ಬೆಂಗಳೂರು: ಬಸವಣ್ಣ ಇದ್ದೆಡೆ ಭಯವಿಲ್ಲ. ಬಸವಣ್ಣ ಎಂದರೆ ಹಸಿವಿಲ್ಲ. ಬಸವ ಎಂದರೆ ಬೆಳಕು. ಬಸವ ಎಂದರೆ ಬದುಕು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬಣ್ಣಿಸಿದರು.
ಬಸವ ಸಮಿತಿಯು ನಗರದ ಬಸವ ಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಬಸವಣ್ಣನವರ ವಿಚಾರಗಳ ಕಡೆಗೆ ಜಗತ್ತು ತಿರುಗಿ ನೋಡುತ್ತಿದೆ. ಅವರ ತತ್ವ, ಆದರ್ಶಗಳನ್ನು ಅಳವಡಿಸಿಕೊಳ್ಳುವುದು ಇಂದಿನ ತುರ್ತು. ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ನಮ್ಮ ಕಾಂಗ್ರೆಸ್ ಸರ್ಕಾರ ಘೋಷಣೆ ಮಾಡಿ ಗೌರವ ಸಲ್ಲಿಸಿದೆ. ನಮ್ಮ ಸರ್ಕಾರ ಬಸವಣ್ಣ ಹಾಕಿಕೊಟ್ಟ ಹಾದಿಯಲ್ಲಿ ನಡೆಯುತ್ತಿದೆ’ ಎಂದು ಹೇಳಿದರು.
‘ನಾನು ರೇಣುಕಾಚಾರ್ಯ ಕಾಲೇಜಿನಲ್ಲಿ ಓದಿದ್ದರೂ ಯಾರೂ ಬಸವಣ್ಣರ ಬಗ್ಗೆ ತಿಳಿಸಿರಲಿಲ್ಲ. ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದ ವಿಲಾಸ್ ರಾವ್ ದೇಶ್ ಮುಖ್ ಅವರು ಬಸವ ಜಯಂತಿಗೆ ರಜೆ ಘೋಷಣೆ ಮಾಡಿದಾಗ ಆಸಕ್ತಿ ಬಂದು ತಿಳಿದುಕೊಂಡೆ’ ಎಂದು ತಿಳಿಸಿದರು.
ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಲಿಂಗಾಯತ ಎಜುಕೇಶನ್ (ಕೆಎಲ್ಇ) ಸೊಸೈಟಿ ಅಧ್ಯಕ್ಷ ಪ್ರಭಾಕರ ಕೋರೆ ಅವರಿಗೆ ‘ಕಾಯಕ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ವಿವಿಧೆಡೆ ಬಸವ ಜಯಂತಿ: ರಾಜ್ಯದ ಸಾಂಸ್ಕೃತಿಕ ನಾಯಕ, ಜಗಜ್ಯೋತಿ ಬಸವಣ್ಣ ಅವರ ಜಯಂತಿಯನ್ನು ನಗರದ ಎಲ್ಲೆಡೆ ಸಂಭ್ರಮದಿಂದ ಆಚರಿಸಲಾಯಿತು.
ಬಸವ ಜಯಂತಿ ಅಂಗವಾಗಿ ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನಡೆದವು. ರಸ್ತೆ ಬದಿಯಲ್ಲಿ, ಉದ್ಯಾನಗಳಲ್ಲಿರುವ ಬಸವೇಶ್ವರರ ಪುತ್ಥಳಿಗಳಿಗೆ ಪೂಜೆ ಸಲ್ಲಿಸಿ ಪುಷ್ಪ ನಮನ ಸಲ್ಲಿಸಲಾಯಿತು. ಹಲವು ಕಡೆಗಳಲ್ಲಿ ಬಸವೇಶ್ವರರ ಛಾಯಾಚಿತ್ರ, ಪ್ರತಿಮೆಗಳ ಮೆರವಣಿಗೆ ನಡೆಸಲಾಯಿತು.
ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕಕ್ಕೆ ಮಹತ್ತರ ಕೊಡುಗೆಯನ್ನು ನೀಡಿದ ಕಲ್ಯಾಣ ಕ್ರಾಂತಿಯ ಮೂಲಕ ಸಮಾನತೆಯ ಆಶಯವನ್ನು ಎತ್ತಿ ಹಿಡಿದ ಬಸವಣ್ಣನ ಕೊಡುಗೆ ಅಪಾರ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ನೇ.ಭ.ರಾಮಲಿಂಗ ಶೆಟ್ಟಿ ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಏರ್ಪಡಿಸಲಾಗಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪರಿಷತ್ತಿನ ಪ್ರಕಟಣಾ ವಿಭಾಗದ ಸಂಚಾಲಕ ಎನ್.ಎಸ್.ಶ್ರೀಧರ ಮೂರ್ತಿ, ನಟರಾಜ್, ರಾಘವೇಂದ್ರ ಕುಲಕರ್ಣಿ, ಕೇಶವ ಮೂರ್ತಿ, ಶ್ರೀನಿವಾಸ ಮೂರ್ತಿ ಭಾಗವಹಿಸಿದ್ದರು.
Cut-off box - ವಿಜಯನಗರದಲ್ಲಿ ಬಸವ ಉತ್ಸವ ವಚನಜ್ಯೋತಿ ಬಳಗವು ವಿಜಯನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬಸವ ಉತ್ಸವದಲ್ಲಿ ಸಾಹಿತಿಗಳು ಕಲಾವಿದರು ರಾಜಕಾರಣಿಗಳು ಪಾಲ್ಗೊಂಡು ಮೆರಣಿಗೆಯಲ್ಲಿ ಹೆಜ್ಜೆ ಹಾಕಿದರು. ‘ಎಲ್ಲರನ್ನು ಅಪ್ಪಿಕೊಂಡು ಒಪ್ಪಿಕೊಂಡು ಜೊತೆಗೆ ಕರೆದುಕೊಂಡು ಮುನ್ನಡೆಸಿದ ಬಸವಣ್ಣ ಸಕಲ ಜೀವಾತ್ಮಕ್ಕೂ ಲೇಸನ್ನೇ ಬಯಸಿದವರು’ ಎಂದು ವಿಜಯನಗರ ಶಾಸಕ ಎಂ. ಕೃಷ್ಣಪ್ಪ ಬಣ್ಣಿಸಿದರು. ಬಸವ ಉತ್ಸವಕ್ಕೆ ಚಾಲನೆ ನೀಡಿದ ಬೇಲಿಮಠದ ಶಿವರುದ್ರಸ್ವಾಮೀಜಿ ಮಾತನಾಡಿ ‘ಬಸವಣ್ಣನವರೊಡನೆ ಹೆಜ್ಜೆ ಎಂದರೆ ಕೇವಲ ಮೆರವಣಿಗೆಯಲ್ಲ ಅದು ನಿರಂತರವಾಗಿ ಬಸವ ತತ್ತ್ವಗಳ ಜೊತೆ ಹೆಜ್ಜೆ ಹಾಕುವುದು ವಚನ ಸಂದೇಶವನ್ನು ಪರಿಪಾಲಿಸುವುದು’ ಎಂದು ಅಭಿಪ್ರಾಯಪಟ್ಟರು. ಬಹಿರಂಗವಾಗಿ ಹೆಜ್ಜೆ ಹಾಕುವುದರೊಂದಿಗೆ ಅಂತರಂಗವಾಗಿಯೂ ತತ್ತ್ವದೊಡನೆ ನಡೆಯಬೇಕು ಎಂದು ಸಲಹೆ ನೀಡಿದರು. ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿ. ಸೋಮಶೇಖರ್ ವಚನಜ್ಯೋತಿ ಬಳಗ ಅಧ್ಯಕ್ಷ ಪಿನಾಕಪಾಣಿ ಮಾತನಾಡಿದರು. ಬಸವಣ್ಣನವರೊಂದಿಗೆ ವಿಜಯನಗರದಿಂದ ಹೊರಟ ನಡಿಗೆ ಅರ್ಧ ಬೆಂಗಳೂರು ಸಂಚರಿಸಿ ಸಂಜೆ ಮಹಾತ್ಮ ಗಾಂಧಿ ರಸ್ತೆಯಲ್ಲಿ ವಚನಗಳನ್ನು ಹಾಡಿ ವಚನ ಜಯಘೋಷಗಳನ್ನು ಮಾಡಿ ಮುಕ್ತಾಯಗೊಳಿಸಲಾಯಿತು.
Cut-off box - null
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.