ಬೆಂಗಳೂರು: ಮಂಡ್ಯದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ‘ಮಹಾಪೋಷಕ’ರಾಗಿ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ನಿಯೋಜನೆಗೊಂಡಿದ್ದಾರೆ.
ಡಿಸೆಂಬರ್ 20, 21 ಹಾಗೂ 22ರಂದು ಸಮ್ಮೇಳನ ನಡೆಯಲಿದೆ. ಈ ಸಂಬಂಧ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ ಹಾಗೂ ಪದಾಧಿಕಾರಿಗಳು, ಮಂಡ್ಯದ ಜಿಲ್ಲಾಧಿಕಾರಿ ಕುಮಾರ ಅವರನ್ನು ಒಳಗೊಂಡ ನಿಯೋಗವು ನಿರ್ಮಲಾನಂದನಾಥ ಸ್ವಾಮೀಜಿ ಅವರನ್ನು ಭೇಟಿ ಮಾಡಿ, ಸಮ್ಮೇಳನದ ‘ಮಹಾಪೋಷಕ’ರಾಗುವಂತೆ ಮನವಿ ಮಾಡಿಕೊಂಡಿದ್ದರು. ಇದಕ್ಕೆ ಸ್ವಾಮೀಜಿ ಸಮ್ಮತಿ ಸೂಚಿಸಿದ್ದಾರೆ.
‘ಇದು ಕನ್ನಡಿಗರೆಲ್ಲರ ಸಮ್ಮೇಳನ. ನಮ್ಮದು ಕನ್ನಡ ಮಠವಾಗಿದ್ದು, ಭವ್ಯ ಇತಿಹಾಸ ಹೊಂದಿದೆ. ಕನ್ನಡ ನಾಡು-ನುಡಿ-ಸಂಸ್ಕೃತಿಯನ್ನು ಕಾಪಾಡಿಕೊಂಡು ಬಂದಿದೆ. ಇಲ್ಲಿ ನಡೆಯುವ ಕಾರ್ಯಕ್ರಮಗಳು ಕನ್ನಡದ ಅಸ್ಮಿತೆಯನ್ನು ಕಾಪಾಡುವ ಉದ್ದೇಶವನ್ನು ಹೊಂದಿದೆ. ಸಮ್ಮೇಳನಕ್ಕೆ ಬೆನ್ನೆಲುಬಾಗಿ ನಿಲ್ಲಲಾಗುವುದು’ ಎಂದು ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದ್ದಾರೆ.
‘ಮಂಡ್ಯದಲ್ಲಿ 30 ವರ್ಷಗಳ ನಂತರ ಸಮ್ಮೇಳನವನ್ನು ಆಯೋಜಿಸಲಾಗಿದೆ. ಮಂಡ್ಯದ ಜನರು ದೇಶ-ವಿದೇಶಗಳಲ್ಲಿ ನೆಲೆಸಿದ್ದು, ಅವರು ಸಮ್ಮೇಳನದಲ್ಲಿ ಭಾಗಿಯಾಗುವ ಉತ್ಸಾಹವನ್ನು ಹಂಚಿಕೊಂಡಿದ್ದಾರೆ. ಈ ಸಮ್ಮೇಳನದ ‘ಮಹಾಪೋಷಕ’ರಾಗಲು ಸ್ವಾಮೀಜಿ ಒಪ್ಪಿರುವುದರಿಂದ ಸಮ್ಮೇಳನವು ಐತಿಹಾಸಿಕವಾಗಿ ನಡೆಯುವ ವಿಶ್ವಾಸವಿದೆ’ ಎಂದು ಮಹೇಶ ಜೋಶಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.