ಆನೇಕಲ್: ತಾಲ್ಲೂಕಿನ ಬಗ್ಗನದೊಡ್ಡಿಯ ಸಮೀಪದಲ್ಲಿರುವ ನಟ ದರ್ಶನ್ ಒಡೆತನದ ಫಾರ್ಮ್ಹೌಸ್ನಲ್ಲಿ ಎರಡು ತಿಂಗಳ ಹಿಂದೆ ನಡೆದ ಸಿಬ್ಬಂದಿ ಶ್ರೀಧರ್ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಆನೇಕಲ್ ಪೊಲೀಸರು ಚುರುಕುಗೊಳಿಸಿದ್ದಾರೆ.
ಶ್ರೀಧರ್ ತಂದೆ ಸಿದ್ಧಪ್ಪ ಮತ್ತು ಅಕ್ಕ ರೂಪಾ ಅವರನ್ನು ಠಾಣೆಗೆ ಕರೆಸಿಕೊಂಡು ಮಾಹಿತಿ ಪಡೆಯುತ್ತಿದ್ದಾರೆ. ಶ್ರೀಧರ್ ಬಳುಸುತ್ತಿದ್ದ ಮೊಬೈಲ್ ಫೋನ್ ಕೂಡ ವಶಕ್ಕೆ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.
‘ನನ್ನ ಮಗ ಶ್ರೀಧರ್ ಫಾರ್ಮ್ಹೌಸ್ ಮೇಲ್ವಿಚಾರಕನಾಗಿರಲಿಲ್ಲ. ಫಾರ್ಮ್ಹೌಸ್ನಲ್ಲಿ ಕಟ್ಟಡ ನಿರ್ಮಿಸುತ್ತಿರುವ ದುರ್ಗಾ ಕನ್ಸ್ಟ್ರಕ್ಷನ್ ಖಾಸಗಿ ನಿರ್ಮಾಣ ಕಂಪನಿಯ ಉದ್ಯೋಗಿಯಾಗಿದ್ದ. ಫಾರ್ಮ್ಹೌಸ್ನಲ್ಲಿ ನಿರ್ಮಿಸುತ್ತಿರುವ ಕಟ್ಟಡದ ಮೇಲ್ವಿಚಾರಕನಾಗಿ ಕೆಲಸ ಮಾಡುತ್ತಿದ್ದ. ಆದರೆ, ಕಂಪನಿಯವರು ಆತನಿಗೆ ಒಂದು ವರ್ಷದಿಂದ ಸಂಬಳವನ್ನೇ ನೀಡಿರಲಿಲ್ಲ. ನಿವೇಶನ ನೀಡುವುದಾಗಿ ಭರವಸೆ ನೀಡಿದ್ದರು’ ಎಂದು ಸಿದ್ಧಪ್ಪ ಅವರು ಪೊಲೀಸರಿಗೆ ತಿಳಿಸಿದ್ದಾರೆ ಎನ್ನಲಾಗಿದೆ.
ದರ್ಶನ್ ಒಡೆತನದ ಫಾರ್ಮ್ಹೌಸ್ನಲ್ಲಿ ಏಪ್ರಿಲ್ 16ರಂದು ಶ್ರೀಧರ್ ಡೆತ್ನೋಟ್ ಬರೆದಿಟ್ಟು, ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ‘ಆತ್ಮಹತ್ಯೆಗೆ ಒಂಟಿತನ ಕಾರಣ. ಯಾರಿಗೂ ತೊಂದರೆ ಕೊಡಬೇಡಿ’ ಎಂದು ಡೆತ್ನೋಟ್ನಲ್ಲಿ ಬರೆದಿದ್ದರು. ಅದನ್ನೇ ಮೊಬೈಲ್ನಲ್ಲಿ ವಿಡಿಯೊ ಸಹ ಮಾಡಿದ್ದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠ ಮಲ್ಲಿಕಾರ್ಜುನ ಬಾಲದಂಡಿ ಅವರು ಈಚೆಗೆ ಶ್ರೀಧರ್ ಅಸಹಜ ಸಾವು ಪ್ರಕರಣದ ಕಡತ, ಮರಣೋತ್ತರ ಶವಪರೀಕ್ಷೆಗೆ ಸಂಬಂದಿಸಿದ ಎಫ್ಎಸ್ಎಲ್ ವರದಿ ತರಿಸಿಕೊಂಡು ಪರಿಶೀಲಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.