ಬೈಲಹೊಂಗಲ: ‘ಬೆಳಗಾವಿ ಸಮಗ್ರ ಅಭಿವೃದ್ಧಿಯ ಕನಸು ಸಾಕಾರಗೊಳ್ಳಲು ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳಕರ ಅವರನ್ನು ಈ ಬಾರಿಯ ಚುನಾವಣೆಯಲ್ಲಿ ಗೆಲ್ಲಿಸಿ’ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳಕರ ಹೇಳಿದರು.
ಮತಕ್ಷೇತ್ರದ ಮುರಗೋಡ, ಮಲ್ಲಮ್ಮನ ಬೆಳವಡಿ ಹಾಗೂ ಪಟ್ಟಣದ ರುದ್ರಾಕ್ಷಿಮಠದ ಗಲ್ಲಿಯ ನಯಾಮೊಹಲ್ಲದಲ್ಲಿ ಗುರುವಾರ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳಕರ ಪರ ಪ್ರಚಾರ ನಡೆಸಿ ಮಾತನಾಡಿದರು.
‘ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ಕೊಡುಗೆ ಬೆಳಗಾವಿ ಜಿಲ್ಲೆಗೆ ಏನಿದೆ ಎನ್ನುವುದನ್ನು ಮತದಾರರು ಗಮನಿಸಬೇಕು. ಬಿಜೆಪಿ ಜನರಿಗೆ ಬರೀ ಸುಳ್ಳಿನ ಭರವಸೆ ನೀಡಿ ಜನರ ದಿಕ್ಕು ತಪ್ಪಿಸುತ್ತಿದೆ. ಕಾಂಗ್ರೆಸ್ ಪಕ್ಷ ದೇಶದ ಜನರ ಒಳಿತಿಗೆ ಹಲವು ಜನಪರ ಯೋಜನೆಗಳನ್ನು ಹಾಕಿಕೊಂಡಿದೆ. ಈಗಾಗಲೇ ಗ್ಯಾರಂಟಿ ಯೋಜನೆಗಳನ್ನು ಕೊಡುಗೆಯಾಗಿ ನೀಡಿ ಜನರ ವಿಶ್ವಾಸ ಗಳಿಸಿದೆ’ ಎಂದರು.
ಶಾಸಕ ಮಹಾಂತೇಶ ಕೌಜಲಗಿ ಮಾತನಾಡಿ, ‘ವಿದ್ಯಾವಂತ ಪಧವೀಧರ ಆಗಿರುವ ಮೃಣಾಲ್ ಹೆಬ್ಬಾಳಕರ ಅವರನ್ನು ಬೆಂಬಲಿಸಿ ಜನರ ಸೇವೆಗೆ ಅವಕಾಶ ಮಾಡಿಕೊಡಬೇಕು’ ಎಂದು ಹೇಳಿದರು.
ಮುರಗೋಡ ಬ್ಲಾಕ್ ಘಟಕ ಅಧ್ಯಕ್ಷ ಶಿವನಗೌಡ ಪಾಟೀಲ, ಬೈಲಹೊಂಗಲ ಬ್ಲಾಕ್ ಘಟಕ ಅಧ್ಯಕ್ಷ ಶಿವರುದ್ರಪ್ಪ ಹಟ್ಟಿಹೊಳಿ, ಮುಖಂಡರಾದ ಮಹಾಂತೇಶ ಮತ್ತಿಕೊಪ್ಪ, ಬಾಬಾಸಾಹೇಬ ದೇಸಾಯಿ, ಗೀತಾತಾಯಿ ದೇಸಾಯಿ ಸೇರಿದಂತೆ ಅನೇಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.