ADVERTISEMENT

ಬೆಂಗಳೂರು | ರಸ್ತೆ ವಿಭಜಕಕ್ಕೆ ಎಲೆಕ್ಟ್ರಿಕ್ ಸ್ಕೂಟರ್ ಡಿಕ್ಕಿ; ಅಣ್ಣ, ತಮ್ಮ ಸಾವು

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2024, 23:02 IST
Last Updated 17 ಅಕ್ಟೋಬರ್ 2024, 23:02 IST
<div class="paragraphs"><p>ಅಪಘಾತ</p></div>

ಅಪಘಾತ

   

–ಪ್ರಾತಿನಿಧಿಕ ಚಿತ್ರ

ಬೆಂಗಳೂರು: ಹೆಬ್ಬಾಳ ಸಂಚಾರ ಪೊಲೀಸ್‌ ಠಾಣಾ ವ್ಯಾಪ್ತಿಯ ಹೊರ ವರ್ತುಲ ರಸ್ತೆಯ ದೇವಿನಗರ ಬಸ್‌ ತಂಗುದಾಣದ ಬಳಿ ರಸ್ತೆ ವಿಭಜಕಕ್ಕೆ ಎಲೆಕ್ಟ್ರಿಕ್‌ ಸ್ಕೂಟರ್‌ವೊಂದು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟಿದ್ದಾರೆ.

ADVERTISEMENT

ಜಿ.ನಾಗರಾಜ್‌ (30) ಹಾಗೂ ಪಿ.ರಾಜೇಶ್‌ಕುಮಾರ್‌ (27) ಮೃತಪಟ್ಟವರು.‌

‘ಬುಧವಾರ ರಾತ್ರಿ ಇಬ್ಬರೂ ಎಲೆಕ್ಟ್ರಿಕ್‌ ಸ್ಕೂಟರ್‌ನಲ್ಲಿ ತೆರಳುತ್ತಿದ್ದರು. ನಾಗರಾಜ್‌ ಅವರು ಸ್ಕೂಟರ್‌ ಚಲಾಯಿಸುತ್ತಿದ್ದರು. ಅವರ ಚಿಕ್ಕಮ್ಮನ ಮಗ ರಾಜೇಶ್‌ ಅವರು ಹಿಂದೆ ಕುಳಿತಿದ್ದರು. ಇಬ್ಬರೂ ಲೊಟ್ಟೆಗೊಲ್ಲಹಳ್ಳಿ ಕಡೆಯಿಂದ ಹೆಬ್ಬಾಳದ ಕಡೆಗೆ ತೆರಳುತ್ತಿದ್ದರು. ದೇವಿನಗರ ಕ್ರಾಸ್‌ನ ಬಸ್ ತಂಗುದಾಣದ ಬಳಿ ಸ್ಕೂಟರ್‌ ನಿಯಂತ್ರಣ ತಪ್ಪಿ ವಿಭಜಕಕ್ಕೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಇಬ್ಬರೂ ರಸ್ತೆ ಮೇಲೆ ಬಿದ್ದಿದ್ದರು. ಇಬ್ಬರ ತಲೆಗೂ ಗಂಭೀರ ಸ್ವರೂಪದ ಗಾಯಗಳಾಗಿದ್ದವು. ಅದೇ ಮಾರ್ಗದಲ್ಲಿ ಬರುತ್ತಿದ್ದ ವಾಹನ ಚಾಲಕರು ಅಪಘಾತವನ್ನು ಗಮನಿಸಿ ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿ ಇಬ್ಬರೂ ಮೃತಪಟ್ಟಿದ್ದಾರೆ’ ಎಂದು ಸಂಚಾರ ವಿಭಾಗದ ಪೊಲೀಸರು ಹೇಳಿದರು.

‘ಅತಿ ವೇಗದಿಂದ ಅಪಘಾತ ಸಂಭವಿಸಿರುವ ಸಾಧ್ಯತೆಯಿದೆ. ಡಿಕ್ಕಿಯ ರಭಸಕ್ಕೆ ಸ್ಕೂಟರ್‌ ಸಂಪೂರ್ಣ ನುಜ್ಜುಗುಜ್ಜಾಗಿದೆ. ಇಬ್ಬರೂ ಮದ್ಯ ಸೇವಿಸಿದ್ದರು ಎನ್ನಲಾಗಿದೆ. ಈ ಬಗ್ಗೆ ಪರಿಶೀಲಿಸಲಾಗುತ್ತಿದೆ. ದಿವ್ಯಾ ಎಂಬುವವರು ದೂರು ನೀಡಿದ್ದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಸಂಚಾರ ಪೊಲೀಸರು ಹೇಳಿದರು.

‘ಮೃತರ ಪೈಕಿ ಒಬ್ಬರ ಬಳಿ ಚಾಕು ಇತ್ತು. ಅದನ್ನು ಯಾವ ಉದ್ದೇಶಕ್ಕೆ ರಾತ್ರಿ ವೇಳೆ ಇಟ್ಟುಕೊಂಡಿದ್ದರು ಎಂಬುದರ ಕುರಿತೂ ತನಿಖೆ ನಡೆಸುವಂತೆ ಹೆಬ್ಬಾಳ ಠಾಣೆ ಪೊಲೀಸರಿಗೆ ಕೋರಲಾಗಿದೆ’ ಎಂದು ಸಂಚಾರ ಪೊಲೀಸರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.