ಬೆಂಗಳೂರು: ‘ನಗರದ ಎಲ್ಲ ಉದ್ಯಾನಗಳನ್ನು ಬೆಳಿಗ್ಗೆ 5 ಗಂಟೆಯಿಂದ ರಾತ್ರಿ 10ರವರೆಗೆ ತೆರೆಯಲು ನಿರ್ಧರಿಸಲಾಗಿದೆ’ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ‘ಕಬ್ಬನ್ ಪಾರ್ಕ್ ತೋಟಗಾರಿಕಾ ಇಲಾಖೆ ವ್ಯಾಪ್ತಿಯಲ್ಲಿದೆ. ಅಲ್ಲಿಗೆ ಈ ಸಮಯ ಅನ್ವಯವಾಗುವುದಿಲ್ಲ. ಉದ್ಯಾನಗಳಲ್ಲಿ ಕಾನೂನುಬಾಹಿರ ಚಟುವಟಿಕೆ ನಿಯಂತ್ರಿಸಲು ಪೊಲೀಸರ ಗಸ್ತು, ಮಾರ್ಷಲ್ ಗಳನ್ನು ನಿಯೋಜಿಸಲಾಗುವುದು. ಅಲ್ಲದೆ, ಪಾಲಿಕೆಯ ದೂರವಾಣಿ ಸಂಖ್ಯೆಗೆ (22660000, 22221188) ಕರೆ ಮಾಡಿ ದೂರು ನೀಡಬಹುದು. ವಾಟ್ಸ್ಆ್ಯಪ್ ಮೂಲಕವೂ (9480685700) ಮಾಹಿತಿ ನೀಡಬಹುದು’ ಎಂದು ಹೇಳಿದರು.
‘ಅನಧಿಕೃತ ಫ್ಲೆಕ್ಸ್– ಎಆರ್ಒ ವಿರುದ್ಧವೂ ಪ್ರಕರಣ’
‘ಪಾಲಿಕೆ ವತಿಯಿಂದ ಅನಧಿಕೃತ ಫ್ಲೆಕ್ಸ್ಗಳನ್ನು ನಿಷೇಧಿಸಿದ್ದರೂ, ಎಲ್ಲ ರಾಜಕೀಯ ಪಕ್ಷಗಳ ವತಿಯಿಂದ ಫ್ಲೆಕ್ಸ್ ಹಾಕಲಾಗುತ್ತಿದೆ. ಅದನ್ನು ನಿಯಂತ್ರಿಸುವುದು ಸಹಾಯಕ ಕಂದಾಯ ಅಧಿಕಾರಿಯ (ಎಆರ್ಒ) ಜವಾಬ್ದಾರಿ. ಇನ್ನು ಮುಂದೆ ಅನಧಿಕೃತ ಫ್ಲೆಕ್ಸ್ ಅಳವಡಿಸಿದರೆ, ಅಳವಡಿಸಿದವರ ಜೊತೆಗೆ ಎಆರ್ಒಗಳ ಮೇಲೆಯೂ ಕ್ರಮ ತೆಗೆದುಕೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅನಧಿಕೃತ ಫ್ಲೆಕ್ಸ್ಗಳ ಬಗ್ಗೆಯೂ ಸಾರ್ವಜನಿಕರು ಸಹಾಯವಾಣಿ (1533) ಮೂಲಕ ದೂರು ನೀಡಬಹುದು. ವಾಟ್ಸ್ಆ್ಯಪ್ (9480683939) ಮೂಲಕವೂ ಅನಧಿಕೃತ ಫ್ಲೆಕ್ಸ್ಗಳ ಭಾವಚಿತ್ರ ಮತ್ತು ವಿಳಾಸವನ್ನು ಕಳುಹಿಸಬಹುದು’ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.