ADVERTISEMENT

ಚಿಕ್ಕೋಡಿ: ನೀರಾವರಿ ಕಾಲುವೆಯಲ್ಲಿ ಹೂಳು ಭರ್ತಿ

ಇಲಾಖೆಯಲ್ಲಿ ಅನುದಾನದ ಕೊರತೆ: ನೀರಿಗಾಗಿ ಕಾದಿರುವ ರೈತರು

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2024, 4:53 IST
Last Updated 16 ಅಕ್ಟೋಬರ್ 2024, 4:53 IST
   

ಚಿಕ್ಕೋಡಿ: ತಾಲ್ಲೂಕು ವ್ಯಾಪ್ತಿಯ ಕೊಟಬಾಗಿ ಏತ ನೀರಾವರಿಯ ಘಟಪ್ರಭಾ ಬಲದಂಡೆಯ 2ನೇ ಹಂತದ ವಿತರಣಾ ಕಾಲುವೆ, ಉಪ ಕಾಲುವೆಗಳಲ್ಲಿ ಹೂಳು ಭರ್ತಿಯಾಗಿ, ಗಿಡಗಂಟಿಗಳು ಬೆಳೆದಿವೆ.

ಕೆಲವೊಂದು ಕಡೆಗೆ ಕಾಲುವೆಗೆ ಹಾಕಿದ ಸಿಮೆಂಟ್ ಕಿತ್ತು ಹೋಗಿದೆ. ಇನ್ನು ಕೆಲವು ಕಡೆಗೆ 10 ಅಡಿಯಷ್ಟು ಆಳದ ಕಾಲುವೆಯಲ್ಲಿ 8 ಅಡಿಯಷ್ಟು ಹೂಳು ತುಂಬಿದ್ದು, ನೀರಾವರಿ ಇಲಾಖೆಯ ನಿರ್ಲಕ್ಷ್ಯ ಹಿಡಿದ ಕೈಗನ್ನಡಿಯಾಗಿದೆ.

ಕರ್ನಾಟಕ ನೀರಾವರಿ ನಿಗಮ ನಿಯಮಿತದಿಂದ ನಿರ್ವಹಣೆ ಆಗಬೇಕಿರುವ 17 ಕಿ.ಮೀ ಉದ್ದದ ಕಾಲುವೆಯಲ್ಲಿ 178.62 ಕ್ಯುಸೆಕ್ ನೀರು ಹರಿಯಬೇಕಿತ್ತು. ಕಾಲುವೆಯಲ್ಲಿ ಕಳೆದ ಹಲವು ವರ್ಷಗಳಿಂದ ಹೂಳು ತುಂಬಿದ್ದರಿಂದ ಕಾಲುವೆಯು ನೀರನ್ನೇ ಕಂಡಿಲ್ಲ. ಹೀಗಾಗಿ 5375.88 ಹೆಕ್ಟೇರ್ ಪ್ರದೇಶ ವ್ಯಾಪ್ತಿಗೆ ಹರಿಯಬೇಕಿದ್ದ ನೀರು ಹರಿಯುತ್ತಿಲೇ ಇಲ್ಲ. ಕಾಲುವೆಗೆ ನೀರು ಹರಿಸಿದರೂ ಅದು ಕೊನೆಭಾಗಕ್ಕೆ ತಲುಪುವುದೇ ಇಲ್ಲ.

ADVERTISEMENT

ಕಾಲುವೆ ವ್ಯಾಪ್ತಿಯ ಕರಗಾಂವ, ಬೆಳಕೂಡ, ಡೋಣವಾಡ, ಬಂಬಲವಾಡ, ಹಂಚಿನಾಳ, ವಿದ್ಯಾನಗರ, ಬೆಳಗಲಿ ಮತ್ತಿತರ ಗ್ರಾಮಗಳ ಜಮೀನುಗಳಿಗೆ ನೀರು ಹರಿಯುತ್ತಿಲ್ಲ. ವಿತರಣಾ ಕಾಲುವೆಯಲ್ಲಂತೂ ಆಳೆತ್ತರದ ಹುಲ್ಲು ಬೆಳೆದು ನಿಂತಿದೆ. ಕೆಲವು ಕಡೆಗೆ ಗಿಡ ಗಂಟಿಗಳು ಬೆಳೆದಿವೆ. ಕಾಲುವೆಯ ಕಬ್ಬಿಣದ ಗೇಟ್ ಕಿತ್ತು ಹೋಗಿವೆ. ಕೆಲವು ಕಡೆಗೆ ಕಾಲುವೆಗೆ ರಂಧ್ರ ಕೊರೆದು ತಮ್ಮ ಹೊಲಕ್ಕೆ ನೀರು ತೆಗೆದುಕೊಂಡು ಹೋಗಿದ್ದನ್ನು ಕಾಣಬಹುದಾಗಿದೆ.

ಮಳೆಗಾಲ ಪ್ರಾರಂಭವಾಗುವ ಮೊದಲೇ ಕಾಲುವೆ ಹೂಳು ತೆರವುಗೊಳಿಸಿ ಗಿಡಗಂಟಿಗಳನ್ನು ಕತ್ತರಿಸಿ ನೀರು ಸರಾಗವಾಗಿ ಹರಿಯಲು ಅನುಕೂಲ ಮಾಡಿಕೊಡಬೇಕಿತ್ತು. ಮಳೆಗಾಲ ಮುಗಿಯುತ್ತ ಬಂದರೂ ನೀರಾವರಿ ಇಲಾಖೆಯ ಅಧಿಕಾರಿಗಳು ಏನೂ ಕ್ರಮ ವಹಿಸಿಲ್ಲ. ಕೆಲವು ಕಡೆ ಹೂಳಿನಿಂದಾಗಿ ಕಾಲುವೆಯೇ ಕಾಣುವುದಿಲ್ಲ.

ಈ ಕುರಿತು ನೀರಾವರಿ ಇಲಾಖೆಯ ಅಧಿಕಾರಿಗಳನ್ನು ಕೇಳಿದರೆ ಜಂಗಲ್ ಕಟಿಂಗ್, ಹೂಳೆತ್ತಲು ಸರ್ಕಾರದಿಂದ ಅನುದಾನ ಬಂದಿಲ್ಲ. ಅದಕ್ಕಾಗಿ ಯಾವುದೇ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ಸಾಧ್ಯವಾಗಿಲ್ಲ. ಹೀಗಾಗಿ ಕಾಲುವೆ ಹಾದು ಹೋಗುವ ಆಯಾ ಗ್ರಾಮ ಪಂಚಾಯಿತಿಯವರೇ ನರೇಗಾ ಯೋಜನೆಯಲ್ಲಿ ಹೂಳು ಎತ್ತಿ ಕಾಲುವೆಯನ್ನು ದುರಸ್ಥಿ ಮಾಡಿಕೊಳ್ಳಲಿ ಎಂದು ಉಡಾಫೆಯ ಮಾತುಗಳನ್ನು ಆಡುತ್ತಾರೆ. ಹೀಗಾಗಿ ರೈತರ ಬೆಳೆಗಳಿಗೆ ಸಕಾಲದಲ್ಲಿ ನೀರು ಸಿಗದಿರುವುದು ರೈತರ ಅಸಮಾಧಾನಕ್ಕೆ ಕಾರಣವಾಗಿದೆ.

ಕಾಲುವೆ ನಿರ್ಮಾಣ ಮಾಡಿ ಮೂರು ದಶಕ ಕಳೆದರೂ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರವನ್ನೂ ನೀಡಿಲ್ಲ. ಸಮರ್ಪಕವಾಗಿ ನೀರೂ ಹರಿಸುತ್ತಿಲ್ಲ.
ವಿರೂಪಾಕ್ಷ ಸನದಿ, ಡೋಣವಾಡ ಗ್ರಾಮದ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.