ಯಲಹಂಕ: ರಂಗದ ಮೇಲೆ ಅಭಿನಯಿಸುತ್ತಿರುವಾಗಲೇ ಕುಸಿದು ಬಿದ್ದ ಕಲಾವಿದ ಎನ್.ಮುನಿಕೆಂಪಣ್ಣ (73), ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಅವರಿಗೆ ಪತ್ನಿ ಹಾಗೂ ಇಬ್ಬರು ಪುತ್ರರು ಇದ್ದಾರೆ. ಹುಟ್ಟೂರಾದ ದೇವನಹಳ್ಳಿ ತಾಲ್ಲೂಕು ಅರದೇಶನಹಳ್ಳಿ ಗ್ರಾಮದಲ್ಲಿ ಶನಿವಾರ ಅಂತ್ಯಕ್ರಿಯೆ ನಡೆಯಿತು.
ಸಾತನೂರು ಗ್ರಾಮದಲ್ಲಿ ‘ಕುರುಕ್ಷೇತ್ರ’ ನಾಟಕದಲ್ಲಿ ಶಕುನಿ ಪಾತ್ರಕ್ಕೆ ಬಣ್ಣ ಅವರು ಹಚ್ಚಿದ್ದರು. ಅಭಿನಯಿಸುವಾಗಲೇ ಶುಕ್ರವಾರ ರಾತ್ರಿ 1.15ರ ವೇಳೆಗೆ ವೇದಿಕೆ ಮೇಲೆಯೇ ಕುಸಿದು ಬಿದ್ದರು. ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ, ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದರು.
ಯಲಹಂಕದ ಸುರಭಿ ಲೇಔಟ್ನಲ್ಲಿದ್ದ ನಿವೃತ್ತ ಉಪನ್ಯಾಸಕರಾದ ಅವರು, ಇತ್ತೀಚೆಗೆ ದೇವನಹಳ್ಳಿಯಲ್ಲಿ ನಡೆದ 28ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು. ಎಸ್ಸೆಸ್ಸೆಲ್ಸಿ, ಪಿಯುಸಿ ಮತ್ತು ಪದವಿ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡುವ ಸಲುವಾಗಿ ಆರಂಭಿಸಲಾಗಿದ್ದ ವಿದ್ಯಾ ಪೋಷಕರ ಸಂಘದ ಸಂಸ್ಥಾಪಕ ನಿರ್ದೇಶಕರಾಗಿದ್ದರು. ಬಾಗಲೂರಿನ ಮಂಜು ವಿದ್ಯಾಸಂಸ್ಥೆಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.