ಬೆಳಗಾವಿ: ‘ಇಲ್ಲಿನ ರೈಲ್ವೆ ನಿಲ್ದಾಣ ಮುಂಭಾಗದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಉಬ್ಬುಶಿಲ್ಪ ಅಳವಡಿಸಬೇಕು’ ಎಂದು ಆಗ್ರಹಿಸಿ ವಿವಿಧ ದಲಿತ ಸಂಘಟನೆಯವರು ನಿಲ್ದಾಣದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಕಾರರು, ‘ಅಂಬೇಡ್ಕರ್ ಅವರ ಉಬ್ಬುಶಿಲ್ಪ ರಚಿಸಿ, ರೈಲ್ವೆ ನಿಲ್ದಾಣದೊಳಗೆ ಇರಿಸಲಾಗಿದೆ. ಅದನ್ನು ಮುಂಭಾಗದಲ್ಲಿ ಅಳವಡಿಸಬೇಕೆಂದು ಹತ್ತಾರು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ದಿನಕ್ಕೊಂದು ಕಾರಣ ನೀಡುತ್ತ, ಕಾಲಹರಣ ಮಾಡುತ್ತಿರುವುದು ಸರಿಯಲ್ಲ. ಇನ್ನಾದರೂ ಎಚ್ಚೆತ್ತುಕೊಂಡು ಕ್ರಮ ವಹಿಸಬೇಕು’ ಎಂದು ಒತ್ತಾಯಿಸಿದರು.
ಪ್ರತಿಭಟನಾ ಸ್ಥಳಕ್ಕಾಗಮಿಸಿದ ಸಂಸದೆ ಮಂಗಲಾ ಅಂಗಡಿ, ‘ಈ ಬಗ್ಗೆ ಪರಿಶೀಲಿಸಿ, ನಿಲ್ದಾಣದ ಮುಂಭಾಗದಲ್ಲಿ ಉಬ್ಬುಶಿಲ್ಪ ಅಳವಡಿಕೆಗೆ ಕ್ರಮ ವಹಿಸಬೇಕು’ ಎಂದು ಸೂಚಿಸಿದರು. ‘ಈ ಪ್ರಕ್ರಿಯೆಗಾಗಿ ಮೇಲಧಿಕಾರಿಗಳಿಂದ ಅನುಮತಿ ಕೇಳಿದ್ದೇವೆ’ ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.