ಕಬ್ಬೂರ: ಪಟ್ಟಣದ ಹೊರವಲಯದ ಶೆಲಿಯವ್ವ ದೇವಿ ದೇವಸ್ಥಾನ ಆವರಣದಲ್ಲಿರುವ ಕೆರೆಯು ಬರ ಪರಿಸ್ಥಿತಿಯಲ್ಲೂ ಜೀವಜಲದಿಂದ ಮೈದುಂಬಿಕೊಂಡು ಕಂಗೊಳಿಸುತ್ತಿದೆ. ಅದು ಎಂದೂ ಬತ್ತಿದ ಉದಾಹರಣೆ ಇಲ್ಲ.
ಈ ದೇವಸ್ಥಾನ ಭಕ್ತರು ಬೇಡಿದ್ದನ್ನು ನೀಡುವ ಶ್ರದ್ಧಾಕೇಂದ್ರವಾಗಿದೆ. ರಾಜ್ಯ ಹಾಗೂ ಹೊರರಾಜ್ಯಗಳಿಂದಲೂ ಭಕ್ತರು ಆಗಮಿಸುತ್ತಾರೆ. ಚರ್ಮಕ್ಕೆ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿರುವವರು ದೇವಿಯಲ್ಲಿ ಪ್ರಾರ್ಥಿಸಿ, ಕೆರೆಯಲ್ಲಿ ಸ್ನಾನ ಮಾಡುತ್ತಾರೆ. ಇದರಿಂದ ಚರ್ಮರೋಗ ದೂರವಾಗುತ್ತದೆ ಎಂಬ ನಂಬಿಕೆ ಅವರದ್ದು.
ಪ್ರತಿವರ್ಷ ಮಳೆಗಾಲದಲ್ಲಿ ಅಪಾರ ಪ್ರಮಾಣದಲ್ಲಿ ಈ ಕೆರೆಯೊಡಲಿಗೆ ನೀರು ಹರಿದುಬರುತ್ತದೆ. ಇತ್ತೀಚೆಗೆ ಸುರಿದ ಮಳೆಯಿಂದಲೂ ಕೆರೆ ಮೈದುಂಬಿಕೊಂಡು ಕಂಗೊಳಿಸುತ್ತಿದೆ. ಇದರಿಂದ ಸುತ್ತಲಿನ ಜಲಮೂಲಗಳಲ್ಲೂ ಅಂತರ್ಜಲ ಮಟ್ಟ ಹೆಚ್ಚಿದೆ.
ಚಿಕ್ಕೋಡಿ, ನಿಪ್ಪಾಣಿ ತಾಲ್ಲೂಕುಗಳ ರೈತರು ಕುರಿಗಳನ್ನು ಮೇಯಿಸುತ್ತ, ಇದೇ ಮಾರ್ಗದಲ್ಲಿ ಸಾಗುತ್ತಾರೆ. ಬೇಸಿಗೆಯಲ್ಲಿ ಹಲವಾರು ಕುರಿಗಳ ದಾಹವನ್ನು ಈ ಕೆರೆ ನೀಗಿಸುತ್ತಿದೆ. ಕುರಿಗಳಷ್ಟೇ ಅಲ್ಲದೆ; ಜಾನುವಾರುಗಳು ಇಲ್ಲಿಯೇ ನೀರು ಕುಡಿಯುತ್ತವೆ.
‘ಎಂಥ ಬರಗಾಲವಿದ್ದರೂ ಈ ಕೆರೆ ಬತ್ತಿದ್ದನ್ನೇ ನಾವು ಕಂಡಿಲ್ಲ. ಭಕ್ತರಿಗಷ್ಟೇ ಅಲ್ಲದೆ ರೈತರು ಮತ್ತು ಕುರಿಗಾಹಿಗಳಿಗೂ ಇದರಿಂದ ಅನುಕೂಲವಾಗಿದೆ’ ಎಂದು ಸ್ಥಳೀಯ ನಿವಾಸಿ ಶ್ರೀಶೈಲ ಪೂಜೇರಿ ‘ಪ್ರಜಾವಾಣಿ’ಗೆ ತಿಳಿಸಿದರು.
–ಶೀತಲ್ ಜಕಾತಿ
ಪವಾಡವೋ ಪ್ರಾಕೃತಿಕ ವಿಸ್ಮಯವೋ ಗೊತ್ತಿಲ್ಲ. ಈ ಕೆರೆ ಒಮ್ಮೆಯೂ ಬರಿದಾಗಿಲ್ಲ. ಈ ಕೆರೆ ಸೌಂದರ್ಯೀಕರಣ ಮಾಡುವ ಜತೆಗೆ ಉದ್ಯಾನ ನಿರ್ಮಿಸಿ ಪ್ರವಾಸಿಗರನ್ನು ಸೆಳೆಯುವ ಕೆಲಸವಾಗಬೇಕು
-ರಮೇಶ ಖೋತ ಸ್ಥಳೀಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.