ಬೆಂಗಳೂರು: ಗಂಗಮ್ಮನಗುಡಿ ಠಾಣೆ ವ್ಯಾಪ್ತಿಯಲ್ಲಿರುವ ಮನೆಯೊಂದರ ಬಳಿ ಪಿಸ್ತೂಲ್ನಿಂದ ಒಂದು ಬಾರಿ ಗಾಳಿಯಲ್ಲಿ ಗುಂಡು ಹಾರಿಸಿ ಜನರನ್ನು ಬೆದರಿಸಿದ್ದ ಆರೋಪದಡಿ ಪರಶುರಾಮ್ (58) ಅವರನ್ನು ಪೊಲೀಸರು ಬಂಧಿಸಿದ್ದಾರೆ.
‘ಅಬ್ಬಿಗೆರೆ ನಿವಾಸಿ ಪರಶುರಾಮ್ ಮಾಜಿ ಸೈನಿಕ. ಇವರ ಕೃತ್ಯದ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಸೆರೆ ಹಿಡಿಯಲಾಗಿದೆ’ ಎಂದು ಪೊಲೀಸರು ಹೇಳಿದರು.
‘ಆರೋಪಿ ಪರಶುರಾಮ್ ಅವರು ಲಕ್ಷ್ಮಮ್ಮ ಬಡಾವಣೆಯಲ್ಲಿರುವ ಮಹಿಳೆಯೊಬ್ಬರ ಮನೆಗೆ ಸೋಮವಾರ (ಫೆ. 5) ತಡರಾತ್ರಿ ಹೋಗಿದ್ದರು. ಆರೋಪಿಯನ್ನು ಗಮನಿಸಿದ್ದ ಮಹಿಳೆಯ ಮಗ, ‘ರಾತ್ರಿ ಸಮಯದಲ್ಲಿ ನಮ್ಮ ಮನೆಗೆ ಏಕೆ ಬಂದಿದ್ದೀರಿ’ ಎಂದು ಪ್ರಶ್ನಿಸಿದ್ದರು. ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ಜಗಳ ಶುರುವಾಗಿತ್ತು.’
‘ಸಿಟ್ಟಾದ ಪರುಶುರಾಮ್, ಪರವಾನಿಗೆ ಇದ್ದ ಪಿಸ್ತೂಲ್ನಿಂದ ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದ್ದರು. ಮಹಿಳೆಯ ಮಗ ಭಯಗೊಂಡಿದ್ದ. ಗುಂಡಿನ ಶಬ್ದ ಕೇಳಿ ಅಕ್ಕ–ಪಕ್ಕದ ಮನೆಯವರು ಹೊರಗೆ ಬಂದಿದ್ದರು. ಅಷ್ಟರಲ್ಲೇ ಆರೋಪಿ ಸ್ಥಳದಿಂದ ಹೊರಟು ಹೋಗಿದ್ದರು. ದೂರು ದಾಖಲಾಗುತ್ತಿದ್ದಂತೆ ತನಿಖೆ ನಡೆಸಿದಾಗ, ಆರೋಪಿ ಸಿಕ್ಕಿಬಿದ್ದರು’ ಎಂದು ಪೊಲೀಸರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.