ADVERTISEMENT

ರಾಮ ಮಂದಿರ ಉದ್ಘಾಟನೆ | ಬೆಳಗಾವಿಯಲ್ಲಿ ನಾಳೆ ವಿವಿಧ ಕಾರ್ಯಕ್ರಮ: ಅನಿಲ ಬೆನಕೆ

​ಪ್ರಜಾವಾಣಿ ವಾರ್ತೆ
Published 21 ಜನವರಿ 2024, 14:27 IST
Last Updated 21 ಜನವರಿ 2024, 14:27 IST
<div class="paragraphs"><p>ಅನಿಲ ಬೆನಕೆ</p></div>

ಅನಿಲ ಬೆನಕೆ

   

ಬೆಳಗಾವಿ: ‘ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗುವಲ್ಲಿ ಬೆಳಗಾವಿಗರ ಕೊಡುಗೆಯೂ ಸಾಕಷ್ಟಿದೆ. ರಾಮನ ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ಜ.22ರಂದು ನಗರದಾದ್ಯಂತ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಅನಿಲ ಬೆನಕೆ ಹೇಳಿದರು.

ಇಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ದೇಶದಲ್ಲಿ ಲಕ್ಷಾಂತರ ಜನರ ತ್ಯಾಗದ ಪರಿಣಾಮ‌ವಾಗಿ ನಿರ್ಮಾಣವಾದ ಹೊಸ ರಾಮ ಮಂದಿರ ಈಗ ಉದ್ಘಾಟನೆಯಾಗುತ್ತಿದೆ. ಈ ಹಿಂದೆ ಕಾಂಗ್ರೆಸ್ಸಿಗರು ಅಯೋಧ್ಯೆಯಲ್ಲಿನ ಕಾರ್ಯಕ್ರಮಕ್ಕೆ ನಮಗೆ ಆಹ್ವಾನ ಕೊಟ್ಟಿಲ್ಲ ಎಂದರು. ಆಹ್ವಾನ ನೀಡಿದ ನಂತರ, ‘ಈಗ ಹೋಗುವುದಿಲ್ಲ. ಸಮಯ ಸಿಕ್ಕಾಗ ಹೋಗುತ್ತೇವೆ’ ಎನ್ನುತ್ತಿದ್ದಾರೆ. ರಾಮ ಮಂದಿರ ನಿರ್ಮಾಣವಾಗಬಾರದು ಎಂಬುದು ಅವರ ಉದ್ದೇಶವಾಗಿತ್ತು’ ಎಂದು ದೂರಿದರು.

ADVERTISEMENT

‘ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ‘ಸೆಲ್ಫಿ ವಿಥ್‌ ರಾಮ’ ಅಭಿಯಾನಕ್ಕೆ ಕರೆಕೊಟ್ಟಿದ್ದಾರೆ. ಹಾಗಾಗಿ ಎಲ್ಲರೂ ರಾಮನ ಭಾವಚಿತ್ರದೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್‌ ಮಾಡಬೇಕು. ಈ ಕಾರ್ಯಕ್ರಮದ ಅಂಗವಾಗಿ ಎರಡು ದಿನ ಭಕ್ತರು ಮಾಂಸಾಹಾರ ಮತ್ತು ಮದ್ಯ ಸೇವಿಸಬಾರದು. ಮದ್ಯದಂಗಡಿ ಹಾಗೂ ಮಾಂಸದಂಗಡಿ ಬಂದ್ ಮಾಡುವಂತೆ ಜಿಲ್ಲಾಧಿಕಾರಿ ಬಳಿ ಮನವಿ ಮಾಡುತ್ತೇವೆ’ ಎಂದರು.

‘ರಾಮನ ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ಕರ್ನಾಟಕದಲ್ಲಿ ಜ.22ರಂದು ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ(ಅರ್ಧ ದಿನ) ರಜೆ ಘೋಷಿಸಬೇಕು’ ಎಂದು ಒತ್ತಾಯಿಸಿದರು.

ಮಾಜಿ ಶಾಸಕ ಸಂಜಯ ಪಾಟೀಲ, ‘ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗುತ್ತಿರುವುದು ಇಡೀ ದೇಶದ ಜನರಲ್ಲಿ ಸಂತಸ ಮೂಡಿಸಿದೆ’ ಎಂದರು.

ಸಂಸದೆ ಮಂಗಲಾ ಅಂಗಡಿ, ಪಕ್ಷದ ಮಹಾನಗರ ಘಟಕದ ಅಧ್ಯಕ್ಷೆ ಗೀತಾ ಸುತಾರ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.