ಬೆಂಗಳೂರು: ನಗರದಲ್ಲಿ ಹವಾಮಾನ ಕ್ರಿಯಾಯೋಜನೆಯನ್ನು ಕಾರ್ಯಗತಗೊಳಿಸಲು ಹವಾಮಾನ ಕ್ರಿಯಾ ಕೋಶಕ್ಕೆ (ಸಿಎಸಿ) 500 ‘ಸ್ನೇಹಿತರು’ ಕೈಜೋಡಿಸಿದ್ದಾರೆ.
ಹವಾಮಾನಕ್ಕೆ ಸಂಬಂಧಿಸಿದಂತೆ ನಗರದಲ್ಲಿ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದ್ದು, ನಾಗರಿಕರು, ನಿವಾಸಿ ಕಲ್ಯಾಣ ಸಂಘಗಳು, ಸಾಮಾಜಿಕ, ಪರಿಸರ ಸಂಸ್ಥೆಗಳು, ಶೈಕ್ಷಣಿಕ ಸಂಸ್ಥೆಗಳೂ ಭಾಗವಹಿಸಬಹುದು. bit.ly/friendsofcac ಲಿಂಕ್ ಮೂಲಕ ನೋಂದಣಿ ಮಾಡಿಕೊಳ್ಳಬಹುದು.
‘ಇದುವರೆಗೂ 500 ‘ಸಿಎಸಿ ಸ್ನೇಹಿತರು’ ಕೈಜೋಡಿಸಿದ್ದಾರೆ ಎಂದು ಅರಣ್ಯ, ಪರಿಸರ ಮತ್ತು ಹವಾಮಾನ ಬದಲಾವಣೆ ನಿರ್ವಹಣೆ ವಿಭಾಗದ ವಿಶೇಷ ಆಯುಕ್ತೆ ಪ್ರೀತಿ ಗೆಹ್ಲೋಟ್ ತಿಳಿಸಿದ್ದಾರೆ.
ಬೆಂಗಳೂರು ವಿಶ್ವದಲ್ಲಿ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಒಂದಾಗಿದ್ದು, ಹಲವು ಬದಲಾವಣೆ ತರಲು ಒತ್ತು ನೀಡಲಾಗಿದೆ. ಹಸಿರು ಮನೆ ಅನಿಲ ಹೊರಸೂಸುವಿಕೆ ತಗ್ಗಿಸಲು ಮತ್ತು ಹವಾಮಾನ ವೈಪರೀತ್ಯದಿಂದ ಉಂಟಾಗುವ ಅಪಾಯಗಳಿಗೆ ನಗರದ ಸ್ಥಿತಿಸ್ಥಾಪಕತ್ವ ನಿರ್ಮಿಸಲು ಬೆಂಗಳೂರು ಹವಾಮಾನ ಕ್ರಿಯೆ ಮತ್ತು ಸ್ಥಿತಿಸ್ಥಾಪಕತ್ವ ಯೋಜನೆಯಿಂದ (ಬಿಸಿಎಪಿ) ಸಮಗ್ರ ವಿಧಾನವನ್ನು ಪ್ರಾರಂಭಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಏಳು ಫೆಲೊಗಳು: ಹೊಸ ಆಲೋಚನೆ, ಕೌಶಲ ಹಾಗೂ ನಾವೀನ್ಯಗಳಿಂದ ಹವಾಮಾನ ಬದಲಾವಣೆ ಹಾಗೂ ನಾಗರಿಕರ ಸಮಸ್ಯೆಗಳನ್ನು ಪರಿಹರಿಸಲು ಹವಾಮಾನ ಕ್ರಿಯಾ ಕೋಶಕ್ಕೆ ಸಹಾಯ ಮಾಡಲು ಏಳು ಫೆಲೊಗಳನ್ನು ಆಯ್ಕೆ ಮಾಡಲಾಗಿದೆ. ಲಿಖಿತ ಪರೀಕ್ಷೆ, ಗುಂಪು ಚರ್ಚೆ ಮತ್ತು ಸಂದರ್ಶನ ಸೇರಿದಂತೆ ಸ್ಪರ್ಧಾತ್ಮಕ ಮತ್ತು ಪಾರದರ್ಶಕ ಪ್ರಕ್ರಿಯೆಯಲ್ಲಿ ಇವರನ್ನು ಆಯ್ಕೆ ಮಾಡಲಾಗಿದ್ವು, ನವೆಂಬರ್ನಿಂದ ಕಾರ್ಯ ನಿರ್ವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಹವಾಮಾನ ಕ್ರಿಯಾ ಕೋಶಕ್ಕೆ ಪ್ರತ್ಯೇಕ ವೆಬ್ಸೈಟ್ (https://apps.bbmpgov.in/bcap/) ರೂಪಿಸಿದ್ದು, ಸಂಪನ್ಮೂಲ, ಸಭೆ ವಿವರ, ಚಟುವಟಿಕೆಗಳು ಸೇರಿದಂತೆ ಹೆಚ್ಚಿನ ಮಾಹಿತಿಯನ್ನು ಒದಗಿಸುತ್ತದೆ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.