ADVERTISEMENT

ಕೆಎಎಸ್‌ ಅಧಿಕಾರಿಗೆ ಹಣದ ಬೇಡಿಕೆ ಆರೋಪ: ಟಿ.ಜೆ.ಅಬ್ರಾಹಂ ವಿರುದ್ಧ ಚಾರ್ಜ್‌ಶೀಟ್‌

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2024, 16:16 IST
Last Updated 7 ಆಗಸ್ಟ್ 2024, 16:16 IST
   

ಬೆಂಗಳೂರು: ಕೆಎಎಸ್‌ ಅಧಿಕಾರಿ ಬಿ.ಸುಧಾ ಅವರಿಗೆ ಹಣ ನೀಡುವಂತೆ ಬೇಡಿಕೆ ಇರಿಸಿದ್ದ ಆರೋಪದ ಅಡಿ ಟಿ.ಜೆ.ಅಬ್ರಾಹಂ ಹಾಗೂ ಮಧ್ಯವರ್ತಿ ಸುನೀಲ್‌ ಎಂಬುವವರ ವಿರುದ್ಧ ದಾಖಲಾಗಿದ್ದ ಪ್ರಕರಣದ ತನಿಖೆ ನಡೆಸಿದ ಜೀವನಭೀಮಾನಗರ ಠಾಣೆ ಪೊಲೀಸರು, ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದಾರೆ.

ಸುಧಾ ನೀಡಿದ ದೂರಿನ ಮೇರೆಗೆ ಅಬ್ರಾಹಂ ಮತ್ತು ಸುನೀಲ್ ವಿರುದ್ಧ ಎಫ್‌ಐಆರ್‌ ದಾಖಲಾಗಿತ್ತು.

‘ಅಬ್ರಾಹಂ ಅವರು ಸಾಮಾಜಿಕ ಕಾರ್ಯಕರ್ತರಾಗಿ ಕೆಲಸ ಮಾಡುತ್ತಿದ್ಧಾರೆ. ಕೆಎಎಸ್‌ ಅಧಿಕಾರಿ ವಿರುದ್ಧ ಭ್ರಷ್ಟ್ರಾಚಾರ ಆರೋಪದ ಅಡಿ ಲೋಕಾಯುಕ್ತ ಮತ್ತು ಎಸಿಬಿಗೆ ದೂರು ನೀಡಿದ್ದರು. ನಂತರ, ಪ್ರಕರಣದಲ್ಲಿ ಯಾವುದೇ ತೊಂದರೆ ಆಗದಂತೆ ಮಾಡಲು ಹಣಕ್ಕೆ ಬೇಡಿಕೆ ಇಟ್ಟಿದ್ದರು’ ಎಂದು ಆರೋಪಿಸಿ ಸುಧಾ ದೂರು ನೀಡಿದ್ದರು. 2023ರ ಆಗಸ್ಟ್‌ 1ರಂದು ಜೀವನಭೀಮಾನಗರ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿತ್ತು’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಇದೇ ಪ್ರಕರಣದಲ್ಲಿ ಖಾಸಗಿ ಸುದ್ದಿವಾಹಿನಿ ರಹಸ್ಯ ಕಾರ್ಯಾಚರಣೆ ನಡೆಸಿತ್ತು.

ADVERTISEMENT

‘ಬಂಧನದ ಭೀತಿಯಿಂದ ಆರೋಪಿಗಳಿಬ್ಬರು ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಪಡೆದಿದ್ದರು. ಇಬ್ಬರಿಗೂ ನೋಟಿಸ್ ನೀಡಿ ವಿಚಾರಣೆ ನಡೆಸಲಾಗಿತ್ತು. ತನಿಖೆ ವೇಳೆ ಅಧಿಕಾರಿಗೆ ಕರೆ ಮಾಡಿ ಹಣಕ್ಕೆ ಬೇಡಿಕೆ ಇರಿಸಿದ್ದ ಕಾಲ್‌ ರೆಕಾರ್ಡ್‌ಗಳು, ಖಾಸಗಿ ಸುದ್ದಿ ವಾಹಿನಿಯ ರಹಸ್ಯ ಕಾರ್ಯಾಚರಣೆ ವಿಡಿಯೊಗಳು, ಆರೋಪಿಗಳ ಧ್ವನಿ ಮಾದರಿ ಸಂಗ್ರಹಿಸಲಾಗಿತ್ತು. ತಾಂತ್ರಿಕ ಸಾಕ್ಷ್ಯ ಹಾಗೂ ಧ್ವನಿ ಮಾದರಿಗಳನ್ನು ಪರೀಕ್ಷೆಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ(ಎಫ್‌ಎಸ್‌ಎಲ್‌) ಕಳುಹಿಸಲಾಗಿತ್ತು. ಎಫ್‌ಎಸ್ಎಲ್‌ ವರದಿ ಬರುವುದು ವಿಳಂಬವಾಗಿತ್ತು. ಕಳೆದ ವಾರ ವರದಿ ಬಂದಿದ್ದು, ಮೂರು ದಿನಗಳ ಹಿಂದೆ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲಾಗಿದೆ’ ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.