ADVERTISEMENT

ಗ್ರಾಮಗಳ ಅಭಿವೃದ್ಧಿಗೆ ರೋಟರಿಯಿಂದ ₹ 100 ಕೋಟಿ: ಎನ್.ಎಸ್. ಮಹದೇವ ಪ್ರಸಾದ್

​ಪ್ರಜಾವಾಣಿ ವಾರ್ತೆ
Published 1 ಜುಲೈ 2024, 14:40 IST
Last Updated 1 ಜುಲೈ 2024, 14:40 IST
ರೋಟರಿ ಡಿಸ್ಟ್ರಿಕ್ 3192 ನೂತನ ಗವರ್ನರ್‌ ಎನ್.ಎಸ್. ಮಹದೇವ ಪ್ರಸಾದ್ ಅವರಿಗೆ ಅಂತರರಾಷ್ಟ್ರೀಯ ನಿಯೋಜಿತ ನಿರ್ದೇಶಕ ಕೆ.ಪಿ. ನಾಗೇಶ್ ಪ್ರಮಾಣವಚನ ಬೋಧಿಸಿದರು. 
ರೋಟರಿ ಡಿಸ್ಟ್ರಿಕ್ 3192 ನೂತನ ಗವರ್ನರ್‌ ಎನ್.ಎಸ್. ಮಹದೇವ ಪ್ರಸಾದ್ ಅವರಿಗೆ ಅಂತರರಾಷ್ಟ್ರೀಯ ನಿಯೋಜಿತ ನಿರ್ದೇಶಕ ಕೆ.ಪಿ. ನಾಗೇಶ್ ಪ್ರಮಾಣವಚನ ಬೋಧಿಸಿದರು.    

ಬೆಂಗಳೂರು: ‘ಗ್ರಾಮಗಳ ಅಭಿವೃದ್ಧಿಗಾಗಿ ರೋಟರಿ ಸಂಸ್ಥೆಗಳು ₹ 100 ಕೋಟಿ ವೆಚ್ಚದಲ್ಲಿ ಶಿಕ್ಷಣ, ಆರೋಗ್ಯ, ಕುಡಿಯುವ ನೀರಿನ ವ್ಯವಸ್ಥೆ ಮಾಡುತ್ತಿವೆ’ ಎಂದು ರೋಟರಿ ಡಿಸ್ಟ್ರಿಕ್ಟ್‌ 3192ರ ಗವರ್ನರ್‌ ಎನ್.ಎಸ್. ಮಹದೇವ ಪ್ರಸಾದ್ ತಿಳಿಸಿದರು.

2024-2025 ನೇ ಸಾಲಿನ ಗವರ್ನರ್‌ ಆಗಿ ಪ್ರಮಾಣ ವಚನ ಸ್ವೀಕರಿಸಿ ಅವರು ಮಾತನಾಡಿದರು.

ಜನರಿಗೆ, ವನ್ಯಜೀವಿಗಳಿಗೆ ಬೇಸಿಗೆಯಲ್ಲಿ ಜಲಚೇತನ ಯೋಜನೆಯಡಿ ಕುಡಿಯುವ ನೀರಿನ ವ್ಯವಸ್ಥೆ, 9–14 ವರ್ಷ ವಯಸ್ಸಿನ ಮಕ್ಕಳಿಗೆ ರೋಗನಿರೋಧಕ ಚುಚ್ಚುಮದ್ದು ನೀಡುವುದು ಸೇರಿ ಹಲವು ಯೋಜನೆಗಳನ್ನು ರೂಪಿಸಲಾಗಿದೆ ಎಂದು ವಿವರಿಸಿದರು.

ADVERTISEMENT

‘ರೋಟರಿ ಸಂಸ್ಥೆಗಳು ಗ್ರಾಮಗಳ ಅಭಿವೃದ್ಧಿಗಾಗಿ ಪ್ರತಿ ಜಿಲ್ಲೆಗೆ ಕೋಟಿ ರೂಪಾಯಿಗೂ ಮೀರಿ ವೆಚ್ಚ ಮಾಡುವ ಜೊತೆಗೆ ಅರಣ್ಯ ನಾಶ ತಡೆಗೂ ಯೋಜನೆ ರೂಪಿಸಲಾಗುತ್ತಿದೆ. ಸಮಾಜ ಕಲ್ಯಾಣ ಇಲಾಖೆ ಮತ್ತು ವಸತಿ ಶಿಕ್ಷಣ ಸಂಸ್ಥೆಗಳ ವಸತಿ ಶಾಲೆಗಳ ವಿದ್ಯಾರ್ಥಿಗಳಿಗಾಗಿ ₹ 2.37 ಕೋಟಿ ವೆಚ್ಚದಲ್ಲಿ ಸಮಗ್ರ ವ್ಯಕ್ತಿತ್ವ ಅಭಿವೃದ್ಧಿ ಕಾರ್ಯಕ್ರಮ ರೂಪಿಸಲಾಗಿದೆ. ಆ ವಿದ್ಯಾರ್ಥಿಗಳ ದೈಹಿಕ, ಸಾಮಾಜಿಕ, ಬೌದ್ಧಿಕ ಬೆಳವಣಿಗೆಗೆ ಪೂರಕವಾಗಿ ರೂಪಿಸಿರುವ ಯೋಜನೆಗೆ ರಾಜ್ಯ ಸರ್ಕಾರ ಅನುಮತಿ ನೀಡಿದೆ ಎಂದರು.

ನಿಯೋಜಿತ ರೋಟರಿ ಅಂತರರಾಷ್ಟ್ರೀಯ ನಿರ್ದೇಶಕ ಕೆ.ಪಿ. ನಾಗೇಶ್, 2023-24ನೇ ಸಾಲಿನ ಗವರ್ನರ್‌ ಬಿ. ಶ್ರೀನಿವಾಸಮೂರ್ತಿ, ರೋಟರಿ ಜಿಲ್ಲೆ 3192ರ ನೂತನ ಕಾರ್ಯದರ್ಶಿ ಕೆ.ಟಿ.ನಿರಂಜನ್, ಅಂತರರಾಷ್ಟ್ರೀಯ ನಿರ್ದೇಶಕ ಟಿ.ಎನ್. ಸುಬ್ರಹ್ಮಣ್ಯಂ ಭಾಗವಹಿಸಿದ್ದರು. ಕಾರ್ಯದರ್ಶಿಗಳಾದ ಬಿಳೆಗಿರಿ ಶಿವಕುಮಾರ್, ರಾಜರಾಮ್, ರಾಜೇಶ್ವರಿ, ಪ್ರಚಾರ ಸಮಿತಿ ನಿರ್ದೇಶಕ ಎ.ಸಿ.ಎನ್. ಮೂರ್ತಿ ಪ್ರಮಾಣವಚನ ಸ್ವೀಕರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.