ADVERTISEMENT

ಹಲವು ಹೆದ್ದಾರಿಗಳು ಎಟಿಎಂಎಸ್ ಕಾರಿಡಾರ್‌: ಜುಲೈ 1ರಿಂದ ಎ.ಐ ಕ್ಯಾಮೆರಾ ಚಾಲನೆ

ವಾಹನಗಳ ಮಿತಿಮೀರಿದ ವೇಗಕ್ಕೆ ಕಡಿವಾಣ

​ಪ್ರಜಾವಾಣಿ ವಾರ್ತೆ
Published 22 ಜೂನ್ 2024, 23:30 IST
Last Updated 22 ಜೂನ್ 2024, 23:30 IST
ಬೆಂಗಳೂರು– ಮೈಸೂರು ಎಕ್ಸ್‌ಪ್ರೆಸ್ ವೇ. (ಸಂಗ್ರಹ ಚಿತ್ರ) 
ಬೆಂಗಳೂರು– ಮೈಸೂರು ಎಕ್ಸ್‌ಪ್ರೆಸ್ ವೇ. (ಸಂಗ್ರಹ ಚಿತ್ರ)    

ಬೆಂಗಳೂರು: ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ ವೇ, ಮೈಸೂರು ನಗರ ಹಾಗೂ ಜಿಲ್ಲೆಯ ವ್ಯಾಪ್ತಿಯ ಹೆದ್ಧಾರಿಗಳು ಜುಲೈ 1ರಿಂದ ಕೃತಕ ಬುದ್ಧಿಮತ್ತೆ (ಎ.ಐ) ಸಂಚಾರ ನಿರ್ವಹಣಾ ವ್ಯವಸ್ಥೆಯ (ಐಟಿಎಂಎಸ್‌) ಕಾರಿಡಾರ್‌ ಆಗಲಿವೆ ಎಂದು ಹೆಚ್ಚುವರಿ ಪೊಲೀಸ್‌ ಮಹಾ ನಿರ್ದೇಶಕ (ಸಂಚಾರ ಮತ್ತು ರಸ್ತೆ ಸುರಕ್ಷತಾ ವಿಭಾಗ) ಅಲೋಕ್‌ ಕುಮಾರ್‌ ತಿಳಿಸಿದ್ದಾರೆ.

‘ಎಕ್ಸ್‌ಪ್ರೆಸ್‌ ವೇ, ಮೈಸೂರು ನಗರ ಹಾಗೂ ಜಿಲ್ಲಾ ವ್ಯಾಪ್ತಿಯಲ್ಲಿ ಒಟ್ಟು ₹8.5 ಕೋಟಿ ವೆಚ್ಚದಲ್ಲಿ ಸ್ವಯಂ ಚಾಲಿತ ಕೃತಕ ಬುದ್ಧಿಮತ್ತೆ ಕ್ಯಾಮೆರಾ ಅಳವಡಿಕೆ ಮಾಡಲಾಗಿದೆ. ಎ.ಐ ಕ್ಯಾಮೆರಾಗಳು ಪೂರ್ಣ ಪ್ರಮಾಣದಲ್ಲಿ ಜುಲೈ 1ರಿಂದ ಚಾಲನೆಗೆ ಬರಲಿವೆ’ ಎಂದು ತಿಳಿಸಿದ್ದಾರೆ.

‘ವಾಹನಗಳ ನೋಂದಣಿ ಫಲಕಗಳನ್ನು ಪತ್ತೆಹಚ್ಚಲು ಈ ಕ್ಯಾಮೆರಾಗಳು ಕೆಲಸ ಮಾಡಲಿವೆ. ಹೆದ್ದಾರಿಗಳಲ್ಲಿ ಅಪಘಾತ ಪ್ರಕರಣ ಕಡಿಮೆ ಮಾಡಲು ಹಾಗೂ ಮಿತಿಮೀರಿ ವೇಗವಾಗಿ ಚಲಿಸುವ ವಾಹನಗಳ ಮೇಲೆ ನಿಗಾ ಇಡಲು ವಿವಿಧ ಕ್ರಮಗಳನ್ನು ಕೈಗೊಳ್ಳಲಾಗಿದೆ. ಎಕ್ಸ್‌ಪ್ರೆಸ್‌ ವೇನ ಮೂರು ಸ್ಥಳಗಳಲ್ಲಿ ಹೆಚ್ಚು ಅಪಘಾತ ಪ್ರಕರಣಗಳು ನಡೆಯುತ್ತಿವೆ. ಅಲ್ಲಿ ಸೂಚನಾ ಫಲಕ ಹಾಕಲಾಗಿದೆ. ಅಲ್ಲದೇ ಕ್ಯಾಮೆರಾ ಸಂಖ್ಯೆ ಹೆಚ್ಚಿಸಲಾಗಿದೆ’ ಎಂದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹೇಳುತ್ತಾರೆ.

ADVERTISEMENT

ಎಕ್ಸ್‌ಪ್ರೆಸ್‌ ವೇನಲ್ಲಿ ಎ.ಐ ಕ್ಯಾಮೆರಾ ಅಳವಡಿಕೆಯಿಂದ ಅಪಘಾತ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿದ್ದು, ಬೆಂಗಳೂರಿನಿಂದ ಹೊರವಲಯಕ್ಕೆ ಸಂಪರ್ಕಿಸುವ ನಾಲ್ಕು ಪ್ರಮುಖ ಹೆದ್ದಾರಿಯಲ್ಲೂ ಕೃತಕ ಬುದ್ಧಿಮತ್ತೆ (ಎಐ) ಸಂಚಾರ ನಿರ್ವಹಣಾ ವ್ಯವಸ್ಥೆಯ (ಐಟಿಎಂಎಸ್‌) ಅನುಷ್ಠಾನಕ್ಕೆ ತರಲು ಪೊಲೀಸ್‌ ಇಲಾಖೆಯ ಸಂಚಾರ ಮತ್ತು ರಸ್ತೆ ಸುರಕ್ಷತಾ ವಿಭಾಗ ಮುಂದಾಗಿದೆ.

ತುಮಕೂರು ರಸ್ತೆಯಲ್ಲಿ ಶಿರಾದ ವರೆಗೆ, ಕನಕಪುರ ರಸ್ತೆಯಲ್ಲಿ ಕೊಳ್ಳೇಗಾಲದ ವರೆಗೆ, ಹೊಸೂರು ರಸ್ತೆಯಲ್ಲಿ ಅತ್ತಿಬೆಲೆ ತನಕ ಮತ್ತು ಕೋಲಾರ ರಸ್ತೆಯಲ್ಲಿ ಈ ವ್ಯವಸ್ಥೆ ಅನುಷ್ಕಾನಕ್ಕೆ ತರಲು ಮುಂದಾಗಿದ್ದೇವೆ. ಶೀಘ್ರದಲ್ಲೇ ಟೆಂಡರ್‌ ಸಹ ಕರೆಯಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.