ADVERTISEMENT

‘ವಸು ಮೇಡಂ’ಗೆ ನುಡಿನಮನ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2015, 19:30 IST
Last Updated 11 ಫೆಬ್ರುವರಿ 2015, 19:30 IST

ಬೆಂಗಳೂರು: ‘ಮಹಿಳೆಯರು ಹಾಗೂ ತಳ ಸಮುದಾಯದ ಸಂಕಟಗಳನ್ನು    ನಾವು ಅರಿತಿದ್ದರೂ ಗೊತ್ತಿಲ್ಲದವರಂತೆ ನಟಿಸುತ್ತೇವೆ. ಆದರೆ, ವಸು ಮಳಲಿ ಅವರು ಶೋಷಿತ ವರ್ಗದ ಪರವಾಗಿ ನಿರಂತರ ಹೋರಾಟ ಮಾಡಿದ್ದರು’ ಎಂದು ಲೇಖಕ ಡಾ.ಎಲ್‌.ಎನ್‌.  ಮುಕುಂದರಾಜ್‌ ನೆನಪಿಸಿಕೊಂಡರು.

ಸಾಹಿತ್ಯಾಸಕ್ತರ ಕೂಟ ‘ಕಾಜಾಣ’ ವತಿಯಿಂದ ನಾಟಕ ಅಕಾಡೆಮಿಯ ಚಾವಣಿಯಲ್ಲಿ ಬುಧವಾರ ಆಯೋಜಿಸಿದ್ದ ‘ಡಾ.ವಸು ಮಳಲಿ (ವಸು ಮೇಡಂ) ನುಡಿ ನಮನ ಕಾರ್ಯಕ್ರಮ’ದಲ್ಲಿ ಅವರು ಮಾತನಾಡಿದರು.

‘ನಮ್ಮಲ್ಲಿ ನಿಜವಾದ ಚರಿತ್ರೆಯನ್ನು ಮರೆಮಾಚಿ ಹೊಸ ಪುರಾಣವನ್ನು ಸೃಷ್ಟಿಸುವ ಪರಿಪಾಠ ಹೆಚ್ಚಾಗುತ್ತಿದೆ. ಇದರಿಂದ ಜನರಿಗೆ ತಪ್ಪು ಸಂದೇಶ ಹೋಗುತ್ತದೆ. ವಸು ಅವರು ನಿಜವಾದ ಚರಿತ್ರೆಯನ್ನು ಜನರಿಗೆ ಮುಟ್ಟಿಸುವ ಕೆಲಸ ಮಾಡಿದರು. ಸಾಮಾನ್ಯ ಜನರಿಗೆ ಅರ್ಥವಾಗುವ ಹಾಗೆ ವಿಷಯ ಮಂಡಿಸುತ್ತಿದ್ದರು’ ಎಂದರು.

ಸಾಹಿತ್ಯ ಅಕಾಡೆಮಿಯ ಅಧ್ಯಕ್ಷೆ ಮಾಲತಿ ಪಟ್ಟಣಶೆಟ್ಟಿ ಮಾತನಾಡಿ, ‘ವಸು ಅವರು ಜ್ಞಾನದ ನಿಧಿ. ತಳಸ್ಪರ್ಶಿ ಸಂಶೋಧನೆ ನಡೆಸಿದ್ದರು. ಈಗಲೂ ಕಣ್ಣ ಮುಂದೆ ಇದ್ದಾರೆ ಎಂಬ ಭಾವ ಮೂಡುತ್ತಿದೆ’ ಎಂದರು.

ಸಂಸ್ಕೃತಿ ಚಿಂತಕ ಡಾ.ಡೊಮಿನಿಕ್‌ ಮಾತನಾಡಿ, ‘ವಸು ಅವರು ಮಹಿಳೆಯರು, ದಲಿತರು ಹಾಗೂ ಹಿಂದುಳಿದವರ ಪರವಾಗಿ ಸದಾ ಧ್ವನಿ ಎತ್ತಿದ್ದರು. ಹೋರಾಟಗಳಲ್ಲಿ ಮಂಚೂಣಿಯಲ್ಲಿದ್ದರು. ಅವರು ಪ್ರಖರ ಚಿಂತಕಿ’ ಎಂದರು.

ಲೇಖಕ ಆರ್‌.ಜಿ.ಹಳ್ಳಿ ನಾಗರಾಜು ಮಾತನಾಡಿ, ‘ಅವರು ಅತ್ಯುತ್ತಮ ವಾಗ್ಮಿ. ಅನಾರೋಗ್ಯದ ನಡುವೆಯೂ ಸಾಹಿತ್ಯ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು. ಯುವಜನರಿಗೆ ಸ್ಫೂರ್ತಿ ಆಗಿದ್ದರು’ ಎಂದರು. ಲೇಖಕ ಸಿ.ಜಿ.ಲಕ್ಷ್ಮಿಪತಿ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.