ಹುಕ್ಕೇರಿ: ಹುಬ್ಬಳ್ಳಿಯಲ್ಲಿ ಈಚೆಗೆ ನಡೆದ ಅಂಜಲಿ ಅಂಬಿಗೇರ ಕೊಲೆ ಪ್ರಕರಣ ಖಂಡಿಸಿ ಸೋಮವಾರ ತಾಲ್ಲೂಕು ಕೋಳಿ–ಬೆಸ್ತ ಸಮಾಜದ ವತಿಯಿಂದ ಪ್ರತಿಭಟನಾ ಮೆರವಣಿಗೆ ನಡೆಯಿತು.
ಹಳೆ ತಹಶೀಲ್ದಾರ್ ಕಚೇರಿ ಆವರಣದಿಂದ ಹೊರಟ ಪ್ರತಿಭಟನಾಕಾರರು ಕೋರ್ಟ್ ಸರ್ಕಲ್ ಬಳಿ ಸೇರಿ ಮಾನವ ಸರಪಳಿ ರಚಿಸಿದರು.ಕೆಲಕಾಲ ಸಂಚಾರಕ್ಕೆ ವ್ಯತ್ಯಯ ಉಂಟಾಯಿತು. ಗಿರೀಶ ಶಿರಗೆ ಮತ್ತು ಭರಮಣ್ಣ ಮಾತನಾಡಿ, ‘ಹೆಣ್ಣು ಮಕ್ಕಳ ರಕ್ಷಣೆ ಮಾಡುವಲ್ಲಿ ಸರ್ಕಾರ ವಿಫಲಗೊಂಡಿದೆ. ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆಯಾದ ನಂತರ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದ್ದರೆ, ಅಂಜಲಿ ಕೊಲೆ ನಡೆಯುತ್ತಿರಲಿಲ್ಲ’ ಎಂದರು. ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಅಂಜಲಿ ಕೊಲೆ ಆರೋಪಿಗೆ ಮರಣ ದಂಡನೆ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು.
‘ಕುಟುಂಬ ನಿರ್ವಹಿಸುತ್ತಿದ್ದ ಅಂಜಲಿ ಕೊಲೆಯಾದ್ದರಿಂದ, ಅವಳ ಕುಟುಂಬ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಕುಟುಂಬ ನಿರ್ವಹಣೆಗಾಗಿ ಸರ್ಕಾರ ₹ 1 ಕೋಟಿ ಪರಿಹಾರ ಕೊಡಬೇಕು’ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ತಹಶೀಲ್ದಾರ್ ಬಲರಾಮ ಕಟ್ಟಿಮನಿ ಮನವಿ ಸ್ವೀಕರಿಸಿ ಸರ್ಕಾರಕ್ಕೆ ಕಳುಹಿಸುವುದಾಗಿ ತಿಳಿಸಿದರು. ಪಿಎಸ್ಐ ಡಿ.ಎಸ್.ದುಂಡಗೆ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದರು.
ತಾಲ್ಲೂಕು ಘಟಕದ ಅಧ್ಯಕ್ಷ ಕಿಶೋರ್ ಶಿರಗೆ, ಕಾರ್ಯದರ್ಶಿ ವಿನಾಯಕ ಕೋಚರಿ, ಜಿಲ್ಲಾ ನಿರ್ದೇಶಕ ಬಸವರಾಜ ಕುರಂದವಾಡೆ, ಮುಖಂಡರಾದ ರಾಮು ಕೋಳಿ, ಎಸ್.ಎಂ.ಅಂಬಿ, ಬಾಬು ಕೋಳಿ, ಬಿ.ಬಿ.ಅಮ್ಮಿನಬಾವಿ, ವಿ.ಎಂ.ತಳವಾರ ಸೇರಿದಂತೆ ಅನೇಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.