ಚನ್ನಮ್ಮನ ಕಿತ್ತೂರು: ತಾಲ್ಲೂಕಿನ ಮಲಪ್ರಭಾ ಸಹಕಾರ ಸಕ್ಕರೆ ಕಾರ್ಖಾನೆ (ರಾಣಿ ಶುಗರ್) ಖಾನಾಪುರದ ಲೈಲಾ ಸಕ್ಕರೆ ಕಾರ್ಖಾನೆಗೆ ಗುತ್ತಿಗೆ ಆಧಾರದ ಮೇಲೆ ನೀಡುವ ಹುನ್ನಾರ ಆಡಳಿತ ಮಂಡಳಿಯಿಂದ ನಡೆಯುತ್ತಿದೆ ಎಂದು ರೈತಸಂಘ ಹಾಗೂ ಹಸಿರುಸೇನೆ ಧುರೀಣ ಮಡಿವಾಳಯ್ಯ ಹಿರೇಮಠ ಆರೋಪಿಸಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ರಾಣಿ ಶುಗರ್ ನಲ್ಲಿ ಈಗ ನಡೆದಿರುವ ಚಟುವಟಿಕೆಗಳನ್ನು ಗಮನಿಸಿದರೆ ಇಂಥದ್ದೊಂದು ಅನುಮಾನ ಕಾರ್ಖಾನೆ ಸದಸ್ಯರನ್ನು ಕಾಡುತ್ತಿದೆ ಎಂದರು.
ಲೈಲಾ ಶುಗರ್ ಕಾರ್ಖಾನೆಯ ಅಧಿಕಾರಿಯೊಬ್ಬರನ್ನು ತಂದು ರಾಣಿ ಶುಗರ್ ಗೆ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಆಗಿ ನೇಮಕ ಮಾಡಲಾಗಿದೆ. ಅವರಿಗೆ ಸಂಬಂಧಿಸಿದ ಸಹಕಾರ ಸಂಘದಿಂದ ರೂ. 8 ಕೋಟಿ ಸಾಲ ಪಡೆಯಲಾಗಿದೆ. ಇವೆಲ್ಲ ಘಟನೆಗಳು ಲೈಲಾ ಶುಗರ್ ದಂತೆ ಗುತ್ತಿಗೆಗೆ ನೀಡುವ ಪೂರ್ವ ಸಿದ್ಧತೆಗಳಿವು ಎಂದು ಅನಿಸುತ್ತಿದೆ ಎಂದರು.
ರಾಣಿ ಶುಗರ್ ಕಾರ್ಖಾನೆ ಮೇಲೆ ರೂ. 120 ಕೋಟಿ ಸಾಲವಿದೆ. ಇಳುವರಿಯಲ್ಲೂ ಕಡಿಮೆ ತೋರಿಸಿ ಕಾರ್ಖಾನೆಗೆ ಹಾನಿ ಮಾಡಲಾಗಿದೆ. ಮಾಡಿರುವ ಭ್ರಷ್ಟಾಚಾರ ಮುಚ್ಚಿಹಾಕಲು ಆಡಳಿತ ಮಂಡಳಿಯು ಗುತ್ತಿಗೆಗೆ ನೀಡಲು ಹೊರಟಿದೆ. ಇದರಲ್ಲಿ ಖಾನಾಪುರ ಮತ್ತು ಕಿತ್ತೂರು ಶಾಸಕರ ಕೈವಾಡವಿದೆ ಎಂದು ಆರೋಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.