ADVERTISEMENT

ಬಿಡಿಎ ವಾಣಿಜ್ಯ ಸಂಕೀರ್ಣ ಖಾಸಗಿಯವರಿಗೆ ನೀಡುವುದಕ್ಕೆ ಎಎಪಿ ವಿರೊಧ

​ಪ್ರಜಾವಾಣಿ ವಾರ್ತೆ
Published 11 ಮೇ 2024, 16:12 IST
Last Updated 11 ಮೇ 2024, 16:12 IST
ಎಎಪಿ ಚಿಹ್ನೆ
ಎಎಪಿ ಚಿಹ್ನೆ   

ಬೆಂಗಳೂರು: ಬಿಡಿಎ ತನ್ನ ಏಳು ಕಾಂಪ್ಲೆಕ್ಸ್‌ಗಳನ್ನು ಖಾಸಗಿಯವರಿಗೆ ನೀಡಲು ನಿರ್ಧರಿಸಿರುವುದನ್ನು ವಿರೋಧಿಸಿ ಆಮ್‌ ಆದ್ಮಿ ಪಾರ್ಟಿ ಪ್ರತಿಭಟನೆ ನಡೆಸಿತು.

‘ಆರು ವರ್ಷಗಳ ಹಿಂದೆ ಅಂತಿಮಗೊಂಡಿದ್ದ ವಿವಾದಾದತ್ಮಕ ಒಪ್ಪಂದಕ್ಕೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಮರುಜೀವ ನೀಡಲು ಮುಂದಾಗಿದ್ದು, ಏಳು ಬಿಡಿಎ ಕಾಂಪ್ಲೆಕ್ಸ್‌ಗಳನ್ನು ಶಾಪಿಂಗ್ ಮಾಲ್‌ಗಳನ್ನಾಗಿ ಪರಿವರ್ತಿಸಲಿದೆ. ಸಾವಿರಾರು ಕೋಟಿ ರೂಪಾಯಿ ಬೆಲೆಬಾಳುವ ಬಿಡಿಎ ವಾಣಿಜ್ಯ ಸಂಕೀರ್ಣಗಳನ್ನು ಭೂ ಮಾಫಿಯಾಗಳ ಕೈಗೆ ನೀಡುತ್ತಿದೆ’ ಎಂದು ಪ್ರತಿಭಟನಕಾರರು ಆರೋಪಿಸಿದರು.

‘ಇಂದಿರಾ ನಗರದ ಬಿಡಿಎ ಕಾಂಪ್ಲೆಕ್ಸ್ ಅನ್ನು ದೊಡ್ಡಭೂಗಳ್ಳರಲ್ಲಿ ಒಬ್ಬರಾದ ಕೆ.ಜೆ.ಜಾರ್ಜ್ ಒಡೆತನದ ಎಂಬೆಸ್ಸಿ ಗ್ರೂಪ್‌ಗೆ ನೀಡಲಾಗುತ್ತಿದೆ. ಇಂದಿರಾನಗರಲ್ಲಿ ಈಗಾಗಲೇ ವ್ಯಾಪಕ ವಾಣಿಜ್ಯೀಕರಣವಾಗಿದೆ. ಮತ್ತೆ ಇಲ್ಲಿ ಕಮರ್ಷಿಯಲ್ ಕಟ್ಟಡ ನಿರ್ಮಾಣಕ್ಕೆ ಅವಕಾಶ ನೀಡಲಾಗುತ್ತಿದೆ. ಬ್ರ್ಯಾಂಡ್ ಬೆಂಗಳೂರು ಅಂದ್ರೆ ಜನರ ಜೀವನ ಅಭಿವೃದ್ಧಿಯಾಗುವ ರೀತಿ ಇರಬೇಕು. ಡಿ.ಕೆ.ಶಿವಕುಮಾರ್ ಹೇಳುತ್ತಿರುವ ರೀತಿಯಲ್ಲ’ ಎಂದು ಆಮ್ ಆದ್ಮಿ ಪಾರ್ಟಿಯ ರಾಜ್ಯ ಸಂಘಟನಾ ಕಾರ್ಯದರ್ಶಿ ಮೋಹನ್ ದಾಸರಿ ತಿಳಿಸಿದರು.

ADVERTISEMENT

‘ಸರ್ಕಾರಿ ಆಸ್ತಿಯಲ್ಲಿ ಶಾಪಿಂಗ್ ಮಾಲ್‌ಗಳನ್ನು ಮಾಡಿದರೆ ಶ್ರೀಮಂತರಿಗಷ್ಟೇ ಉಪಯೋಗವಾಗುತ್ತದೆ. ಸಿದ್ದರಾಮಯ್ಯ ಅವರೇ ಬಡವರ ವಿರೋಧಿ ಸರ್ಕಾರವನ್ನಾಗಿ ಮಾಡಬೇಡಿ’ ಎಂದು ಬೆಂಗಳೂರು ನಗರ ಸಂಘಟನಾ ಕಾರ್ಯದರ್ಶಿ ಅಶೋಕ್ ಮೃತ್ಯುಂಜಯ ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.