ADVERTISEMENT

ಕಾಲು ತುಳಿದ ವಿಚಾರಕ್ಕೆ ವ್ಯಕ್ತಿಯ ಕೊಲೆ: ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2024, 15:31 IST
Last Updated 30 ಸೆಪ್ಟೆಂಬರ್ 2024, 15:31 IST
ಮೂರ್ತಿ 
ಮೂರ್ತಿ    

ಬೆಂಗಳೂರು: ಮನೆಯ ಎದುರು ವ್ಯಕ್ತಿಯ ಕಾಲು ತುಳಿದ ವಿಚಾರಕ್ಕೆ ನಡೆದ ಗಲಾಟೆ ವೇಳೆ ವ್ಯಕ್ತಿಯೊಬ್ಬರಿಗೆ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದ್ದು, ಆರೋಪಿಯನ್ನು ಜ್ಞಾನಭಾರತಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಸೊಣ್ಣೇನಹಳ್ಳಿಯ ಮೂರ್ತಿ(52) ಕೊಲೆಯಾದವರು. ಕೊಲೆಯ ಆರೋಪದಡಿ ಕೀರ್ತಿ(27) ಎಂಬುವವರನ್ನು ಬಂಧಿಸಲಾಗಿದೆ.

‘ಮೂರ್ತಿ ಹಾಗೂ ಕೀರ್ತಿ ಅವರು ಅಕ್ಕಪಕ್ಕದ ಮನೆಯ ನಿವಾಸಿಗಳು. ಮೂರ್ತಿ ಅವರು ಹಸು ಸಾಕಾಣಿಕೆ ಮಾಡುತ್ತಿದ್ದರು. ಕೊಲೆ ಆರೋಪಿ ಹಣಕಾಸು ವ್ಯವಹಾರ ನಡೆಸುತ್ತಿದ್ದರು. ಭಾನುವಾರ ತಡರಾತ್ರಿ ನಡೆದ ಗಲಾಟೆಯಲ್ಲಿ ಆರೋಪಿ ಕೃತ್ಯ ಎಸಗಿದ್ದಾರೆ’ ಎಂದು ಪೊಲೀಸರು ತಿಳಿಸಿದರು.

ADVERTISEMENT

‘ಮೂರ್ತಿ ಅವರ ಸಹೋದರನ ಮನೆಯಲ್ಲಿ ಭಾನುವಾರ ಪಿತೃಪಕ್ಷದ ಪೂಜೆ ಆಯೋಜಿಸಲಾಗಿತ್ತು. ಸಂಬಂಧಿಕರೂ ಮನೆಗೆ ಬಂದಿದ್ದರು. ರಾತ್ರಿ ಮನೆಯಲ್ಲಿ ಮದ್ಯದ ಪಾರ್ಟಿ ಸಹ ಆಯೋಜಿಸಲಾಗಿತ್ತು. ಮದ್ಯ ಸೇವನೆ ಮಾಡಿದ್ದ ಮೂರ್ತಿ ಅವರು ಮನೆಯಿಂದ ಹೊರಬಂದಾಗ ಆರೋಪಿಯ ಕಾಲು ತುಳಿದಿದ್ದರು. ಈ ವಿಚಾರಕ್ಕೆ ಇಬ್ಬರ ಮಧ್ಯೆ ಪರಸ್ಪರ ವಾಗ್ವಾದ ನಡೆದಿದೆ. ಆಗ, ಮೂರ್ತಿ ಅವರ ಹೊಟ್ಟೆಗೆ ಚಾಕುವಿನಿಂದ ಇರಿಯಲಾಗಿದೆ. ತೀವ್ರ ರಕ್ತಸ್ರಾವದಿಂದ ಮೂರ್ತಿ ಅವರು ಮೃತಪಟ್ಟಿದ್ದಾರೆ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.   

‘ಕೃತ್ಯದ ಬಳಿಕ ಆರೋಪಿ ತಲೆಮರೆಸಿಕೊಂಡಿದ್ದರು. ಮೊಬೈಲ್‌ ಲೊಕೇಶನ್‌ ಆಧರಿಸಿ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಲಾಯಿತು’ ಎಂದು ಪೊಲೀಸರು ಹೇಳಿದರು.

ಕೀರ್ತಿ 
ಹರೀಶ್‌ 
ಕಲ್ಲು ಎತ್ತಿಹಾಕಿ ಕೊಲೆ ಪ್ರಕರಣ: ಆರೋಪಿ ಬಂಧನ
ಬೆಂಗಳೂರು: ಊಟಕ್ಕೆ ಕುಳಿತುಕೊಳ್ಳುವ ಸ್ಥಳದ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಕಾರ್ಮಿಕನ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದ ಆರೋಪಿಯನ್ನು ಹನುಮಂತನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹರೀಶ್ ಬಂಧಿತ ಆರೋಪಿ. ಸೆ.24ರಂದು ಶ್ರೀನಿವಾಸನಗರದ 11ನೇ ಕ್ರಾಸ್‌ನ ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ ಅಜಿತ್​​​ (30) ಎಂಬುವವರ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಲಾಗಿತ್ತು. ಬಳಿಕ ಆರೋಪಿ ಪರಾರಿ ಆಗಿದ್ದರು. ಅವರನ್ನು ಪತ್ತೆಹಚ್ಚಿ ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದರು. ‘ಅಜಿತ್​​​ ಹಾಗೂ ಆರೋಪಿ ಹರೀಶ್​​​ ಇಬ್ಬರೂ ಸ್ನೇಹಿತರು. ಕೃತ್ಯ ನಡೆದಿದ್ದ ಕಟ್ಟಡದಲ್ಲಿಯೇ ಗಾರೆ ಕೆಲಸ ಮಾಡಿಕೊಂಡಿದ್ದರು. ಸೆ.24ರಂದು ಕಟ್ಟಡದ ಮೊದಲ ಮಹಡಿಯಲ್ಲಿದ್ದರು. ಆಗ ಅಜಿತ್‌ನ ಬಳಿ ಬಂದಿದ್ದ ಆರೋಪಿ ‘ಅದು ನಾನು ಕುಳಿತುಕೊಂಡು ಊಟ ಮಾಡುವ ಸ್ಥಳ. ಅಲ್ಲಿಂದ ಎದ್ದೇಳು’ ಎಂದು ಮನವಿ ಮಾಡಿದ್ದರು. ಆ ಸ್ಥಳದಿಂದ ಎದ್ದಿದ್ದ ಅಜಿತ್ ಅವರು ಕಟ್ಟಡದ ಮೂರನೇ ಮಹಡಿಗೆ ತೆರಳಿ ಊಟಕ್ಕೆ ಕುಳಿತಿದ್ದರು. ಅಲ್ಲಿಗೂ ಹೋಗಿದ್ದ ಹರೀಶ್ ಅಲ್ಲಿಯೂ ಗಲಾಟೆ ನಡೆಸಿದ್ದರು. ಆ ಸ್ಥಳದಲ್ಲಿ ‘ನಾನು ಕೂರಬೇಕು’ ಎಂದಿದ್ದರು. ಇಬ್ಬರ ಮಧ್ಯೆ ಗಲಾಟೆ ಆಗಿತ್ತು. ಆಗ ಅಜಿತ್‌ ಅವರ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಲಾಗಿತ್ತು’ ಎಂದು ಪೊಲೀಸರು ತಿಳಿಸಿದರು. ‘ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ. ಹರೀಶ್‌ಗೆ ಅಪರಾಧ ಹಿನ್ನೆಲೆಯಿದೆ. ಈ ಹಿಂದೆ ಕೊರಟಗೆರೆಯಲ್ಲಿ ನಡೆದಿದ್ದ ಗಲಾಟೆಯಲ್ಲೂ ಭಾಗಿ ಆಗಿದ್ದರು. ಅಲ್ಲದೇ ಕೊಲೆ ಪ್ರಕರಣವೊಂದರಲ್ಲೂ ಬಂಧನಕ್ಕೆ ಒಳಗಾಗಿ ಜಾಮೀನ ಮೇಲೆ ಬಿಡುಗಡೆ ಆಗಿದ್ದರು’ ಎಂದು ಪೊಲೀಸರು ಹೇಳಿದರು. ಹನುಮಂತನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.