ADVERTISEMENT

ಮೆಟ್ರೊ ಸುರಂಗ ನಿಲ್ದಾಣದಲ್ಲಿ ಅಣಕು ಪ್ರದರ್ಶನ 

​ಪ್ರಜಾವಾಣಿ ವಾರ್ತೆ
Published 6 ಜನವರಿ 2024, 23:50 IST
Last Updated 6 ಜನವರಿ 2024, 23:50 IST
<div class="paragraphs"><p>ಮೆಟ್ರೊ ಸೇವೆ </p></div>

ಮೆಟ್ರೊ ಸೇವೆ

   

ಬೆಂಗಳೂರೂ: ವಿಧಾನಸೌಧ ಡಾ.ಬಿ.ಆರ್‌. ಅಂಬೇಡ್ಕರ್‌ ಮೆಟ್ರೊ ಸುರಂಗ ನಿಲ್ದಾಣದಲ್ಲಿ ಶನಿವಾರ ಅನಿಲ ದಾಳಿಯನ್ನು ತಡೆಯುವ ಅಣಕು ಪ್ರದರ್ಶನ ನಡೆಸಲಾಯಿತು.

ಯಾವುದೇ ರಾಸಾಯನಿಕ, ಜೈವಿಕ, ವಿಕಿರಣಶೀಲ ಮತ್ತು ನ್ಯೂಕ್ಲಿಯರ್‌ ಮೆಟೀರಿಯಲ್ (ಸಿಬಿಆರ್‌ಎನ್‌) ದಾಳಿಯ ಸಂದರ್ಭದಲ್ಲಿ ಎಲ್ಲ ಕಾರ್ಯ ವಿಧಾನಗಳ ಬಗ್ಗೆ ಅರಿವು ಮೂಡಿಸಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ, ರಾಜ್ಯ ವಿಪತ್ತು ನಿರ್ವಹಣಾ ಪಡೆ, ಪೊಲೀಸ್, ವೈದ್ಯಕೀಯ ಸೇವಾ ಸಂಸ್ಥೆಗಳು ಈ ಅಣಕು ಪ್ರದರ್ಶನ ನಡೆಸಿದವು. 

ADVERTISEMENT

ಸಾರ್ವಜನಿಕ ಪ್ರಕಟಣೆಗಳ ಮೂಲಕ ಮಾಕ್‌ ಡ್ರಿಲ್‌ ಬಗ್ಗೆ ಪ್ರಯಾಣಿಕರಿಗೆ ಮಾಹಿತಿ ನೀಡಲಾಯಿತು.

ಅಣಕು ಪ್ರದರ್ಶನದ ಸಮಯದಲ್ಲಿ, ರಾಸಾಯನಿಕಗಳನ್ನು ಬಳಸಿ ಹಾನಿಕಾರಕವಲ್ಲದ ಬಣ್ಣದ ಹೊಗೆಯನ್ನು ನಿಲ್ದಾಣದ ಆವರಣದಲ್ಲಿ ಹೊಗೆ ಬಾಂಬ್‌ಗೆ ಹೋಲುವ ಸನ್ನಿವೇಶವನ್ನು ಸೃಷ್ಟಿಸಲಾಯಿತು. ಮೆಟ್ರೊ ಸಿಬ್ಬಂದಿ ಪ್ರಯಾಣಿಕರಂತೆ ಬಂದು ಮೂರ್ಛೆ ಹೋದಂತೆ ನಟಿಸಿದರು. ಅವರಲ್ಲಿ ಕೆಲವರು ಸಹಾಯಕ್ಕಾಗಿ ಓಡಿದರು.

ಹೊಗೆ ಹರಡುವ ಮತ್ತು ನಿಯಂತ್ರಿಸಲಾಗದ ಕಾರಣ ವಿಪತ್ತು ನಿರ್ವಹಣಾ ಸಂಸ್ಥೆಯ ಮಧ್ಯಸ್ಥಿಕೆಗಾಗಿ ನಿಲ್ದಾಣದ ಅಧಿಕಾರಿಗಳು ಕೇಂದ್ರ ಕಮಾಂಡ್‌ ಮತ್ತು ಭದ್ರತಾ ಕಣ್ಗಾವಲುಗಳಿಗೆ ಮಾಹಿತಿ ನೀಡಿದರು. ನಿಲ್ದಾಣದೊಳಗೆ ಪ್ರಯಾಣಿಕರ ಪ್ರವೇಶವನ್ನು ಸ್ಥಗಿತಗೊಳಿಸಲಾಯಿತು. ನಿಲ್ದಾಣದ ಒಳಗಿರುವ ಪ್ರಯಾಣಿಕರಿಗೆ ನಿಲ್ದಾಣದಿಂದ ತರಾತುರಿಯಿಂದ ಹೊರಬರುವಂತೆ ಸೂಚಿಸಲಾಯಿತು. ನಿಲ್ದಾಣದಲ್ಲಿ ರೈಲು ನಿಲುಗಡೆ ಮಾಡದಂತೆ ರೈಲು ನಿರ್ವಾಹಕರಿಗೆ ಸೂಚನೆ ನೀಡಲಾಯಿತು.

ರಾಸಾಯನಿಕ ಕಂಟೈನರ್‌ ಅನ್ನು ಮುಚ್ಚಿ ಪ್ರದೇಶವನ್ನು ಸೋಂಕು ರಹಿತಗೊಳಿಸಿದರು. ನಿಲ್ದಾಣದ ಹವಾನಿಯಂತ್ರಣವನ್ನು ಸ್ಥಗಿತಗೊಳಿಸಿ, ಹೊಗೆ ತೆಗೆಯುವ ಸುರಕ್ಷಿತ ಸ್ವಯಂಚಾಲಿತ ವ್ಯವಸ್ಟೆಯನ್ನು ಸಕ್ರಿಯಗೊಳಿಸಲಾಯಿತು. ಎನ್‌ಡಿಆರ್‌ಎಫ್‌ ಅನುಮತಿಸಿದ ನಂತರ ರೈಲು ಸಂಚಾರವನ್ನು ಪುನರಾರಂಭಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.