ಬೆಂಗಳೂರು: ಮೆಜೆಸ್ಟಿಕ್ನಲ್ಲಿರುವ ಮೆಟ್ರೊ ನಿಲ್ದಾಣದಲ್ಲಿ ಶಿಕ್ಷಕಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ್ದ ಪ್ರಕರಣದಲ್ಲಿ ಮನೋಜ್ (26) ಅವರನ್ನು ಉಪ್ಪಾರಪೇಟೆ ಠಾಣೆ ಪೊಲೀಸರು ಬಂಧಿಸಿದ್ದು, ಜಾಮೀನು ಮೇಲೆ ಆರೋಪಿಯನ್ನು ಬಿಡುಗಡೆ ಮಾಡಲಾಗಿದೆ.
‘ಡಿ. 25ರಂದು ನಡೆದಿದ್ದ ಘಟನೆ ಸಂಬಂಧ ಶಿಕ್ಷಕಿ ದೂರು ನೀಡಿದ್ದರು. ಕಾಮಾಕ್ಷಿಪಾಳ್ಯ ನಿವಾಸಿ ಮನೋಜ್ನನ್ನು ಬಂಧಿಸಲಾಗಿತ್ತು. ಜಾಮೀನು ಮೇಲೆ ಆತನನ್ನು ಬಿಟ್ಟು ಕಳುಹಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ಶಂಕರಪುರ ನಿವಾಸಿಯಾಗಿರುವ ಶಾಲಾ ಶಿಕ್ಷಕಿ, ಡಿ. 25ರಂದು ಸಂಜೆ ವೈಟ್ಫೀಲ್ಡ್ಗೆ ಹೊರಟಿದ್ದರು. ನ್ಯಾಷನಲ್ ಕಾಲೇಜು ಮೆಟ್ರೊ ನಿಲ್ದಾಣದಲ್ಲಿ ರೈಲು ಹತ್ತಿದ್ದರು. ಆರೋಪಿ ಮನೋಜ್ ಸಹ ಅದೇ ರೈಲಿನಲ್ಲಿದ್ದ.’
‘ರೈಲು ಬದಲಿಸಲು ಮೆಜೆಸ್ಟಿಕ್ ನಿಲ್ದಾಣದಲ್ಲಿ ಶಿಕ್ಷಕಿ ಇಳಿದಿದ್ದರು. ಅವರ ಹಿಂದೆ ಹೋಗಿದ್ದ ಆರೋಪಿ, ಮೈ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದ. ಗಾಬರಿಗೊಂಡ ಶಿಕ್ಷಕಿ, ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡಿದ್ದರು. ಆರೋಪಿಯನ್ನು ವಶಕ್ಕೆ ಪಡೆದಿದ್ದ ಸಿಬ್ಬಂದಿ, ಠಾಣೆಗೆ ಒಪ್ಪಿಸಿದ್ದರು. ಆರೋಪಿ, ಮದ್ಯದ ಅಮಲಿನಲ್ಲಿ ಕೃತ್ಯ ಎಸಗಿದ್ದನೆಂಬುದು ಗೊತ್ತಾಗಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.