ADVERTISEMENT

ಅಂಬಿಗರ ಚೌಡಯ್ಯ, ಹರಿಹರ ಜಯಂತಿ

​ಪ್ರಜಾವಾಣಿ ವಾರ್ತೆ
Published 23 ಜೂನ್ 2024, 20:01 IST
Last Updated 23 ಜೂನ್ 2024, 20:01 IST
ವಚನಜ್ಯೋತಿ ಬಳಗ ಹಮ್ಮಿಕೊಂಡಿದ್ದ ಅಂಬಿಗರ ಚೌಡಯ್ಯ ಮತ್ತು ಹರಿಹರ ಕಾರ್ಯಕ್ರಮದಲ್ಲಿ ಪುಷ್ಪನಮನ ಸಲ್ಲಿಸಲಾಯಿತು
ವಚನಜ್ಯೋತಿ ಬಳಗ ಹಮ್ಮಿಕೊಂಡಿದ್ದ ಅಂಬಿಗರ ಚೌಡಯ್ಯ ಮತ್ತು ಹರಿಹರ ಕಾರ್ಯಕ್ರಮದಲ್ಲಿ ಪುಷ್ಪನಮನ ಸಲ್ಲಿಸಲಾಯಿತು   

ಬೆಂಗಳೂರು: ಕನ್ನಡ ಕಾವ್ಯಲೋಕದ ಪಥವನ್ನೇ ಬದಲಾಯಿಸಿದ ಅಂಬಿಗರ ಚೌಡಯ್ಯ ಮತ್ತು ಕವಿ ಹರಿಹರ ನಿಜ ಬಂಡಾಯಗಾರರು ಎಂದು ಸಾಹಿತಿ ಎಸ್‌. ಪಿನಾಕಪಾಣಿ ತಿಳಿಸಿದರು.

ನಗರದಲ್ಲಿ ವಚನಜ್ಯೋತಿ ಬಳಗ ಆಯೋಜಿಸಿದ್ದ ಅಂಬಿಗರ ಚೌಡಯ್ಯ ಮತ್ತು ಹರಿಹರ ಜಯಂತಿ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.

‘ಅಂಬಿಗರ ಚೌಡಯ್ಯ ಇತರ ವಚನಕಾರರಿಗಿಂತ ಭಿನ್ನವಾಗಿ ತನ್ನ ಹೆಸರನ್ನೇ ಅಂಕಿತವಾಗಿಟ್ಟುಕೊಂಡು ಸಮಾಜದಲ್ಲಿ ಕಂಡುಬರುತ್ತಿದ್ದ ಅನಾಚಾರ, ಡಂಭಾಚಾರಗಳನ್ನು ನಿರ್ಭೀತಿಯಿಂದ ಕಟುವಾಗಿ ಟೀಕಿಸಿರುವ ಕ್ರಾಂತಿಕಾರಿ’ ಎಂದು ವಿವರಿಸಿದರು.

ADVERTISEMENT

‘ರಗಳೆ ಕವಿ ಎಂದು ಪ್ರಖ್ಯಾತನಾಗಿರುವ ಹರಿಹರದೇವ ಕನ್ನಡ ಕಾವ್ಯಲೋಕದ ಪಥವನ್ನೇ ಬದಲಾಯಿಸಿದ ಬಂಡಾಯಗಾರ. ಅಲ್ಲಿಯವರೆಗೂ ರಾಜರ ಆಸ್ಥಾನದಲ್ಲಿ ಬಂಧಿಯಾಗಿದ್ದ ಕನ್ನಡ ಸಾರಸ್ವತವನ್ನು ಶ್ರೀಸಾಮಾನ್ಯರ ಬಳಿಗೆ ಕರೆತಂದವರು. ರಾಮಾಯಣ, ಮಹಾಭಾರತಗಳನ್ನು ತಮ್ಮ ರಾಜರಿಗೆ ಸಮೀಕರಿಸಿ ಬರೆದ ಮಹಾಕಾವ್ಯಗಳಿಗೆ ಭಿನ್ನವಾಗಿ ಜನಸಾಮಾನ್ಯರನ್ನು ನಾಯಕರನ್ನಾಗಿ ಮೆರೆಸಿ ಸಾಮಾಜಿಕ ನ್ಯಾಯ ನೀಡಿದವರು ಹರಿಹರ’ ಎಂದು ತಿಳಿಸಿದರು.

ಪ್ರತಿಭಾವಂತ ವಿದ್ಯಾರ್ಥಿಗಳಾದ ಹರ್ಷಿಲ್, ಬಿಂದಿಯ, ಮನೋಜ್, ಧ್ರುವ, ಜ್ಞಾನೇಶಗೆ ಹಿರಿಯ ಐ.ಟಿ. ಮ್ಯಾನೇಜರ್ ಪ್ರಶಾಂತ್ ಹೊಸಮಠ ಅವರು ಪ್ರಶಂಸಾ ಪತ್ರ ನೀಡಿದರು. ನಾಗರಬಾವಿ ಬಳಗದ ಖಜಾಂಚಿ ನಂದಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು. ವಿದ್ಯಾಭಾರತಿ ಶಾಲೆಯ ಪ್ರಾಚಾರ್ಯೆ ಭ್ರಮರಾಂಬ ಅಧ್ಯಕ್ಷತೆ ವಹಿಸಿದ್ದರು.

ಹರಿಹರದೇವನ ರಗಳೆಗಳ ಕೆಲ ಪದ್ಯಗಳನ್ನು ಸರ್ವಾಣಿ ಗಮಕ ವಾಚನ ಮಾಡಿದರು. ವಚನಜ್ಯೋತಿ ಬಳಗದ ಗಾಯಕಿ ಮೀನಾಕ್ಷಿ ಮೇಟಿ, ಪ್ರಧಾನ ಕಾರ್ಯದರ್ಶಿ ಪ್ರಭು, ಸಿಇಒ ರಾಜಾ ಗುರುಪ್ರಸಾದ್, ರುದ್ರೇಶ್, ಪದ್ಮಜ ಪ್ರಸನ್ನ, ಕವಿ ಗುಂಡೀಗೆರೆ ವಿಶ್ವನಾಥ್, ಹೋರಾಟಗಾರ ನಂ. ವಿಜಯಕುಮಾರ್, ಜಾಗತಿಕ ಲಿಂಗಾಯತದ ಬೇವೂರ್, ರೂಪಾ ಪ್ರಸಾದ್, ಕಾತ್ಯಾಯಿನಿ ಸುಭಾಷ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.