ಬೆಂಗಳೂರು: ಚಾಲನೆ ಕಲಿಯಲು ಹೊರಟಿದ್ದ ಯುವಕನೊಬ್ಬ ಅಡ್ಡಾದಿಡ್ಡಿ ಕಾರು ಚಲಾಯಿಸಿ ಅಪಘಾತವನ್ನುಂಟು ಮಾಡಿದ್ದು, 8 ಬೈಕ್ಗಳು ಜಖಂಗೊಂಡಿವೆ.
‘ಉಲ್ಲಾಳ ಬಳಿ ಗುರುವಾರ ತಡರಾತ್ರಿ ಈ ಅಪಘಾತ ಸಂಭವಿಸಿದೆ. ಸಾರ್ವಜನಿಕರ ಜೀವಕ್ಕೆ ಕುತ್ತು ತಂದ ಆರೋಪದಡಿ ಕಾರು ಚಾಲಕ ಗುರುದೀಪ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಕಾರು ಜಪ್ತಿ ಮಾಡಿ, ತನಿಖೆ ಮುಂದುವರಿಸಲಾಗಿದೆ’ ಎಂದು ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸರು ಹೇಳಿದರು.
‘ಗುರುವಾರ ರಾತ್ರಿ ಸ್ನೇಹಿತರು ಒಂದೆಡೆ ಸೇರಿ ಪಾರ್ಟಿ ಮಾಡಿದ್ದರು. ಚಾಲನೆ ಕಲಿಯಬೇಕೆಂದು ಹೇಳಿದ್ದ ಗುರುದೀಪ್, ಸ್ನೇಹಿತರೊಬ್ಬರ ಕಾರು ಪಡೆದುಕೊಂಡಿದ್ದರು. ಅದೇ ಕಾರು ಚಲಾಯಿಸಿಕೊಂಡು ಉಲ್ಲಾಳ ಮುಖ್ಯರಸ್ತೆಯಲ್ಲಿ ಹೊರಟಿದ್ದರು. ಅತಿ ವೇಗವಾಗಿ, ನಿರ್ಲಕ್ಷ್ಯದಿಂದ ಕಾರು ಚಲಾಯಿಸಿದ್ದರು.’
‘ಬೇಕರಿಯೊಂದರ ಎದುರು ಬೈಕ್ಗಳನ್ನು ನಿಲ್ಲಿಸಲಾಗಿತ್ತು. ನಿಯಂತ್ರಣ ತಪ್ಪಿದ್ದ ಕಾರು, ಬೈಕ್ಗಳಿಗೆ ಡಿಕ್ಕಿ ಹೊಡೆದಿತ್ತು. ಇದರಿಂದಾಗಿ ಬೈಕ್ಗಳು ಜಖಂಗೊಂಡವು. ಕಾರಿನ ಮುಂಭಾಗವೂ ಜಖಂಗೊಂಡಿತ್ತು.’
‘ಗುರುದೀಪ್ ಬಳಿ ಚಾಲನಾ ಪರವಾನಗಿ ಇರಲಿಲ್ಲ. ಜೊತೆಗೆ, ಮದ್ಯ ಕುಡಿದಿದ್ದರೆಂಬ ಅನುಮಾನವಿದೆ. ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು, ವರದಿ ಬರಬೇಕಿದೆ. ಕಾರು ನೀಡಿದ್ದ ಸ್ನೇಹಿತನ ವಿರುದ್ಧವೂ ಕಾನೂನು ಕ್ರಮ ಜರುಗಿಸಲಾಗಿದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.