ಬೆಳಗಾವಿ: ಕೇಂದ್ರ ಮತ್ತು ರಾಜ್ಯ ಮಟ್ಟದ ಇಬ್ಬರು ಸಿಂಗ್ಗಳು, ಮಹಾನುಭಾವರು ಸೇರಿಕೊಂಡು ಕರ್ನಾಟಕದಲ್ಲಿ ಪಕ್ಷವನ್ನು ಹಾಳುಗೆಡವಿದರು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ಸುದ್ದಿಗಾರರ ಜತೆಗೆ ಬುಧವಾರ ಮಾತನಾಡಿದ ಅವರು, ಪಕ್ಷದ ನಾಯಕರ ವಿರುದ್ಧ ಮತ್ತೊಮ್ಮೆ ಹರಿಹಾಯ್ದರು. ‘ನನ್ನ ಬಾಯಿ ಮುಚ್ಚಿಸಲು ಯಾರಿಂದಲೂ ಸಾಧ್ಯವಿಲ್ಲ’ ಎಂದರು.
‘ಪಕ್ಷ ಹಾಳು ಮಾಡಿದವರು ಯಾರು ಎಂಬ ಬಗ್ಗೆ ಎಲ್ಲ ಮಾಹಿತಿಯನ್ನೂ ವರಿಷ್ಠರ ಗಮನಕ್ಕೆ ತಂದಿದ್ದೇನೆ. ದೆಹಲಿಗೆ ಬರಲು ಕರೆ ಮಾಡುವುದಾಗಿ ಅವರು ಹೇಳಿದ್ದಾರೆ. ಕರೆ ಬಂದ ಕೂಡಲೇ ಹೋಗಿ ಎಲ್ಲವನ್ನೂ ವಿವರಿಸುತ್ತೇನೆ. ರಮೇಶ ಜಾರಕಿಹೊಳಿ ಅವರಿಗೆ ಕರೆ ಬರಬಹುದು. ಬಂದರೆ ಒಟ್ಟಿಗೆ ಹೋಗುತ್ತೇವೆ’ ಎಂದರು.
ಉಪ ನಾಯಕಗೆ ಏನು ಕೆಲಸ?
‘ಅರವಿಂದ ಬೆಲ್ಲದ ಅವರನ್ನು ವಿರೋಧ ಪಕ್ಷದ ಉಪ ನಾಯಕರಾಗಿ ಮಾಡುತ್ತಾರಂತಲ್ಲ’ ಎಂಬ ಬಗ್ಗೆ ಪ್ರತಿಕ್ರಿಯಿಸಿದ ಅವರು, ಎಲ್ಲ ತೀರ್ಮಾನಗಳನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರು, ಪ್ರತಿಪಕ್ಷ ನಾಯಕರೇ ತೆಗೆದುಕೊಳ್ಳುತ್ತಾರೆ. ಹಾಗಿರುವಾಗ ಉಪ ನಾಯಕನಿಗೆ ಏನು ಕೆಲಸ? ಉಪ ಸಭಾಧ್ಯಕ್ಷರ ಸ್ಥಾನವಿದ್ದಂತೆ. ಸಭಾಧ್ಯಕ್ಷರು ತಮ್ಮ ಜಾಗದಲ್ಲಿ ಕೂರಲು ಅವರಿಗೆ ಅವಕಾಶವನ್ನೇ ಕೊಡುವುದಿಲ್ಲ. ಮಂಗಳವಾರ ಕೇವಲ ಅರ್ಧ ಗಂಟೆ ಕೊಟ್ಟರು. ಉಪ ನಾಯಕನಿಗೂ ಸಮಾಜದಲ್ಲಿ ಗೌರವ ಏನೂ ಸಿಗುವುದಿಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.