ADVERTISEMENT

ಪಕ್ಷವಿರೋಧಿ ಚಟುವಟಿಕೆ ಆರೋಪ: ಉಮೇಶ್‌ ಶೆಟ್ಟಿ ವಿರುದ್ಧ ದೂರು

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2024, 17:24 IST
Last Updated 10 ಫೆಬ್ರುವರಿ 2024, 17:24 IST
BJP
BJP   

ಬೆಂಗಳೂರು: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗೋವಿಂದರಾಜನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಪಾಲಿಕೆಯ ಮಾಜಿ ಸದಸ್ಯ ಕೆ.ಉಮೇಶ್‌ ಶೆಟ್ಟಿ ಅವರು ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಬಿಜೆಪಿ ಗೋವಿಂದರಾಜನಗರ ಮಂಡಲ ಸಮಿತಿ ಅಧ್ಯಕ್ಷ ವಿಶ್ವನಾಥ ಗೌಡ ಪಕ್ಷದ ಜಿಲ್ಲಾ ಘಟಕ ಹಾಗೂ ರಾಜ್ಯ ಘಟಕಕ್ಕೆ ದೂರು ನೀಡಿದ್ದಾರೆ.

‘ಗೋವಿಂದರಾಜನಗರ ಕ್ಷೇತ್ರದ ವ್ಯಾಪ್ತಿಯಲ್ಲಿ ಪಕ್ಷದ ಕಚೇರಿ ಇದೆ. ಆದರೂ, ಉಮೇಶ್‌ ಶೆಟ್ಟಿ ಪ್ರತ್ಯೇಕ ಕಚೇರಿ ತೆರೆಯುವ ಮೂಲಕ ಪಕ್ಷದ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ. ಮಂಡಲ ಸಮಿತಿಯಿಂದ ನಡೆದ ಕಾರ್ಯಕಾರಿಣಿಗೆ ಹಾಜರಾಗದೇ ಪ್ರತ್ಯೇಕ ಸಭೆ ನಡೆಸಿರುತ್ತಾರೆ’ ಎಂದು ಬಿಜೆಪಿ ಬೆಂಗಳೂರು ದಕ್ಷಿಣ ಜಿಲ್ಲಾ ಘಟಕದ ಅಧ್ಯಕ್ಷರಿಗೆ ಬರೆದಿರುವ ಪತ್ರದಲ್ಲಿ ದೂರಿದ್ದಾರೆ.

ಉಮೇಶ್‌ ಶೆಟ್ಟಿ ಪಕ್ಷದ ಶಿಸ್ತು ಉಲ್ಲಂಘಿಸಿ ಚಟುವಟಿಕೆ ನಡೆಸುತ್ತಿದ್ದಾರೆ. ಪಕ್ಷ ‍ವಿರೋಧಿ ಚಟುವಟಿಕೆ ನಡೆಸುತ್ತಿರುವ ಅವರ ವಿರುದ್ಧ ತಕ್ಷಣ ಶಿಸ್ತುಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.

ADVERTISEMENT

ಗಂಗಬೈರಯ್ಯ, ಮೋಹನ್‌ ಕುಮಾರ್‌, ದಾಸೇಗೌಡ, ಎಂ. ಚನ್ನಪ್ಪ, ಶಿಲ್ಪಾ ಶ್ರೀಧರ್‌, ರಾಜೇಶ್ವರಿ ಬೆಳಗೋಡು ಸೇರಿದಂತೆ ಪಾಲಿಕೆಯ ಒಂಬತ್ತು ಮಂದಿ ಮಾಜಿ ಸದಸ್ಯರು, ಬಿಜೆಪಿಯ ಯುವ ಮೋರ್ಚಾ, ಮಹಿಳಾ ಮೋರ್ಚಾ, ಅಲ್ಪಸಂಖ್ಯಾತರ ಮೋರ್ಚಾ, ಹಿಂದುಳಿದ ವರ್ಗಗಳ ಮೋರ್ಚಾ, ಪರಿಶಿಷ್ಟ ಜಾತಿ ಮೋರ್ಚಾ ಮತ್ತು ಪರಿಶಿಷ್ಟ ಪಂಗಡಗಳ ಮೋರ್ಚಾಗಳ ಅಧ್ಯಕ್ಷರು ಪತ್ರಕ್ಕೆ ಸಹಿ ಮಾಡಿದ್ದಾರೆ.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಚ ಬಿ.ವೈ. ವಿಜಯೇಂದ್ರ ಮತ್ತು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರಿಗೂ ದೂರಿನ ಪ್ರತಿಯನ್ನು ಕಳುಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.