ಬೆಳಗಾವಿ: ‘ಚಿಕ್ಕೋಡಿ ಲೋಕಸಭೆ ಕ್ಷೇತ್ರದಲ್ಲಿ ಸೋಲುಕಂಡ ಅಣ್ಣಾಸಾಹೇಬ ಜೊಲ್ಲೆ ಅವರು ಈಗಾಗಲೇ ಹೈಕಮಾಂಡ್ಗೆ ದೂರು ಸಲ್ಲಿಸಿದ್ದಾರೆ. ಚಿಕ್ಕೋಡಿ, ಕಲಬುರಗಿ ಸೇರಿದಂತೆ ಇನ್ನೂ ನಾಲ್ಕು ಸ್ಥಾನಗಳನ್ನು ನಾವು ಗೆಲ್ಲಬೇಕಿತ್ತು. ಪ್ರಮಾದ ಏನಾಗಿದೆ ಎಂಬುದನ್ನು ಆಂತರಿಕವಾಗಿ ಚರ್ಚಿಸಲಾಗುವುದು’ ಎಂದು ಆರ್.ಅಶೋಕ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಚಿಕ್ಕೋಡಿ ಕ್ಷೇತ್ರಕ್ಕೆ ಯಡಿಯೂರಪ್ಪ ಪ್ರಚಾರಕ್ಕೂ ಬರಲಿಲ್ಲ. ಬಿಜೆಪಿಯ ಪ್ರಭಾವಿ ಶಾಸಕರು, ಮುಖಂಡರು ಕೂಡ ಸೋಲಿಗೆ ಕಾರಣರಾದರು’ ಎಂಬ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ‘ಯಾರೇ ಕಾರಣವಾಗಿದ್ದರೂ ಆಂತರಿಕ ವಿಚಾರಗಳ ಪರಾಮರ್ಶೆ ಶೀಘ್ರ ನಡೆಯಲಿದೆ’ ಎಂದರು.
‘ವಿಧಾನಸಭೆ ಉಪಚುನಾವಣೆಯಲ್ಲಿ ಬಿಜೆಪಿ–ಜೆಡಿಎಸ್ ಜೊತೆಯಾಗೇ ಸ್ಪರ್ಧಿಸಲಿವೆ. ಮುಂದಿನ ಎಲ್ಲ ಚುನಾವಣೆಗಳಲ್ಲೂ ನಾವು ಒಂದಾಗಿರುತ್ತೇವೆ’ ಎಂದು ಹೇಳಿದರು.
‘ರಾಜ್ಯದಲ್ಲಿ ಕಲುಷಿತ ನೀರು ಕುಡಿದು 20 ಜನ ಸತ್ತಿದ್ದಾರೆ. 15 ಬಜೆಟ್ ಮಂಡಿಸಿದ ಸಿದ್ದರಾಮಯ್ಯ ಅವರಿಗೆ ಕುಡಿಯುವ ನೀರು ಕೊಡುವ ಯೋಗ್ಯತೆ ಕೂಡ ಇಲ್ಲ. ಇದನ್ನು ಅಧಿವೇಶನದಲ್ಲಿ ಚರ್ಚೆ ಮಾಡುತ್ತೇವೆ. ಯಾವುದೇ ಸರ್ಕಾರ ಬಂದ ಒಂದೇ ವರ್ಷದಲ್ಲಿ ಇಷ್ಟು ಕೆಟ್ಟದಾಗಿ ನಡೆದುಕೊಂಡಿರಲಿಲ್ಲ’ ಎಂದು ಹರಿಹಾಯ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.