ADVERTISEMENT

ಮಹದಾಯಿ ಜಲಾನಯನ ಪ್ರದೇಶಕ್ಕೆ ಕೇಂದ್ರ ತಂಡ ಭೇಟಿ, ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 7 ಜುಲೈ 2024, 12:42 IST
Last Updated 7 ಜುಲೈ 2024, 12:42 IST
<div class="paragraphs"><p>ಮಹದಾಯಿ ಜಲಾನಯನ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ&nbsp;‘ಪ್ರವಾಹ’ ಸದಸ್ಯರ ತಂಡ</p></div>

ಮಹದಾಯಿ ಜಲಾನಯನ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ‘ಪ್ರವಾಹ’ ಸದಸ್ಯರ ತಂಡ

   

ಖಾನಾಪುರ (ಬೆಳಗಾವಿ ಜಿಲ್ಲೆ): ಮಹದಾಯಿ ನದಿ ನೀರಿನ ಹಂಚಿಕೆ ಸಂಬಂಧ ಕೇಂದ್ರ ಸರ್ಕಾರ ರಚಿಸಿದ ‘ಪ್ರವಾಹ’ (Progressive River Authority For Water and Harmony) ತಂಡವು ಮಹದಾಯಿ ಜಲಾನಯನ ಪ್ರದೇಶಕ್ಕೆ ಭಾನುವಾರ ಭೇಟಿ ನೀಡಿ ಮಾಹಿತಿ ಕಲೆಹಾಕಿತು.

ಮುಖ್ಯಸ್ಥ ಪಿ.ಎಂ.ಸ್ಕ್ವಾಟ್‌, ಸದಸ್ಯರಾದ ವೀರೇಂದ್ರ ಶರ್ಮಾ, ಮನೋಜ್‌ ತಿವಾರಿ, ನೀರಜ್‌ ಮಂಗಲಿಕ, ಮಿಲಿಂದ ನಾಯ್ಕ, ಸುಭಾಷಚಂದ್ರ, ಪ್ರಮೋದ ಬಾದಾಮಿ, ರಾಜೇಶ ಅಮ್ಮಿನಭಾವಿ ಅವರನ್ನು ಒಳಗೊಂಡ ತಂಡ ಬೆಳಿಗ್ಗೆ ಗೋವಾದ ಪಣಜಿಯಿಂದ ಹೊರಟಿತು.

ADVERTISEMENT

ರಸ್ತೆ ಮಾರ್ಗವಾಗಿ ಬಂದ ಸದಸ್ಯರನ್ನು ಕರ್ನಾಟಕ–ಗೋವಾ ಗಡಿಯ ಚೋರ್ಲಾ ಬಳಿ ರಾಜ್ಯದ ನೀರಾವರಿ ನಿಗಮದ ಅಧಿಕಾರಿಗಳು ಮತ್ತು ಪೊಲೀಸರು ಸ್ವಾಗತಿಸಿದರು. ಅಲ್ಲಿಂದ ಕಣಕುಂಬಿ ಅರಣ್ಯದ ಹಳತಾರಾ ನಾಲೆ, ಸುರ್ಲಾ ನಾಲೆ, ಕಳಸಾ ನಾಲೆಗೆ ತಂಡ ಭೇಟಿ ನೀಡಿ ಪರಿಶೀಲಿಸಿತು. ನಂತರ ಕಣಕುಂಬಿ ಪ್ರವಾಸಿ ಮಂದಿರಕ್ಕೆ ತೆರಳಿ ಸಭೆ ನಡೆಸಿತು.

ಕರ್ನಾಟಕ ನೀರಾವರಿ ನಿಗಮದ ಹಿರಿಯ ಅಧಿಕಾರಿಗಳು, ಯೋಜನೆ ಅನುಷ್ಠಾನದ ಬಗ್ಗೆ ಸಮಗ್ರವಾಗಿ ಮಾಹಿತಿ ನೀಡಿದರು. ಯೋಜನೆ ನಕ್ಷೆಯೊಂದಿಗೆ ವಿವರಿಸಿದ ಅವರು, ‘ಗೋವಾ ಆರೋ‍ಪಿಸುತ್ತಿರುವ ಪ್ರಕಾರ, ಯೋಜನೆ ಪ್ರದೇಶದಲ್ಲಿ ಯಾವುದೇ ಕಾಮಗಾರಿ ನಡೆಯುತ್ತಿಲ್ಲ’ ಎಂದು ಮನವರಿಕೆ ಮಾಡಿಕೊಟ್ಟರು. ನಂತರ ಬಂಡೂರಿ ನಾಲೆ ಪ್ರದೇಶ, ನೇರಸೆ ಗ್ರಾಮಕ್ಕೆ ತಂಡದವರು ಭೇಟಿ ನೀಡಿ, ಬೆಳಗಾವಿ ತಲುಪಿದರು.

ಕಾಡಿದ ಜಿಗಣಿಗಳು:
ನಿರಂತರವಾಗಿ ಸುರಿಯುತ್ತಿರುವ ಮಳೆಯಲ್ಲೇ ಕೈಯಲ್ಲಿ ಛತ್ರಿ ಹಿಡಿದು, ರೇನ್‌ಕೋಟ್‌ ಹಾಕಿಕೊಂಡು ಓಡಾಡಿದ ತಂಡದ ಸದಸ್ಯರನ್ನು ಜಿಗಣಿಗಳು ಬಿಟ್ಟುಬಿಡದಂತೆ ಕಾಡಿದವು. ಸೋಮವಾರ ಬೆಂಗಳೂರಿನತ್ತ ಪ್ರಯಾಣ ಬೆಳೆಸಲಿರುವ ಅವರು, ಅಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಲಿದ್ದಾರೆ. ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ ತಮ್ಮ ‘ಎಕ್ಸ್‌’ ಖಾತೆಯಲ್ಲಿ, ‘ಪ್ರವಾಹ ತಂಡದ ಸದಸ್ಯರು ಕಳಸಾ–ಬಂಡೂರಿ ತಿರುವು ಯೋಜನೆ ಪ್ರದೇಶ ಪರಿಶೀಲಿಸಲಿದ್ದಾರೆ. ಕರ್ನಾಟಕ ಸರ್ಕಾರಕ್ಕೆ ಸತ್ಯಾಸತ್ಯತೆ ಗೊತ್ತಾಗಲಿದೆ. ಈ ಪರಿಶೀಲನೆ ಗೋವಾದ ಪಾಲಿಗೆ ನಿರ್ಣಾಯಕ. ಗೋವಾ ಸರ್ಕಾರದ ನಿರಂತರ ಪ್ರಯತ್ನದ ಫಲವಿದು’ ಎಂದು ಬರೆದುಕೊಂಡಿದ್ದರು. ಆದರೆ, ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳು, ಇದೊಂದು ಸಾಮಾನ್ಯ ಭೇಟಿ ಎಂಬಂತೆ ಪರಿಗಣಿಸಿದರು. ‘ಪ್ರವಾಹ ತಂಡದ ಸದಸ್ಯರು ತಮ್ಮ ಭೇಟಿಯ ಉದ್ದೇಶದ ಬಗ್ಗೆ ಮಾಧ್ಯಮಗಳಿಗೆ ಯಾವುದೇ ರೀತಿಯ ಹೇಳಿಕೆ ನೀಡದೆ ನುಣುಚಿಕೊಂಡಿದ್ದು ಸರಿಯಲ್ಲ. ಇದರಿಂದಾಗಿ ಅವರ ಭೇಟಿಯೂ ಗೊಂದಲದ ಗೂಡಾಗಿಯೇ ಉಳಿದಿದೆ’ ಎಂದು ಮಹದಾಯಿ ಹೋರಾಟಗಾರು ಆಕ್ಷೇಪಿಸಿದ್ದಾರೆ.
‘ಇದು ಸಾಮಾನ್ಯ ಭೇಟಿ ಮಾತ್ರ’
‘ಕಳಸಾ- ಬಂಡೂರಿ ತಿರುವು ಯೋಜನೆ ಪ್ರದೇಶಕ್ಕೆ ಎಂಟು ಜನರ ತಂಡ ಭೇಟಿ ನೀಡಿದೆ. ಇಲ್ಲಿ ಏನೇನು ಕಾಮಗಾರಿ ನಡೆಯುತ್ತಿವೆ ಎಂದು ಪರಿಶೀಲಿಸಿದೆ. ಗೋವಾಕ್ಕೆ ಎರಡು ದಿನ‌, ಮಹಾರಾಷ್ಟ್ರಕ್ಕೆ ಎರಡು ದಿನ ಭೇಟಿ ಕೊಟ್ಟ ನಂತರ, ಕರ್ನಾಟಕಕ್ಕೆ ಬಂದಿದೆ. ಇದೊಂದು ಸಾಮಾನ್ಯ ಭೇಟಿ ‌ಮಾತ್ರ‌’ ಎಂದು ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ರಾಜೇಶ ಅಮ್ಮಿನಭಾವಿ ಸುದ್ದಿಗಾರರಿಗೆ ತಿಳಿಸಿದರು. ಗೋವಾ ಸಿ.ಎಂ ತಮ್ಮ ‘ಎಕ್ಸ್‌’ ಖಾತೆಯಲ್ಲಿ ಬರೆದುಕೊಂಡಿರುವ ಕುರಿತ ಪ್ರಶ್ನೆಗೆ, ‘ಆ ಬಗ್ಗೆ ನನಗೆ ‌ಗೊತ್ತಿಲ್ಲ. ಇದು ಕಾಮಗಾರಿಗಳ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಳ್ಳುವ ತಂಡ ಅಲ್ಲ’ ಎಂದರು. ‘ಈ ತಂಡದ ಭೇಟಿಯಿಂದ ನಮ್ಮ‌ ರಾಜ್ಯಕ್ಕೆ ಅನುಕೂಲ‌ವಾಗಲಿದೆಯೇ’ ಎನ್ನುವ ಪ್ರಶ್ನೆಗೆ ಉತ್ತರಿಸದೆ ಸ್ಥಳದಿಂದ ಕಾಲ್ಕಿತ್ತರು.ಮಹದಾಯಿ ಜಲಾಯನ ಪ್ರದೇಶದ ಪರಿಶೀಲನೆಗೆ ಭೇಟಿ ನೀಡಿರುವ ‘ಪ್ರವಾಹ’ ತಂಡ ಯಾವುದೇ ವರದಿ ಸಲ್ಲಿಸುವುದಿಲ್ಲ. ನೀರು ಹಂಚಿಕೆ ಕುರಿತು ಸುಪ್ರೀಂಕೋರ್ಟ್‌ ಈಗಾಗಲೇ ಆದೇಶ ನೀಡಿದೆ. ರಾಜ್ಯದ ರೈತರು ಆತಂಕಪಡುವ ಅಗತ್ಯವಿಲ್ಲ. ಅರಣ್ಯ ಇಲಾಖೆ ಮತ್ತು ವನ್ಯಜೀವಿ ಮಂಡಳಿ ಅನುಮತಿಗೆ ಪ್ರಯತ್ನಿಸಲಾಗುವುದು
ಕಳಸಾ- ಬಂಡೂರಿ ತಿರುವು ಯೋಜನೆಗೆ ಅಡ್ಡಗಾಲು ಹಾಕುತ್ತ ಬಂದ ಗೋವಾ ಸರ್ಕಾರದ ಕುತಂತ್ರಕ್ಕೆ ರಾಜ್ಯ ಸರ್ಕಾರ ಬಲಿಯಾಗಬಾರದು. ಸೋಮವಾರದ ಬೆಂಗಳೂರಿನಲ್ಲಿ ನಡೆಯಲಿರುವ ಸಭೆಯಲ್ಲಿ ಕರ್ನಾಟಕದ ನಿಲುವು ಸಮರ್ಥಿಸಿಕೊಳ್ಳಬೇಕು
–ಅಶೋಕ ಚಂದರಗಿ, ಸದಸ್ಯ, ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ
ಮಹದಾಯಿ ಜಲಾಯನ ಪ್ರದೇಶದ ಪರಿಶೀಲನೆಗೆ ಭೇಟಿ ನೀಡಿರುವ ‘ಪ್ರವಾಹ’ ತಂಡ ಯಾವುದೇ ವರದಿ ಸಲ್ಲಿಸುವುದಿಲ್ಲ. ನೀರು ಹಂಚಿಕೆ ಕುರಿತು ಸುಪ್ರೀಂಕೋರ್ಟ್‌ ಈಗಾಗಲೇ ಆದೇಶ ನೀಡಿದೆ. ರಾಜ್ಯದ ರೈತರು ಆತಂಕಪಡುವ ಅಗತ್ಯವಿಲ್ಲ. ಅರಣ್ಯ ಇಲಾಖೆ ಮತ್ತು ವನ್ಯಜೀವಿ ಮಂಡಳಿ ಅನುಮತಿಗೆ ಪ್ರಯತ್ನಿಸಲಾಗುವುದು
–ಪ್ರಲ್ಹಾದ ಜೋಶಿ ಕೇಂದ್ರ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.