ADVERTISEMENT

ಆರ್.ಎಫ್.ಒ ವಿರುದ್ಧ ಕೂಲಿಗಾರರ ಧರಣಿ

ನರೇಗಾ ಕೆಲಸ ನೀಡದ ನಾಗರಗಾಳಿ ವಲಯ ಅರಣ್ಯ ಅಧಿಕಾರಿ: ಆರೋಪ

​ಪ್ರಜಾವಾಣಿ ವಾರ್ತೆ
Published 21 ಜೂನ್ 2024, 16:18 IST
Last Updated 21 ಜೂನ್ 2024, 16:18 IST
ಖಾನಾಪುರ ತಾಲ್ಲೂಕಿನ ನಾಗರಗಾಳಿ ವಲಯ ಅರಣ್ಯಾಧಿಕಾರಿಗಳ ಕಚೇರಿಯ ಮುಂದೆ ಶುಕ್ರವಾರ ನರೇಗಾ ಕೂಲಿಕಾರರು ಧರಣಿ ಕೈಗೊಂಡರು
ಖಾನಾಪುರ ತಾಲ್ಲೂಕಿನ ನಾಗರಗಾಳಿ ವಲಯ ಅರಣ್ಯಾಧಿಕಾರಿಗಳ ಕಚೇರಿಯ ಮುಂದೆ ಶುಕ್ರವಾರ ನರೇಗಾ ಕೂಲಿಕಾರರು ಧರಣಿ ಕೈಗೊಂಡರು    

ಖಾನಾಪುರ:  ನಾಗರಗಾಳಿ ವಲಯ ಅರಣ್ಯ ಅಧಿಕಾರಿ ನರೇಗಾ ಯೋಜನೆಯಡಿ ಕೂಲಿ ಕೆಲಸ ನೀಡದೇ ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಗೋಟಗಾಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ನರೇಗಾ ಕೂಲಿಕಾರರು ಅಧಿಕಾರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ, ನಾಗರಗಾಳಿ ವಲಯ ಅರಣ್ಯ ಅಧಿಕಾರಿಗಳ ಕಚೇರಿ ಮುಂದೆ ಶುಕ್ರವಾರ ಧರಣಿ ನಡೆಸಿದರು.

ಅರಣ್ಯ ಇಲಾಖೆಯಿಂದ ನರೇಗಾ ಯೋಜನೆಯಡಿ ಕೂಲಿ ಕೆಲಸ ಒದಗಿಸುವಂತೆ ಗುರುವಾರ ಗೋಟಗಾಳಿ ಗ್ರಾ.ಪಂ. ಆವರಣದಲ್ಲಿ ಕೂಲಿಕಾರರು ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆಯ ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ನರೇಗಾ ಸಹಾಯಕ ನಿರ್ದೇಶಕಿ ರೂಪಾಲಿ ಅವರ ಮೂಲಕ ನಾಗರಗಾಳಿ ಆರ್.ಎಫ್.ಒ ಪ್ರಶಾಂತ ಅವರನ್ನು ಸಂಪರ್ಕಿಸಿ ಅರಣ್ಯ ಪ್ರದೇಶದಲ್ಲಿ ಕೆಲಸ ನೀಡುವಂತೆ ಕೋರಿದ್ದರು. ಆದರೆ ಆರ್‌ಎಫ್‌ಒ, ಅರಣ್ಯ ಪ್ರದೇಶದಲ್ಲಿ ನರೇಗಾ ಕೂಲಿಕಾರರಿಗೆ ಕೆಲಸ ನೀಡಲು ಸಾಧ್ಯವಿಲ್ಲ ಎಂದಿದ್ದರು.

ಇದರಿಂದ ಅಸಮಾಧಾನಗೊಂಡ ಕೂಲಿಕಾರರು ಶುಕ್ರವಾರ ನೇರವಾಗಿ ನಾಗರಗಾಳಿ ಆರ್‌ಎಫ್‌ಒ ಕಚೇರಿಗೆ ತೆರಳಿ ಧರಣಿ ಕೈಗೊಂಡರು. ನಾಗರಗಾಳಿ ವಲಯ ಅರಣ್ಯ ಅಧಿಕಾರಿಗಳ ಕಚೇರಿಯ ಮುಂದೆ ಮೂರು ಗಂಟೆಗಳ ಕಾಲ ಧರಣಿ ನಡೆಸಿದ ಐವತ್ತಕ್ಕೂ ಹೆಚ್ಚು ನರೇಗಾ ಕೂಲಿಕಾರರು ತಮ್ಮ ಧರಣಿಯ ವಿಷಯ ಅರಿತ ತಾಪಂ ಇಒ ಮತ್ತು ನರೇಗಾ ಸಹಾಯಕ ನಿರ್ದೇಶಕರು ಸ್ಥಳಕ್ಕಾಗಮಿಸಿ ತಮ್ಮ ಅಹವಾಲು ಆಲಿಸಲಿಲ್ಲ ಎಂದು ಅಸಮಾಧಾನ ಹೊರಹಾಕಿದರು.

ADVERTISEMENT

ಈ ಸಂದರ್ಭದಲ್ಲಿ ಮಾತನಾಡಿದ ಕೂಲಿಕಾರರು, ‘ಗೋಟಗಾಳಿ ಗ್ರಾ.ಪಂ. ವ್ಯಾಪ್ತಿಯ ಎಲ್ಲ ಗ್ರಾಮಗಳು ಅರಣ್ಯ ಪ್ರದೇಶದಿಂದಲೇ ಸುತ್ತುವರೆದಿವೆ. ಅರಣ್ಯ ವಲಯವನ್ನು ಹೊರತುಪಡಿಸಿ ಬೇರೆ ಸ್ಥಳಗಳಲ್ಲಿ ಕೆಲಸ ಸ್ಥಳಾವಕಾಶ ಇಲ್ಲದಿರುವುದರಿಂದ ಅರಣ್ಯ ಪ್ರದೇಶದಲ್ಲಿ ಟ್ರಂಚ್, ಸಿಪಿಟಿ ಸೇರಿ ಇನ್ನಿತರೆ ಕಾಮಗಾರಿಗಳಲ್ಲಿ ಕೆಲಸ ನಿರ್ವಹಿಸಲು ಅವಕಾಶ ನೀಡುವಂತೆ ಗ್ರಾಪಂ ಕಚೇರಿಯ ಮೂಲಕ ಅರಣ್ಯ ಇಲಾಖೆಗೆ ಮನವಿ ಸಲ್ಲಿಸಲಾಗಿದೆ. ಮನವಿ ಸಲ್ಲಿಸಿ ದಿನಗಳೇ ಗತಿಸಿದರೂ ಸಂಬಂಧಿಸಿದವರು ಸ್ಪಂದಿಸುತ್ತಿಲ್ಲ. ಇದರಿಂದ ನರೇಗಾ ಯೋಜನೆಯನ್ನೇ ನಂಬಿರುವ ನೂರಾರು ಕಾರ್ಮಿಕರ ಜೀವನನಿರ್ವಹಣೆಗೆ ತೊಂದರೆ ಉಂಟಾಗಿದೆ’ ಎಂದರು.

ಧರಣಿಯ ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಆರ್.ಎಫ್.ಒ ಅವರೊಡನೆ ಚರ್ಚಿಸಿದ ಧರಣಿ ನಿರತರು ಅರಣ್ಯ ಪ್ರದೇಶದಲ್ಲಿ ಕೆಲಸ ನೀಡುವಂತೆ ಕೂಲಿ ಬೇಡಿಕೆ ಮನವಿಯನ್ನು ಸಲ್ಲಿಸಿದರು. ಕೂಲಿಕಾರರಿಂದ ಬೇಡಿಕೆ ಸ್ವೀಕರಿಸಿ ಮಾತನಾಡಿದ ಆರ್.ಎಫ್.ಒ ಪ್ರಶಾಂತ, ಈ ಬಗ್ಗೆ ಪರಿಶೀಲಿಸಿ ನಾಲ್ಕು ದಿನಗಳಲ್ಲಿ ಎಲ್ಲ ಕೂಲಿಕಾರರಿಗೆ ಅರಣ್ಯ ಪ್ರದೇಶದಲ್ಲಿ ಕೆಲಸ ನೀಡುವುದಾಗಿ ಭರವಸೆ ನೀಡಿದರು. ಬಳಿಕ ಕೂಲಿಕಾರರು ಧರಣಿ ಹಿಂಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.