ಬೆಂಗಳೂರು: ‘ಜಲ ಮಂಡಳಿ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ಕಾವೇರಿ ನೀರಿನ ದರ ಪರಿಷ್ಕರಣೆ ಕುರಿತು ವಿಧಾನಸಭೆ ಅಧಿವೇಶನದ ಬಳಿಕ ಮಂಡಳಿಯ ಅಧಿಕಾರಿಗಳ ಜತೆಗೆ ಚರ್ಚಿಸಿ, ಕ್ರಮ ಕೈಗೊಳ್ಳಲಾಗುವುದು’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
ಜಲ ಮಂಡಳಿಯು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ನೌಕರರ ಸಂಘ, ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಬಳಗದ ಸಹಯೋಗದಲ್ಲಿ ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕೆಂಪೇಗೌಡ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಕಾವೇರಿ ನೀರಿನ ದರ ಹೆಚ್ಚಳ ಮಾಡಿ 12 ವರ್ಷಗಳಾಗಿವೆ. ಈಗ ನೀರಿನ ಬೆಲೆ ಹೆಚ್ಚಿಸಬೇಕೆಂಬ ಒತ್ತಡವಿದೆ. ಇಲ್ಲವಾದರೆ ಮಂಡಳಿ ಸತ್ತು ಹೋಗುತ್ತದೆ. ಒಮ್ಮೆಯೇ ದರ ಹೆಚ್ಚಿಸಿದರೆ ವಿರೋಧ ಪಕ್ಷದವರು ಟೀಕೆ ಮಾಡುತ್ತಾರೆ. ಅವರು ಟೀಕೆ ಮಾಡಿದರೂ ಪರವಾಗಿಲ್ಲ, ನಮಗೆ ಮಂಡಳಿ ಉಳಿಯಬೇಕು. ಹೊಸ ಯೋಜನೆಗಳನ್ನು ಕೈಗೊಂಡು ಜನರಿಗೆ ನೀರನ್ನು ಪೂರೈಸಬೇಕು. ಮಂಡಳಿಯಲ್ಲಿ ಸಿಬ್ಬಂದಿ ಕೊರತೆಯೂ ಇದೆ. ವಿಧಾನಸಭೆ ಅಧಿವೇಶನದ ಬಳಿಕ ಮಂಡಳಿ ಅಧ್ಯಕ್ಷರ ಜತೆಗೆ ಸಭೆ ನಡೆಸಿ, ವಿವಿಧ ಪ್ರಸ್ತಾವಗಳ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು’ ಎಂದರು.
‘ನಗರ ಹಾಗೂ ಹೊರವಲಯದ ವ್ಯಾಪ್ತಿಯಲ್ಲಿ ಇರುವ ಕೆರೆಗಳನ್ನು ಜಲಮಂಡಳಿಯ ವಶಕ್ಕೆ ತೆಗೆದುಕೊಳ್ಳಲು ಚಿಂತನೆ ನಡೆದಿದೆ. ಕರ್ನಾಟಕ ರಾಜ್ಯ ಕೆರೆ ಸಂರಕ್ಷಣಾ ಪ್ರಾಧಿಕಾರದ ಜತೆಗೆ ಸಭೆ ನಡೆಸಿ, ನಗರದಲ್ಲಿರುವ ಎಲ್ಲ ಕೆರೆಗಳ ಅಂತರ್ಜಲ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.