ರಾಮದುರ್ಗ: ರಾಮದುರ್ಗ ತಾಲ್ಲೂಕಿನ ವಿವಿಧ ಶಾಲೆಗಳಲ್ಲಿ ಶಿಕ್ಷಣ ಇಲಾಖೆ ಅಡಿಯಲ್ಲಿ 2024-25ನೇ ಸಾಲಿನ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಕೆಲವು ಶಾಲೆಗಳಲ್ಲಿ ಮಕ್ಕಳನ್ನು ಚಕ್ಕಡಿ ಬಂಡಿಯಲ್ಲಿ ಕರೆ ತರಲಾಯಿತು. ಕುಂಭಮೇಳಗಳೊಂದಿಗೆ ಶಾಲೆಗೆ ಬರಮಾಡಿಕೊಳ್ಳಲಾಯಿತು. ಗುಲಾಬಿ ಹೂವು ನೀಡಿ ಸಿಹಿ ಹಂಚಿ ಮಕ್ಕಳನ್ನು ಸ್ವಾಗತಿಸಿದರು.
ತಾಲ್ಲೂಕಿನ ಹಲಗತ್ತಿ, ಗೊಣ್ಣಾಗರ, ಕೆ. ಚಂದರಗಿ ಗ್ರಾಮಗಳಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಟಿ. ಬಳಿಗಾರ, ಉಪನಿರ್ದೇಶಕರ ಕಚೇರಿಯ ಡಿವೈಪಿಸಿ ಬಸವರಾಜ ಮಲಾನಟ್ಟಿ ಮಕ್ಕಳನ್ನು ಬರಮಾಡಿಕೊಂಡರು. ಶಾಲೆಯ ಹಾಜರಾತಿಯನ್ನು ನೂರಕ್ಕೆ ನೂರರಷ್ಟು ಉಳಿಸಿಕೊಳ್ಳುವ ಕುರಿತು ಪಾಲಕರ ಸಭೆ ನಡೆಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಟಿ. ಬಳಿಗಾರ ಮಾತನಾಡಿ, ಶೈಕ್ಷಣಿಕ ಬಲವರ್ಧನೆಯ ವರ್ಷವನ್ನಾಗಿ ಮಾಡಲು ಸಹಕರಿಸಲು ಮನವಿ ಮಾಡಿದರು.
ಮಕ್ಕಳನ್ನು ದಾಖಲಿಸಿಕೊಂಡು ಶಾಲೆಯಲ್ಲಿ ನೂರಕ್ಕೆ ನೂರರಷ್ಟು ಹಾಜರಾತಿಯೊಂದಿಗೆ ಉತ್ತಮ ಶಿಕ್ಷಣ ನೀಡಲು ಶಿಕ್ಷಕರಿಗೆ ಸೂಚನೆ ನೀಡಿದರು.
ಶಿಕ್ಷಣ ಸಂಯೋಜಕ ಆನಂದತೀರ್ಥ ಜೋಶಿ ಸಿಆರ್ಪಿ ಬಿ.ಯು. ಬೈರಕದಾರ, ಬಿಆರ್ಪಿ ಐ.ಪಿ. ಮುಳ್ಳೂರು, ಎ.ಐ. ಅತ್ತಾರ, ಮುಖ್ಯ ಶಿಕ್ಷಕ ಬಿ.ವೈ. ಅಪ್ಪಾಜಿಗೌಡ್ರ, ಕೆ.ಎನ್. ಯಂಡ್ರಾವಿ, ಆಯಾ ಗ್ರಾಮಗಳ ಎಸ್ಡಿಎಂಸಿ ಅಧ್ಯಕ್ಷರು, ಪದಾಧಿಕಾರಿಗಳು, ಗ್ರಾಮಸ್ಥರು, ವಿದ್ಯಾರ್ಥಿಗಳು ಹಾಜರಿದ್ದರು.
ಹುಕ್ಕೇರಿ ವರದಿ: ತಾಲ್ಲೂಕಿನ ಕೊಟಬಾಗಿ ನಮ್ಮೂರ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳನ್ನು ಶುಕ್ರವಾರ ಎತ್ತಿನಗಾಡಿಯಲ್ಲಿ ಒಂದನೇ ತರಗತಿಗೆ ದಾಖಲಾದ ವಿದ್ಯಾರ್ಥಿಗಳೊಂದಿಗೆ ಊರಿನ ತುಂಬಾ ಮೆರವಣಿಗೆ ಮಾಡಿ ಶಾಲೆಯಲ್ಲಿ ಸರ್ಕಾರಿ ಶಾಲೆಯ ಮಹತ್ವ ತಿಳಿಸಿ ಬರಮಾಡಿ ಕೊಳ್ಳಲಾಯಿತು.
ತಾಲ್ಲೂಕಿನ ಶಿಂಧಿಹಟ್ಟಿಯ ಸರ್ಕಾರಿ ಪ್ರಾಥಮಿಕ ಕನ್ನಡ ಶಾಲೆಗೆ ಬಂದ ವಿದ್ಯಾರ್ಥಿಗಳಿಗೆ ಶಿಕ್ಷಕರು ಉಚಿತ ಪುಸ್ತಕ ವಿತರಿಸಿ ಸ್ವಾಗತ ಕೋರಿದರು.
ಸಮವಸ್ತ್ರ ವಿತರಣೆ
ಕೌಜಲಗಿ: ಮೂಡಲಗಿ ಶೈಕ್ಷಣಿಕ ವಲಯದ ಬೆಟಗೇರಿ ಸಿಆರ್ಸಿ ವಲಯ ವ್ಯಾಪ್ತಿಯ ಎಲ್ಲ ಸರ್ಕಾರಿ ಹಿರಿಯ ಮತ್ತು ಕಿರಿಯ ಹಾಗೂ ತೋಟದ ಕಿರಿಯ ಪ್ರಾಥಮಿಕ ಕನ್ನಡ ಶಾಲೆಗಳಲ್ಲಿ ಶಾಲಾ ಪ್ರಾರಂಭೋತ್ಸವ ಪಠ್ಯ ಪುಸ್ತಕ ಮತ್ತು ಸಮವಸ್ತ್ರ ವಿತರಣೆ ಕಾರ್ಯಕ್ರಮ ಸಡಗರದಿಂದ ನಡೆಯಿತು. ಬೆಟಗೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮತ್ತು ಹೆಣ್ಣು ಮಕ್ಕಳ ಶಾಲೆಯಲ್ಲಿ ಸ್ಥಳೀಯ ಸಿಆರ್ಸಿ ವಲಯದ ಸಮೂಹ ಸಂಪನ್ಮೂಲ ವ್ಯಕ್ತಿ ಎಂ.ಬಿ.ನಾಯ್ಕರ ಅಕ್ಷರ ಬಂಡಿ ಮೆರವಣಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶಾಲಾ ಮಕ್ಕಳಿಗೆ ಹೂ ಮತ್ತು ಸಿಹಿ ನೀಡಿ ಶಿಕ್ಷಕರು ಬರಮಾಡಿಕೊಂಡರು. ಬಳಿಕ ಪಠ್ಯ ಪುಸ್ತಕ ಸಮವಸ್ತ್ರ ವಿತರಣೆ ಮಾಡಲಾಯಿತು.
ಗುಣಮಟ್ಟದ ಶಿಕ್ಷಣ ನೀಡಲು ಶಿಕ್ಷಕರಿಗೆ ಮಾರ್ಗದರ್ಶನ
ಬೈಲಹೊಂಗಲ: ತಾಲ್ಲೂಕಿನ 12 ಕ್ಲಸ್ಟರಿನ ಶಾಲೆಯಲ್ಲಿ ಮಕ್ಕಳಿಗೆ ಹೂಗುಚ್ಛ ನೀಡಿ ಸಿಹಿ ವಿತರಿಸುವ ಮೂಲಕ ಮಕ್ಕಳನ್ನು ಬರಮಾಡಿಕೊಂಡು ಶಾಲಾ ಪ್ರಾರಂಭೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ತಾಲ್ಲೂಕಿನ ಎಲ್ಲ 12 ಕ್ಲಸ್ಟರಿನ ಶಾಲೆಗಳನ್ನು ಅಲಂಕರಿಸಲಾಗಿತ್ತು. ಪಠ್ಯಪುಸ್ತಕ ಸಿಹಿ ನೀಡಿ ಬರಮಾಡಿಕೊಂಡರು. ಗ್ರಾಮದಲ್ಲಿ ಸಕಲ ವಾದ್ಯಮೇಗಳೊಂದಿಗೆ ಮಹಿಳೆಯರ ಪೂರ್ಣಕುಂಭಮೇಳ ಚಕ್ಕಡಿ ಮೆರವಣಿಗೆ ನಡೆಯಿತು. ತಾಲ್ಲೂಕಿನ ಸುತ್ತಗಟ್ಟಿ ಹಣಮನಹಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ಷೇತ್ರಶಿಕ್ಷಣಾಧಿಕಾರಿ ಎ.ಎನ್.ಪ್ಯಾಟಿ ಮಕ್ಕಳಿಗೆ ಪಠ್ಯ ಪುಸ್ತಕ ವಿತರಿಸುವ ಮೂಲಕ ಶಾಲಾ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿದರು. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಶಿಕ್ಷಕರಿಗೆ ಮಾರ್ಗದರ್ಶನ ಮಾಡಿದರು. ಮಕ್ಕಳಗೊಂದಿಗೆ ಚಕ್ಕಡಿ ಏರಿ ಮೈದಾನದಲ್ಲಿ ಸುತ್ತಾಡಿದರು. ಅನಿಗೊಳ ಸಿ.ಆರ್.ಪಿ ಸಿದ್ಧು ನೇಸರಗಿ ಮಕ್ಕಳನ್ನು ಒಂದನೇ ತರಗತಿಗೆ ದಾಖಲು ಮಾಡಿಕೊಳ್ಳುವುದರ ಮೂಲಕ ಶಾಲಾ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿದರು. ಶಿಕ್ಷಣ ಸಂಯೋಜಕ ಯರಗಟ್ಟಿ ದೇಶನೂರ ಕ್ಲಸ್ಟರ್ ಸಿ.ಆರ್.ಪಿ.ಬನ್ಯಪ್ಪಗೋಳ ಸುತ್ತಗಟ್ಟಿ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.