ರಾಮದುರ್ಗ: ರಾಜ್ಯದಲ್ಲಿನ ಭೀಕರ ಬರಗಾಲದಿಂದ ನೊಂದಿರುವ ರೈತರ ಬ್ಯಾಂಕ್ ಖಾತೆಗೆ ಜಮೆಯಾಗಿರುವ ವಿವಿಧ ಯೋಜನೆಯ ಹಣವನ್ನು ಬ್ಯಾಂಕಿನ ಅಧಿಕಾರಿಗಳು ಸಾಲದ ಖಾತೆಗೆ ಜಮಾ ಮಾಡುತ್ತಿದ್ದಾರೆ. ಈ ಹಣವನ್ನು ರೈತರಿಗೆ ನೀಡುವಂತೆ ಒತ್ತಾಯಿಸಿ ನ್ಯಾಶನಲ್ ಹ್ಯೂಮನ್ ರೈಟ್ಸ್ ಸಂಸ್ಥೆಯ ತಾಲ್ಲೂಕು ಘಟಕದ ಪಧಾಧಿಕಾರಿಗಳು ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.
ಬರಗಾಲದಿಂದ ಸಂಕಷ್ಟದಲ್ಲಿದ್ದು ರೈತರ ಬ್ಯಾಂಕ್ ಖಾತೆಗೆ ಬೆಳೆಹಾನಿ, ಬೆಳೆವಿಮೆ, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ ಯೋಜನೆ ಸೇರಿದಂತೆ ವಿವಿಧ ಮೂಲದ ಹಣ ಜಮಾ ಆಗಿದೆ. ಇಂತ ಹಣವನ್ನು ಬ್ಯಾಂಕಿನ ಅಧಿಕಾರಿಗಳು ಸಾಲದ ಖಾತೆಗೆ ಜಮಾ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ರೈತರಿಗೆ ತೊಂದರೆಯಾಗಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಭಾರಿ ಮುಂಗಾರು ಮಳೆ ಚೆನ್ನಾಗಿ ಸುರಿದಿದ್ದು ರೈತರಿಗೆ ಬೀಜ, ಗೊಬ್ಬರಕ್ಕಾಗಿ ಹಣದ ಅವಶ್ಯಕತೆ ಇದೆ. ವಿವಿಧ ಮೂಲದಿಂದ ಜಮಾ ಆಗಿರುವ ಹಣವನ್ನು ಬ್ಯಾಂಕ್ ಅಧಿಕಾರಿಗಳು ರೈತರಿಗೆ ಕೊಡುವಂತೆ ಸೂಚಿಸಬೇಕು ಎಂದು ಒತ್ತಾಯಿಸಿದರು.
ತಾಲ್ಲೂಕು ಘಟಕದ ಅಧ್ಯಕ್ಷ ಬಸೀರಅಹ್ಮದ ಬೈರೆಕದಾರ, ಸಂಘಟನಾ ಕಾರ್ಯದರ್ಶಿ ಹನಮಂತ ತಿಪರಡ್ಡಿ, ಈರಣ್ಣ ಕಲ್ಯಾಣಿ, ಬಿ. ಜಿ. ಖಾನೋಜಿ, ಯಂಕಪ್ಪ ಮುದಕಣ್ಣವರ, ಪಿ.ಕೆ.ಪಾಟೀಲ, ಎಫ್.ಎಂ.ದಾನಕಟಗಿ, ಕೆ.ಬಿ. ಹನಮಸಾಗರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.