’ ಪರೀಕ್ಷೆ ದಿಕ್ಸೂಚಿ ಪತ್ರಕೆ ವಿತರಣೆ ಮಾಡಲಾಗಿತ್ತು. ಇದರಿಂದ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಲು ಸಹಾಯವಾಗಿದೆ’ ಎಂದು ಹೇಳಿದರು.

ADVERTISEMENT

ಪರೀಕ್ಷೆ ದಿಕ್ಸೂಚಿ ಪುರವಣಿ ನೀಡಿದ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಸರ್ವ ಸದಸ್ಯರಿಗೆ ಶಾಲಾ ಶಿಕ್ಷಕರ ವರ್ಗದಿಂದ ಅಭಿನಂದಿಸಲಾಯಿತು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಬಂಗಾರೆವ್ವ ಮಾದರ, ಕಾರ್ಯದರ್ಶಿ ಸುರೇಶ ತೋಟದ, ಕೆ.ಪಿ.ಎಸ್. ಸ್ಥಾಯಿ ಸಮಿತಿ ಅಧ್ಯಕ್ಷ ಉಮೇಶ ಮಾಗುಂಡನವರ, ಸದಸ್ಯ ಈರಣ್ಣ ಹೊಸಮನಿ, ಸದಸ್ಯರಾದ ರಾಜು ಸೋಮನ್ನವರ, ರಾಜೇಶ್ವರಿ ಮಾಕಾಳಿ, ಶಾಂತವ್ವ ಪಾಟೀಲ, ಲಕ್ಷ್ಮೀಬಾಯಿ ಪೂಜೇರ, ಶಾಂತವ್ವ ಕರಲಿಂಗಪ್ಪನವರ, ‘ಪ್ರಜಾವಾಣಿ’ ಏರಿಯಾ ಮ್ಯಾನೇಜರ್‌ ದಯಾನಂದ ಮನಗುಂಡಿ, ಶಿಕ್ಷಕ ಎಸ್.ಸಿ. ಸೊರಟ್ಟಿ, ಯು.ಎಸ್. ಪಾಟೀಲ, ಎಸ್.ಎಂ. ಜೋಲಾಪೂರಿ ಇತರರು ಉಪಸ್ಥಿತರಿದ್ದರು. ಜಿ.ಬಿ. ಬಿರಾದಾರ ಪಾಟೀಲ ನಿರೂಪಿಸಿದರು.

ಆತ್ಮವಿಶ್ವಾಸವೇ ಗೆಲುವು: ವಾಲಿ

‘ಯಾವುದೇ ಗೊಂದಲ ಅಥವಾ ಆತಂಕ ಇಟ್ಟುಕೊಳ್ಳದೇ ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಬೇಕು. ಆಗ ಉತ್ತಮ ಅಂಕಗಳನ್ನು ಗಳಿಸಲು ಸಾಧ್ಯ. ನಾವು ಖುಷಿಯಾಗಿದ್ದರೆ ಪ್ರಶ್ನೆಗೆ ತಕ್ಕಂತೆ ಉತ್ತರಗಳು ಬರುತ್ತವೆ. ಭಯವನ್ನು ಪರೀಕ್ಷಾ ಕೇಂದ್ರಕ್ಕೆ ಒಯ್ಯಬಾರದು. ನಿತ್ಯ ವಿದ್ಯಾರ್ಥಿಗಳು ‘ಪ್ರಜಾವಾಣಿ’ ಪರೀಕ್ಷೆ ದಿಕ್ಸೂಚಿ ಪುರವಣಿ ಓದಿ. ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚು ಅಂಕ ಪಡೆದು ಶಾಲೆಗೆ ಹಾಗೂ ಗ್ರಾಮಕ್ಕೆ ಕೀರ್ತಿ ತರಬೇಕು’ ಎಂದು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಗುರು ವಾಲಿ ಕರೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.