ಬೆಂಗಳೂರು: ಮದ್ಯ ಸೇವಿಸಿದ ಮತ್ತಿನಲ್ಲಿ ಸ್ನೇಹಿತರ ಮಧ್ಯೆ ನಡೆದ ಜಗಳವು ಪಾನಿಪುರಿ ವ್ಯಾಪಾರಿಯೊಬ್ಬರ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಎಲೆಕ್ಟ್ರಾನಿಕ್ಸ್ ಸಿಟಿ ಬಳಿ ನಡೆದಿದೆ.
ಉತ್ತರ ಪ್ರದೇಶ ಮೂಲದ ಪಾನಿಪುರಿ ವ್ಯಾಪಾರಿ ಸರ್ವೇಶ್ ಕೊಲೆಯಾಗಿದ್ದು, ಸ್ನೇಹಿತರಾದ ಜಾರ್ಖಂಡ್ನ ರಾಹುಲ್ ಕುಮಾರ್ ಮತ್ತು ಸಹದೇವ ತುರಿ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.
‘12 ವರ್ಷಗಳಿಂದ ಪಾನಿಪುರಿ ವ್ಯಾಪಾರ ಮಾಡುತ್ತಿದ್ದ ಸರ್ವೇಶ್, ಭಾನುವಾರ ಕೆಲಸ ಮುಗಿದ ಬಳಿಕ ಕೋನಪ್ಪನ ಅಗ್ರಹಾರ ವೃತ್ತದ ಮದ್ಯದಂಗಡಿಯಲ್ಲಿ ಮದ್ಯ ಖರೀದಿಸಿದ್ದರು. ಅವರೊಂದಿಗೆ ಕಟ್ಟಡ ಕಾರ್ಮಿಕರಾದ ರಾಹುಲ್ ಕುಮಾರ್, ಸಹದೇವ್ ಸಹ ಇದ್ದರು. ಎಲ್ಲರೂ ಒಟ್ಟಿಗೆ ಮದ್ಯ ಸೇವಿಸಿದ್ದರು’ ಎಂದು ಪೊಲೀಸರು ತಿಳಿಸಿದರು.
‘ಕುಡಿದ ಮತ್ತಿನಲ್ಲಿ ಜೋರಾಗಿ ಮಾತನಾಡುತ್ತಿದ್ದ ಸ್ನೇಹಿತರಿಗೆ ಸುಮ್ಮನಿರುವಂತೆ ಸರ್ವೇಶ್ ಹೇಳಿದ್ದರು. ಇದರಿಂದ ಕುಪಿತಗೊಂಡ ಆರೋಪಿಗಳು, ಅವರನ್ನು ಥಳಿಸಿದ್ದಾರೆ. ಬಳಿಕ ಅಲ್ಲಿಂದ ಹೊರಟು ಬಂದ ಸರ್ವೇಶ್ನನ್ನು ಹಿಂಬಾಲಿಸಿಕೊಂಡು ಬಂದು ಪಾರ್ಕಿಂಗ್ ಟೈಲ್ಸ್ನಲ್ಲಿ ತಲೆಗೆ ಹೊಡೆದಿದ್ದಿ, ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟರು’ ಎಂದು ಪೊಲೀಸರು ಹೇಳಿದರು.
‘ಸರ್ವೇಶ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಆರೋಪಿಗಳು ಗಲಾಟೆ ಮಾಡಿರುವ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ’ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.