ಸವದತ್ತಿ(ಬೆಳಗಾವಿ ಜಿಲ್ಲೆ): ವಿವಾಹಿತ ಮಹಿಳೆಯನ್ನು ಮತಾಂತರ ಮಾಡಲು ಯತ್ನಿಸಿದ ಘಟನೆ ತಾಲ್ಲೂಕಿನ ಮುನವಳ್ಳಿಯಲ್ಲಿ ಇತ್ತೀಚೆಗೆ ನಡೆದಿದೆ. ಈ ಘಟನೆ ಸಂಬಂಧ ಆರೋಪಿ ರಫೀಕ್ ಬೇಪಾರಿ ಹಾಗೂ ಅವರ ಪತ್ನಿಯನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ.
‘ಮುನವಳ್ಳಿಯ ಸಿದ್ಧೇಶ್ವರ ನಗರದಲ್ಲಿ ಮಹಿಳೆಯೊಬ್ಬರು ಕಿರಾಣಿ ಅಂಗಡಿ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದರು. ಅವರ ಪತಿ ಇಲ್ಲದಿರುವ ವೇಳೆ, ರಫೀಕ್ ಬಂದು ಅಸಭ್ಯವಾಗಿ ವರ್ತಿಸುತ್ತಿದ್ದ. ಇದರಿಂದ ಮಹಿಳೆ ಆಕ್ರೋಶಗೊಂಡಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ.
‘ಮೊಬೈಲ್ ಮೂಲಕ ನನ್ನೊಂದಿಗೆ ಸಂಪರ್ಕ ಸಾಧಿಸಿದ ರಫೀಕ್, ವಿವಿಧ ಆಮಿಷವೊಡ್ಡಿ ಪುಸಲಾಯಿಸಿದ್ದ. ನನ್ನೊಂದಿಗೆ ಸಲುಗೆ ಬೆಳಸಿದ ವಿಷಯ ಪತಿಗೆ ತಿಳಿಯಿತು. ಆಗ ಪತಿ ನನ್ನನ್ನು ಮನೆಯಿಂದ ಹೊರಹಾಕಿದ್ದರು. 11 ತಿಂಗಳುಗಳಿಂದ ರಫೀಕ್ ಜತೆಗೆ ವಾಸಿಸುತ್ತಿದ್ದೆ. ಬೆಳಗಾವಿಯ ಶಾಹು ನಗರದಲ್ಲಿರುವ ಹಾಸ್ಟೆಲ್ನಲ್ಲಿ ಆತ ನನ್ನನ್ನು ಇರಿಸಿದ್ದ. ಕೆಲಸ ಕೊಡಿಸುವುದಾಗಿ ನಂಬಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದ. ಆತನ ಜತೆಗೆ ಐವರು ಸೇರಿಕೊಂಡು ನನ್ನ ಖಾಸಗಿ ಪೋಟೊ ಸೆರೆಹಿಡಿದು, ಮಾನಸಿಕ ಕಿರುಕುಳ ನೀಡುತ್ತಿದ್ದರು. ಹಿಂದೂ ಧರ್ಮದಿಂದ ಮುಸ್ಲಿಂ ಧರ್ಮಕ್ಕೆ ಮತಾಂತರಗೊಳ್ಳುವಂತೆ ಬೆದರಿಕೆ ಹಾಕಿ ಪೀಡಿಸುತ್ತಿದ್ದರು. ಹಣೆಗೆ ಕುಂಕುಮ ಹಚ್ಚಿಕೊಳ್ಳುವುದನ್ನು ನಿಲ್ಲಿಸಿ, ಬುರ್ಖಾ ಧರಿಸುವಂತೆ ಮತ್ತು ನಿತ್ಯ ಐದು ಬಾರಿ ಪ್ರಾರ್ಥನೆ ಮಾಡುವಂತೆ ಒತ್ತಡ ಹೇರುತ್ತಿದ್ದರು. ನನಗೆ ಒತ್ತಾಯಪೂರ್ವಕವಾಗಿ ಬುರ್ಖಾ ಧರಿಸಿದ್ದರು’ ಎಂದು ಸಂತ್ರಸ್ತೆ ಸವದತ್ತಿ ಪೊಲೀಸ್ ಠಾಣೆಯಲ್ಲಿ ಏಪ್ರಿಲ್ 18ರಂದು ದೂರು ದಾಖಲಿಸಿದ್ದಾರೆ.
‘ನನ್ನ ಮದುವೆಯಾಗಿ 10 ವರ್ಷವಾಯಿತು. ನನ್ನ ಸಂಸಾರ ನೆಮ್ಮದಿಯಿಂದ ಸಾಗುತ್ತಿತ್ತು. ಆದರೆ,ರಫೀಕ್ ನನ್ನ ದಾರಿ ತಪ್ಪಿಸಿದ್ದಾನೆ. ನನ್ನ ಪತಿ, ಮಕ್ಕಳಿಗೆ ಜೀವ ಬೆದರಿಕೆ ಹಾಕಿದ ಆತ, ಹೊರಜಗತ್ತಿನ ಸಂಪರ್ಕ ಕಡಿತಗೊಳಿಸಿ ಕೋಣೆಯಲ್ಲಿ ಕೂಡಿಹಾಕಿ ಕಿರುಕುಳ ಕೊಟ್ಟಿದ್ದಾನೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಎಲ್ಲ ಆಯಾಮಗಳಲ್ಲಿ ತನಿಖೆ: ಎಸ್ಪಿ
‘ಮತಾಂತರಕ್ಕೆ ಯತ್ನ ಪ್ರಕರಣಕ್ಕೆ ಸಂಬಂಧಿಸಿ, ರಫೀಕ್ ಬೇಪಾರಿ, ಆದಿಲ್, ಸೋಹೆಲ್, ಮಕ್ತುಮ್, ಉಮರ್ ಸೇರಿದಂತೆ ಸಂತ್ರಸ್ತೆ ಏಳು ಮಂದಿ ವಿರುದ್ಧ ಮಹಿಳೆ ದೂರು ದಾಖಲಿಸಿದ್ದಾರೆ. ಈಗಾಗಲೇ ಇಬ್ಬರು ಆರೋಪಿಗಳನ್ನು ಬಂಧಿಸಿದ್ದೇವೆ. ಎಲ್ಲ ಆಯಾಮಗಳಲ್ಲಿ ತನಿಖೆ ನಡೆಯುತ್ತಿದ್ದು, ಈ ಪ್ರಕರಣದಲ್ಲಿ ಭಾಗಿಯಾದ ಎಲ್ಲರನ್ನೂ ಬಂಧಿಸಲಾಗುವುದು’ ಎಂದು ಬೆಳಗಾವಿ ಎಸ್ಪಿ ಡಾ.ಭೀಮಾಶಂಕರ ಗುಳೇದ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.