ಬೆಂಗಳೂರು: ನಗರದ ವಿಲ್ಸನ್ ಗಾರ್ಡನ್ನಲ್ಲಿ ನಿಂತಿದ್ದ ಟಿಪ್ಪರ್ ಲಾರಿ ಏಕಾಏಕಿ ಚಲಿಸಿ ವಿದ್ಯುತ್ ಕಂಬ ಹಾಗೂ ರಸ್ತೆ ಬದಿ ಮಾರಾಟಕ್ಕೆ ಇಟ್ಟಿದ್ದ ಗಣೇಶ ಮೂರ್ತಿಗೆ ಡಿಕ್ಕಿ ಹೊಡೆದಿದೆ.
ಶನಿವಾರ ರಾತ್ರಿ 1.30ರ ಸುಮಾರಿಗೆ ಚಾಲಕ, ಜಲ್ಲಿ ಕಲ್ಲು ಅನ್ಲೋಡ್ ಮಾಡಲು ಟಿಪ್ಪರ್ ನಿಲ್ಲಿಸಿದ್ದರು. ಈ ವೇಳೆ ಟಿಪ್ಪರ್ ಏಕಾಏಕಿ ಚಲಿಸಿ ವಿದ್ಯುತ್ ಕಂಬ ಹಾಗೂ ಮೂರ್ತಿಗೆ ಡಿಕ್ಕಿ ಹೊಡೆದು ನಿಂತಿದೆ.
ಹಾನಿಯಾಗಿದ್ದ ವಿದ್ಯುತ್ ಕಂಬವನ್ನು ಬೆಸ್ಕಾಂ ಸಿಬ್ಬಂದಿ ಭಾನುವಾರ ತೆರವುಗೊಳಿಸಿದ್ದು, ಸ್ಥಳಕ್ಕೆ ವಿಲ್ಸನ್ ಗಾರ್ಡನ್ ಸಂಚಾರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಗಣೇಶ ಮೂರ್ತಿಗಳ ವ್ಯಾಪಾರಿ ಚೇತನ್ ಕುಮಾರ್, ‘ಶನಿವಾರ ರಾತ್ರಿ 1 ಗಂಟೆಗೆ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಗಣೇಶ ಮೂರ್ತಿಗೆ ಹಾನಿಯಾಗಿದೆ. ಈ ಮೂರ್ತಿಯನ್ನು ಗ್ರಾಹಕರೊಬ್ಬರು ₹ 75 ಸಾವಿರ ಮುಂಗಡ ನೀಡಿ ಕಾಯ್ದಿರಿಸಿದ್ದರು. ಭಾನುವಾರ ಸಂಜೆ ತೆಗೆದುಕೊಂಡು ಹೋಗುತ್ತಿದ್ದರು. ನಷ್ಟಕ್ಕೆ ಪರಿಹಾರ ಕೊಡಬೇಕು. ಈ ಸಂಬಂಧ ಪೊಲೀಸರಿಗೆ ದೂರು ನೀಡಲಾಗುವುದು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.