ಬೆಂಗಳೂರು: ಹೊಸೂರು ಸರ್ವಿಸ್ ರಸ್ತೆಯ ಬಳಿಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ ಪ್ರಕರಣದ ತನಿಖೆ ನಡೆಸಿದ್ದ ಎಚ್.ಎಸ್.ಆರ್.ಲೇಔಟ್ ಠಾಣೆ ಪೊಲೀಸರು 39ನೇ ಎಸಿಜೆಎಂ ನ್ಯಾಯಾಲಯಕ್ಕೆ ಶನಿವಾರ ಆರೋಪ ಪಟ್ಟಿ ಸಲ್ಲಿಸಿದ್ದಾರೆ.
86 ಸಾಕ್ಷಿಗಳ ಹೇಳಿಕೆ, 555 ಪುಟಗಳ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಇದೇ ಪ್ರಕರಣದಲ್ಲಿ ಅಪರಾಧ ದಂಡ ಪ್ರಕ್ರಿಯಾ ಸಂಹಿತೆಯ (ಸಿಆರ್ಪಿಸಿ) ಸೆಕ್ಷನ್ 164ರ ಅಡಿ ನಾಲ್ವರ ಹೇಳಿಕೆಯನ್ನು ನ್ಯಾಯಾಧೀಶರ ಎದುರು ದಾಖಲು ಮಾಡಲಾಗಿತ್ತು ಎಂದು ಪೊಲೀಸರು ಹೇಳಿದರು.
ಆಗಸ್ಟ್ 17ರಂದು ಕೃತ್ಯ ನಡೆದಿತ್ತು. ಆಗಸ್ಟ್ 20ರಂದು ಆರೋಪಿ, ಎಸ್.ಆರ್.ನಗರದ ನಿವಾಸಿ ಮುಕೇಶ್ವರನ್(24)ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ಆರೋಪಿ ವಿರುದ್ಧ ಸಾಂದರ್ಭಿಕ ಸಾಕ್ಷ್ಯಗಳನ್ನು ಆಧರಿಸಿ ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಏನಿದು ಪ್ರಕರಣ?: ‘ಖಾಸಗಿ ಕಾಲೇಜಿಜೊಂದರಲ್ಲಿ ವಿದ್ಯಾರ್ಥಿನಿ ಓದುತ್ತಿದ್ದರು. ಸ್ನೇಹಿತರ ಜೊತೆಗೆ ಪಾರ್ಟಿಗೆ ತೆರಳಿದ್ದರು. ತಡ ರಾತ್ರಿವರೆಗೂ ಕೋರಮಂಗಲದ ಪಬ್ನಲ್ಲಿ ಸ್ನೇಹಿತರ ಜತೆಗೆ ಪಾರ್ಟಿ ನಡೆಸಿದ್ದರು. ಬಳಿಕ ಸ್ನೇಹಿತರೊಂದಿಗೆ ಕಾರು ಚಾಲನೆ ಮಾಡಿಕೊಂಡು ಮನೆಗೆ ಹೋಗುವಾಗ ಮಾರ್ಗಮಧ್ಯೆ ಎರಡು ಆಟೊಗಳಿಗೆ ಕಾರು ಡಿಕ್ಕಿಯಾಗಿತ್ತು. ಅಲ್ಲಿ ಆಟೊ ಚಾಲಕರು ಹಾಗೂ ಯುವತಿಯ ಸ್ನೇಹಿತರ ಮಧ್ಯೆ ವಾಗ್ವಾದ ನಡೆದಿತ್ತು. ಗಲಾಟೆಯ ಮಾಹಿತಿ ಪೊಲೀಸರಿಗೂ ಗೊತ್ತಾದ್ದರಿಂದ ಸ್ಥಳಕ್ಕೆ ಹೊಯ್ಸಳ ಸಿಬ್ಬಂದಿ ಬಂದಿದ್ದರು. ಎಲ್ಲರನ್ನೂ ಪೊಲೀಸರು ಸಮಾಧಾನ ಪಡಿಸಿದ್ದರು. ಬಳಿಕ, ಸಂತ್ರಸ್ತ ಯುವತಿ ಕಾರು ಹಾಗೂ ಸ್ನೇಹಿತರನ್ನು ಅಲ್ಲೇ ಬಿಟ್ಟು ಆಟೊದಲ್ಲಿ ತೆರಳಿದ್ದರು. ಸ್ವಲ್ಪ ದೂರ ಪ್ರಯಾಣಿಸಿದ ಮೇಲೆ ಆಟೊದಿಂದ ಇಳಿದು ಮನೆಯತ್ತ ನಡೆದು ತೆರಳುತ್ತಿದ್ದರು. ಅದೇ ಮಾರ್ಗದಲ್ಲಿ ತೆರಳುತ್ತಿದ್ದ ದ್ವಿಚಕ್ರ ವಾಹನ ಸವಾರ ಮುಕೇಶ್ವರನ್ ಬಳಿ ಡ್ರಾಪ್ ಕೇಳಿ, ಆತನೊಂದಿಗೆ ಹೊರಟಿದ್ದರು. ಆತ ಆಕೆಯನ್ನು ಬೇರೊಂದು ಮಾರ್ಗದಲ್ಲಿ ಬೊಮ್ಮನಹಳ್ಳಿ ಸಮೀಪದ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ್ದ’ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.