ಬೆಂಗಳೂರು: ‘ವಿದ್ಯುತ್ ಅವಘಡದಿಂದ ಸಂಭವಿಸುವ ಪ್ರಾಣ ಹಾನಿ ತಪ್ಪಿಸಲು, ವಿದ್ಯುತ್ ಶಾರ್ಟ್ ಸರ್ಕೀಟ್ನಿಂದ ಉಂಟಾಗುವ ಅನಾಹುತ, ಆಸ್ತಿ ನಷ್ಟ ತಪ್ಪಿಸಲು ಜನರು ಜಾಗೃತರಾಗುವುದು ಅಗತ್ಯ’ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ತಿಳಿಸಿದರು.
ನಗರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ವಿದ್ಯುತ್ ಸುರಕ್ಷತಾ ಸಪ್ತಾಹ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕೈಗಾರಿಕೆಯಲ್ಲಿ ಕೆಲಸ ಮಾಡುವವರು, ಶಾಲಾ ಕಾಲೇಜಿನ ವಿದ್ಯಾರ್ಥಿಗಳು, ವಿದ್ಯುತ್ ಸರಬರಾಜು ಕಂಪನಿ ಸಿಬ್ಬಂದಿ, ವಿದ್ಯುತ್ ಗುತ್ತಿಗೆದಾರರು, ರೈತರು ಹಾಗೂ ಜನರನ್ನು ಈ ಅಭಿಯಾನದ ಮೂಲಕ ತಲುಪಬೇಕು ಎಂದರು.
ರಾಜ್ಯದಲ್ಲಿ ಅಳವಡಿಸಿರುವ, ಮುಂದೆ ಅಳವಡಿಸಲಾಗುವ ವಿದ್ಯುತ್ ಮಾರ್ಗಗಳು, ವಿದ್ಯುತ್ ಪರಿವರ್ತಕಗಳು, ವಿದ್ಯುತ್ ಉಪಸ್ಥಾವರಗಳು, ಬಹುಮಹಡಿ ಕಟ್ಟಡಗಳು ಸೇರಿದಂತೆ ಎಲ್ಲ ವಿದ್ಯುತ್ ಸ್ಥಾವರಗಳಲ್ಲೂ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ, ಮುಖ್ಯ ವಿದ್ಯುತ್ ಪರಿವೀಕ್ಷಕ ರಾಡ್ಸನ್ ಅಪ್ಪಚ್ಚು, ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪಂಕಜ್ ಕುಮಾರ್ ಪಾಂಡೆ, ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.