ADVERTISEMENT

ಬೇಕರಿ ಮಾಲೀಕನ ಪತ್ನಿ ಕೊಲೆಗೆ ಯತ್ನ: 19 ವರ್ಷಗಳ ಬಳಿಕ ಆರೋಪಿ ಸೆರೆ

​ಪ್ರಜಾವಾಣಿ ವಾರ್ತೆ
Published 31 ಮೇ 2024, 16:18 IST
Last Updated 31 ಮೇ 2024, 16:18 IST
   

ಬೆಂಗಳೂರು: ಕೆಲಸ ಮಾಡುತ್ತಿದ್ದ ಬೇಕರಿಯ ಮಾಲೀಕನ ಪತ್ನಿಯ ಕೊಲೆಗೆ ಯತ್ನಿಸಿ ಪರಾರಿಯಾಗಿದ್ದ ಆರೋಪಿ ದೊಡ್ಡೇಗೌಡ ಅಲಿಯಾಸ್ ಚಂದ್ರು (45) ಎಂಬುವವರನ್ನು ಹನುಮಂತನಗರ ಠಾಣೆ ಪೊಲೀಸರು 19 ವರ್ಷಗಳ ಬಳಿಕ ಬಂಧಿಸಿದ್ದಾರೆ.

‘ಹಾಸನ ಜಿಲ್ಲೆ ಆಲೂರು ಗ್ರಾಮದ ದೊಡ್ಡೇಗೌಡ, 2005ರಲ್ಲಿ ಕೃತ್ಯ ಎಸಗಿ ಪರಾರಿಯಾಗಿದ್ದ. ಪ್ರಕರಣದ ತನಿಖೆ ಕೈಗೊಂಡಾಗ ಈತನ ಸುಳಿವು ಪತ್ತೆಯಾಗಿರಲಿಲ್ಲ. ಬಾಕಿ ಪ್ರಕರಣಗಳ ಬಗ್ಗೆ ಇತ್ತೀಚೆಗೆ ಮರು ತನಿಖೆ ಆರಂಭಿಸಲಾಗಿತ್ತು. ಸುಳಿವು ಲಭ್ಯವಾಗುತ್ತಿದ್ದಂತೆ ಸ್ವಂತ ಊರಿನಲ್ಲಿಯೇ ದೊಡ್ಡೇಗೌಡನನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಕೆಲಸ ಹುಡುಕಿಕೊಂಡು ನಗರಕ್ಕೆ ಬಂದಿದ್ದ ಆರೋಪಿ, ಹನುಮಂತನಗರದ 50 ಅಡಿ ರಸ್ತೆಯ ಬೇಕರಿಯಲ್ಲಿ ಕೆಲಸಕ್ಕಿದ್ದ. ಹಣಕಾಸು ವಿಚಾರಕ್ಕಾಗಿ ಮಾಲೀಕರ ಜೊತೆ ಜಗಳ ಮಾಡಲಾರಂಭಿಸಿದ್ದ. ಮಾಲೀಕರು ಕೆಲಸ ಬಿಡಿಸಿದ್ದರು. ಇದರಿಂದ ಸಿಟ್ಟಾದ ಆರೋಪಿ, 2005ರ ಜನವರಿ 13ರಂದು ರಾತ್ರಿ ಮಾಲೀಕನ ಮನೆಗೆ ನುಗ್ಗಿದ್ದ. ಮಾಲೀಕರ ಪತ್ನಿಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿ ಪರಾರಿಯಾಗಿದ್ದ’ ಎಂದರು.

ADVERTISEMENT

ವ್ಯವಸಾಯದ ಜೊತೆ ಆಟೊ ಚಾಲನೆ: ‘ನಗರ ತೊರೆದು ಸ್ವಂತ ಊರಿಗೆ ಹೋಗಿದ್ದ ಆರೋಪಿ, ಆಟೊ ಚಾಲಕನಾಗಿದ್ದ. ಜೊತೆಗೆ, ವ್ಯವಸಾಯ ಮಾಡುತ್ತಿದ್ದ. ಈ ಬಗ್ಗೆ ಮಾಹಿತಿ ಸಂಗ್ರಹಿಸಿ ಇತ್ತೀಚೆಗೆ ಈತನನ್ನು ಸೆರೆ ಹಿಡಿಯಲಾಯಿತು. ಸದ್ಯ ಈತ ನ್ಯಾಯಾಂಗ ಬಂಧನದಲ್ಲಿದ್ದಾನೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.