ADVERTISEMENT

ಕಾವೇರಿ ನೀರಿಗಾಗಿ ಮಧ್ಯವರ್ತಿಗಳು ಹಣ ಪಡೆದರೆ ಕ್ರಮ: ರಾಮ್‌ ಪ್ರಸಾತ್‌ ಮನೋಹರ್‌

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2024, 16:33 IST
Last Updated 26 ಅಕ್ಟೋಬರ್ 2024, 16:33 IST
ರಾಮ್‌ ಪ್ರಸಾತ್ ಮನೋಹರ್‌
ರಾಮ್‌ ಪ್ರಸಾತ್ ಮನೋಹರ್‌   

ಬೆಂಗಳೂರು: ಕಾವೇರಿ ನೀರಿನ ಸಂಪರ್ಕ ನೀಡಲು ಜಲಮಂಡಳಿ ಹೆಸರು ದುರಪಯೋಗಪಡಿಸಿಕೊಳ್ಳುವ ಹಾಗೂ ನಿಯಮಬಾಹಿರವಾಗಿ ಹೆಚ್ಚಿನ ಹಣ ಕೇಳುವವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲಾಗುವುದು ಎಂದು ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಅಧ್ಯಕ್ಷ ಡಾ. ರಾಮ್‌ ಪ್ರಸಾತ್‌ ಮನೋಹರ್‌ ಎಚ್ಚರಿಕೆ ನೀಡಿದ್ದಾರೆ.

ಕಾವೇರಿ ನೀರಿನ ಸಂಪರ್ಕ ಪಡೆಯುವ ಪ್ರಕ್ರಿಯೆ ಬಹಳ ಸುಲಭವಾಗಿದೆ. ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿದಲ್ಲಿ ಸಂಬಂಧಪಟ್ಟ ವಿಭಾಗದ ಅಧಿಕಾರಿಗಳು ಮುಂದಿನ ಕ್ರಮವಹಿಸಲಿದ್ದಾರೆ. ಹೊಸ ಸಂಪರ್ಕ ಪಡೆಯಲು ಮನೆಗಳಿಗೆ, ಅಪಾರ್ಟ್‌ಮೆಂಟ್‌ಗಳಿಗೆ, ವಾಣಿಜ್ಯ ಕಟ್ಟಡಗಳಿಗೆ ನಿಯಮಗಳ ಪ್ರಕಾರ ಹಣ ನಿಗದಿಪಡಿಸಿ ಡಿಮ್ಯಾಂಡ್‌ ನೋಟಿಸ್‌ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಕಾವೇರಿ ಸಂಪರ್ಕ ನೀಡಲು ನಿಯಮಬಾಹಿರವಾಗಿ ಹಣ ಕೇಳುವ, ಬಿಡಬ್ಲ್ಯುಎಸ್‌ಎಸ್‌ಬಿ ಹೆಸರು ಹೇಳಿಕೊಂಡು ಬರುವ ಮಧ್ಯವರ್ತಿಗಳಾಗಲಿ, ಜಲಮಂಡಳಿ ಸಿಬ್ಬಂದಿ ಅಥವಾ ಅಸೋಷಿಯೇಷನ್‌ ಸದಸ್ಯರು ಹಾಗೂ ಮಧ್ಯವರ್ತಿಗಳ ಮೇಲೆ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುವುದು. ಇಂತಹ ಪ್ರಕರಣಗಳನ್ನು ಕ್ಷಿಪ್ರ ರೀತಿಯಲ್ಲಿ ತನಿಖೆ ಮಾಡಿ ಪರಿಹಾರ ನೀಡಲು ಜಲಮಂಡಳಿಯ ಮುಖ್ಯ ಆಡಳಿತಾಧಿಕಾರಿ ನೇತೃತ್ವದಲ್ಲಿ ವಿಜಿಲೆನ್ಸ್‌ ತಂಡ ರಚಿಸಲಾಗಿದೆ. ಸಾರ್ವಜನಿಕರು bwssbvigilance@gmail.com ಗೆ ಅಗತ್ಯ ಮಾಹಿತಿಯ ಮೂಲಕ ದೂರು ನೀಡಬೇಕು. ದೂರುದಾರರ ಗುರುತು ಗೋಪ್ಯವಾಗಿ ಇಡಲಾಗುವುದು. ದೂರು ಬಂದ 24 ಗಂಟೆಯ ಒಳಗಾಗಿ ವಿಜಿಲೆನ್ಸ್‌ ತಂಡ ಕ್ರಮ ಕೈಗೊಳ್ಳಬೇಕು ಎಂದು  ಸೂಚನೆ ನೀಡಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.