ADVERTISEMENT

ಬೆಂಗಳೂರು ಕೆಂಪೇಗೌಡ ಬಸ್‌ನಿಲ್ದಾಣ; ರೋಗ ಪ್ರಸರಣದ ತಾಣ

ಹೋಟೆಲ್‌, ತಿನಿಸುಗಳ ಮಳಿಗೆಗಳ ಮುಂದೆ ತೆರೆದಿಟ್ಟ ಪದಾರ್ಥಗಳು

ಚಂದ್ರಹಾಸ ಹಿರೇಮಳಲಿ
Published 13 ಅಕ್ಟೋಬರ್ 2024, 23:46 IST
Last Updated 13 ಅಕ್ಟೋಬರ್ 2024, 23:46 IST
ಮೆಜೆಸ್ಟಿಕ್‌ನ ಕೆಂಪೇಗೌಡ ಬಸ್‌ನಿಲ್ದಾಣದಲ್ಲಿ ಮಾರಾಟ ಮಾಡಲು ತೆರೆದಿಟ್ಟ ಆಹಾರ ಪದಾರ್ಥಗಳು ಪ್ರಜಾವಾಣಿ ಚಿತ್ರ:ಎಂ.ಎಸ್.ಮಂಜುನಾಥ್
ಮೆಜೆಸ್ಟಿಕ್‌ನ ಕೆಂಪೇಗೌಡ ಬಸ್‌ನಿಲ್ದಾಣದಲ್ಲಿ ಮಾರಾಟ ಮಾಡಲು ತೆರೆದಿಟ್ಟ ಆಹಾರ ಪದಾರ್ಥಗಳು ಪ್ರಜಾವಾಣಿ ಚಿತ್ರ:ಎಂ.ಎಸ್.ಮಂಜುನಾಥ್   

ಬೆಂಗಳೂರು: ಸದಾ ಜನದಟ್ಟಣೆಯ ಮೆಜೆಸ್ಟಿಕ್‌ನ ಕೆಎಸ್‌ಆರ್‌ಟಿಸಿಯ ಕೆಂಪೇಗೌಡ ಬಸ್‌ನಿಲ್ದಾಣ ರೋಗರುಜಿನಗಳನ್ನು ಹರಡುವ ಪ್ರಮುಖ ತಾಣವಾಗಿದೆ. ನಿತ್ಯವೂ ಲಕ್ಷಾಂತರ ಮಂದಿಯ ಓಡಾಟದ ತಾಣವಾಗಿರುವ ಬಸ್‌ ನಿಲ್ದಾಣದಲ್ಲಿ ಆಹಾರ ಸುರಕ್ಷತೆ ಕಣ್ಮರೆಯಾಗಿದೆ.

ರಾಜಧಾನಿಯಿಂದ ರಾಜ್ಯದ ಬಹುತೇಕ ಭಾಗಗಳಿಗೆ ತೆರಳುವ ಪ್ರಯಾಣಿಕರಿಗೆ ಇದೇ ಪ್ರಮುಖ ನಿಲ್ದಾಣ. ಒಂದೇ ಸೂರಿನಡಿ ಮೂರು ಟರ್ಮಿನಲ್‌. ಕೊಂಚ ದೂರದಲ್ಲಿ ಮೊತ್ತೊಂದು ‘ಶಾಂತಲಾ’ ಟರ್ಮಿನಲ್‌ ಇದೆ. ತುಮಕೂರು, ಚಿತ್ರದುರ್ಗ, ಬಳ್ಳಾರಿ, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಪುಣೆ ಮಾರ್ಗದ ಬಸ್‌ಗಳು ಟರ್ಮಿನಲ್‌ ಒಂದರಲ್ಲಿ, ತುಮಕೂರು, ಶಿವಮೊಗ್ಗ, ಸಾಗರ, ಶಿರಸಿ, ತೀರ್ಥಹಳ್ಳಿ, ಚಿಕ್ಕಮಗಳೂರು ಮೊದಲಾದ ಭಾಗಗಳಿಗೆ ತೆರಳುವ ಬಸ್‌ಗಳು ಟರ್ಮಿನಲ್‌ ಎರಡರಲ್ಲಿ,  ಟರ್ಮಿನಲ್‌ ಎರಡರ ‘ಎ’ ಭಾಗದಲ್ಲಿ ಹಾಸನ, ಸಕಲೇಶಪುರ, ಮಂಗಳೂರು, ಕೊಡಗು, ಧರ್ಮಸ್ಥಳ ಮೊದಲಾದ ಸ್ಥಳಗಳಿಗೆ ತೆರಳುವ ಬಸ್‌ಗಳು ನಿಲುಗಡೆ ಮಾಡುತ್ತವೆ. ನಿತ್ಯವೂ ಸರಾಸರಿ ಒಂದು ಲಕ್ಷ ಜನರು ಈ ನಿಲ್ದಾಣಗಳ ಮೂಲಕ ತೆರಳುತ್ತಾರೆ.

ಟರ್ಮಿನಲ್‌ ಒಂದರಲ್ಲಿ ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳ ಸಾರಿಗೆ ಬಸ್‌ ನಿಲುಗಡೆಗೂ ಅವಕಾಶ ಮಾಡಿಕೊಡಲಾಗಿದೆ. ಶಾಂತಲಾ ಟರ್ಮಿನಲ್‌ನಲ್ಲಿ ತಮಿಳುನಾಡು, ಕೋಲಾರ, ಚಿಂತಾಮಣಿ ಮೊದಲಾದ ಸ್ಥಳಗಳಿಗೆ ತೆರಳುವ ಬಸ್‌ಗಳು ನಿಲುಗಡೆ ಮಾಡುತ್ತವೆ.

ADVERTISEMENT

ಈ ಎಲ್ಲ ನಿಲ್ದಾಣಗಳಲ್ಲೂ ಹೋಟೆಲ್‌ಗಳು, ವಿವಿಧ ತಿನಿಸುಗಳ ಮಾರಾಟ ಮಳಿಗೆಗಳು ಇವೆ. ಬಹುತೇಕ ಹೋಟೆಲ್‌, ತಿನಿಸುಗಳ ಮಳಿಗೆಗಳಲ್ಲಿ ಸಿದ್ಧ ಆಹಾರ, ಸಿಹಿ ತಿನಿಸುಗಳನ್ನು ಮುಚ್ಚಿಡದೇ ಮುಕ್ತವಾಗಿ ತೆರೆದು ಇಟ್ಟಿದ್ದಾರೆ. ನಿಲ್ದಾಣದ ಒಳಗೆ ವೇಗವಾಗಿ ಬರುವ, ತಿರುವು ತೆಗೆದುಕೊಳ್ಳುವ, ಹಿಂಬದಿ ಚಲಿಸುವ ಬಸ್‌ಗಳಿಂದ ಹೊರಡುವ ದೂಳು ನೇರವಾಗಿ ಇಂತಹ ತೆರೆದಿಟ್ಟ ತಿನಿಸುಗಳ ಮೇಲೆ ಕೂರುತ್ತದೆ. ಮುಂಜಾವಿನಿಂದಲೇ ಇಟ್ಟ ಇಂತಹ ತಿನಿಸುಗಳನ್ನು ಪ್ರಯಾಣಿಕರು ಅರಿವಿಲ್ಲದೆ ಖರೀದಿಸಿ, ತಿನ್ನುತ್ತಾರೆ.  

‘ಕಚೇರಿ ಕೆಲಸ ಮುಗಿಸಿಕೊಂಡು ಹೊರಟಾಗ ರಾತ್ರಿ ತಡವಾಗಿತ್ತು. ಮೊದಲೇ ಬುಕ್ಕಿಂಗ್ ಮಾಡಿದ್ದ ಬಸ್‌ ಹೊರಡುವ ವೇಳೆಯಾಗಿದ್ದರಿಂದ ಊಟ ಮಾಡದೆ ಬಸ್‌ ನಿಲ್ದಾಣದತ್ತ ಹೊರಟೆ. ಸಾಮಗ್ರಿಗಳನ್ನು ಬಸ್‌ಗೆ ಇಟ್ಟು ಅಲ್ಲೇ ಇದ್ದ ತಿನಿಸುಗಳ ಮಳಿಗೆಯಲ್ಲಿ ಸಮೋಸ ಖರೀದಿಸಿದೆ. ಪ್ರಯಾಣ ಮಾಡುವಾಗ ಸೇವಿಸಿದೆ. ಮರು ದಿನ ಹೊಟ್ಟೆ ನೋವು ಆರಂಭವಾಗಿ ಎರಡು ದಿನ ಮಲಗಿದೆ. ಊರಿನಿಂದ ಮರಳಿದ ನಂತರ ಮಳಿಗೆ ಬಳಿ ಹೋಗಿ ಅವರಿಗೆ ನಡೆದ ಘಟನೆ ಮನವರಿಕೆ ಮಾಡಿ, ಮೇಲಧಿಕಾರಿಗಳ ಗಮನಕ್ಕೆ ತಂದೆ. ಆಗ ಅಧಿಕಾರಿಗಳು ಅವರಿಗೆ ಎಚ್ಚರಿಕೆ ನೀಡುವ ಭರವಸೆ ನೀಡಿದ್ದರೂ, ಪರಿಸ್ಥಿತಿ ಇಂದಿಗೂ ಸುಧಾರಿಸಿಲ್ಲ‘ ಎನ್ನುತ್ತಾರೆ ಹಾವೇರಿಯ ವಿ.ಕೆ. ಸತ್ಯಪ್ಪನವರ.

ದರವೂ ದುಬಾರಿ

ಬಸ್‌ನಿಲ್ದಾಣದ ಬಳಗೆ ನೀರಿನ ಬಾಟಲ್‌ ಹೊರತುಪಡಿಸಿ ಯಾವುದೇ ಸಾಮಗ್ರಿ ಖರೀದಿಸಿದರೂ ಗರಿಷ್ಠ ಮಾರಾಟ ದರಕ್ಕಿಂತ ಹೆಚ್ಚು ಹಣ ಪಡೆಯುತ್ತಾರೆ. ತಂಪು ಪಾನೀಯಗಳ ಮೇಲೂ ಶೇ 20ರಿಂದ 30ರಷ್ಟು ಅಧಿಕ ಹಣ ತೆಗೆದುಕೊಳ್ಳುತ್ತಾರೆ. ಕೆಲವೊಮ್ಮೆ ತಂಪು ಪಾನೀಯ ಸೇರಿದಂತೆ ಅವಧಿ ಮುಗಿದ ಆಹಾರ ಉತ್ಪನ್ನಗಳನ್ನು ಮಾರಾಟ ಮಾಡುತ್ತಾರೆ. 

‘ನಿಲ್ದಾಣಕ್ಕೆ ಬರುವ ಎಲ್ಲರೂ ಧಾವಂತದಲ್ಲೇ ಇರುತ್ತಾರೆ. ಯಾರಿಗೂ ವಿಚಾರಿಸುವ ತಾಳ್ಮೆಯಾಗಲಿ, ನಿಲ್ದಾಣದ ಮೇಲ್ವಿಚಾರಕರ ಬಳಿ ದೂರು ನೀಡಲು ಸಮಯ ಇರುವುದಿಲ್ಲ. ಪ್ರಯಾಣಿಕರ ಇಂತಹ ಪರಿಸ್ಥಿತಿಯನ್ನು ಅಲ್ಲಿನ ವ್ಯಾಪಾರಿಗಳು ದುರುಪಯೋಗ ಮಾಡಿಕೊಳ್ಳುತ್ತಾರೆ’ ಎನ್ನುತ್ತಾರೆ ಸಕಲೇಶಪುರದ ಲೋಕೇಶ್‌. 

ಮೆಜೆಸ್ಟಿಕ್‌ನ ಕೆಂಪೇಗೌಡ ಬಸ್‌ನಿಲ್ದಾಣದ ಬಯಲಲ್ಲೇ ಪ್ರಯಾಣಿಕರ ಆಹಾರ ಸೇವನೆ. ಪ್ರಜಾವಾಣಿ ಚಿತ್ರ:ಎಂ.ಎಸ್.ಮಂಜುನಾಥ್
ಮಳಿಗೆಗಳ ಮಾರಾಟದ ಮೇಲೆ ನಿತ್ಯ ನಿಗಾ ಇಡಲು ಕಷ್ಟವಾಗುತ್ತದೆ ವಾಣಿಜ್ಯ ವಿಭಾಗಕ್ಕೆ ದೂರು ನೀಡಿದರೆ ಕ್ರಮ ಕೈಗೊಳ್ಳುತ್ತಾರೆ
ಪ್ರಭಾ ಜವಳಿ, ಸಹಾಯಕ ಸಂಚಾರ ನಿಯಂತ್ರಣಾಧಿಕಾರಿ ಕೆಂಪೇಗೌಡ ನಿಲ್ದಾಣ

ಗಬ್ಬುನಾತ ಬೀರುವ ಶೌಚಾಲಯಗಳು

ಬಸ್‌ ನಿಲ್ದಾಣಗಳಲ್ಲಿನ ಸಾರ್ವಜನಿಕ ಶೌಚಾಲಯಗಳ ಸ್ಥಿತಿಯೂ ಶೋಚನೀಯವಾಗಿದೆ. ಸ್ವಚ್ಛತೆಯ ಕೊರತೆ ಇದೆ. ಗಬ್ಬುನಾತ ಮೂಗಿಗೆ ರಾಚಿ ಉಬ್ಬಳಿಕೆ ತರಿಸುತ್ತದೆ. ಅಂತಹ ಸ್ಥಿತಿಯಲ್ಲೇ ಜನರು ಸರದಿಯಲ್ಲಿ ನಿಂತು ತಮ್ಮ ನಿತ್ಯಕರ್ಮಗಳನ್ನು ಮುಗಿಸಿಕೊಳ್ಳುತ್ತಾರೆ. ಬಸ್‌ ನಿಲ್ದಾಣಗಳಲ್ಲಿ ಸುತ್ತಲಿನ ಸ್ಥಳಗಳಲ್ಲಿ ಕೆಲವೆಡೆ ಸುಲಭ ಶೌಚಾಲಯಗಳನ್ನು ಸ್ಥಾಪಿಸಲಾಗಿದೆ. ಜನರು ಹಣ ಕೊಟ್ಟು ಬಳಸಿದರೂ ಸ್ವಚ್ಛತೆ ಮರೀಚಿಕೆಯಾಗಿ ಉಳಿದಿದೆ.

ಒಂದೆರಡು ಬಾರಿಯಷ್ಟೇ ಪರಿಶೀಲನೆ

ಬಸ್‌ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಆಹಾರ ಸುರಕ್ಷತೆಯ ಖಾತ್ರಿ ನೀಡುವುದು ನಿಲ್ದಾಣದ ಮೇಲ್ವಿಚಾರಕರು ವಿಭಾಗೀಯ ನಿಯಂತ್ರಣಾಧಿಕಾರಿಗಳ ಜವಾಬ್ದಾರಿ. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯು ಈ ಕುರಿತು ನಿಗಾವಹಿಸುತ್ತದೆ. ಆದರೆ ಅವರು ವರ್ಷಕ್ಕೆ ಒಂದೆರಡು ಬಾರಿ ದಾಳಿ ನಡೆಸಿ ಸುಮ್ಮನಾಗುತ್ತಾರೆ. ಜುಲೈನಲ್ಲಿ ರಾಜ್ಯದ ವಿವಿಧ ಬಸ್ ನಿಲ್ದಾಣಗಳಲ್ಲಿ ಇರುವ 748 ವ್ಯಾಪಾರ ಮಳಿಗೆಗಳು ಹಾಗೂ ಆಹಾರ ಉದ್ದಿಮೆಗಳನ್ನು ಪರಿಶೀಲನೆ ಮಾಡಲಾಗಿತ್ತು. 120 ಆಹಾರ ಮಳಿಗೆಗಳಲ್ಲಿ ನೈರ್ಮಲ್ಯದ ಕೊರತೆ ಕಂಡುಬಂದಿತ್ತು. 19 ಆಹಾರ ಮಳಿಗೆಗಳಿಗೆ ₹ 48 ಸಾವಿರ ದಂಡ ವಿಧಿಸಲಾಗಿತ್ತು. ನಂತರ ಯಾವುದೇ ತಪಾಸಣೆ ನಡೆದಿಲ್ಲ. ಮತ್ತೆ ಹಿಂದಿನಂತೆ ಎಲ್ಲವೂ ಸಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.