ADVERTISEMENT

ಬೆಂಗಳೂರು | ಹೆಚ್ಚುವರಿ ಹಣ ವಸೂಲಿ: ಬಿಡಿಎ ನಿವೇಶನದಾರರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 18 ಮೇ 2024, 15:41 IST
Last Updated 18 ಮೇ 2024, 15:41 IST
ನಾಡಪ್ರಭು ಕೆಂಪೇಗೌಡ ಬಡಾವಣೆ.
ನಾಡಪ್ರಭು ಕೆಂಪೇಗೌಡ ಬಡಾವಣೆ.   

ಬೆಂಗಳೂರು: ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ರಸ್ತೆ ಪುನಶ್ಚೇತನ ಸೇರಿ ವಿವಿಧ ಅಭಿವೃದ್ಧಿ ಕಾರ್ಯಗಳ ಹೆಸರಿನಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಹೆಚ್ಚುವರಿ ಶುಲ್ಕ ವಸೂಲಿ ಮಾಡುತ್ತಿದೆ ಎಂದು ಆರೋಪಿಸಿರುವ ಎನ್‌ಪಿಕೆಎಲ್‌ ಫೋರಂನ ಪದಾಧಿಕಾರಿಗಳು, ತಕ್ಷಣವೇ ಶುಲ್ಕ ವಸೂಲಿ ಕೈಬಿಡುವಂತೆ ಮನವಿ ಮಾಡಿದ್ದಾರೆ.

ಹೆಚ್ಚುವರಿ ಶುಲ್ಕ ವಸೂಲಿ ಕೈಬಿಡುವಂತೆ ಆಗ್ರಹಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸರ್ಕಾರದ ಮುಖ್ಯ ಕಾರ್ಯದರ್ಶಿ, ಬಿಡಿಎ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ.

‘ಕುಡಿಯುವ ನೀರು, ಮರುಬಳಕೆಯ ನೀರು ಮತ್ತು ಯುಜಿಡಿ ವ್ಯವಸ್ಥೆಗೆ ₹30 ಸಾವಿರ ಶುಲ್ಕವನ್ನು ಪ್ರಾಧಿಕಾರ ಈಗಲೇ ತೆಗೆದುಕೊಳ್ಳುತ್ತಿದೆ. ಆದರೆ, ಮನೆ ನಿರ್ಮಿಸುವವರಿಗೆ ಯುಜಿಡಿ ಮತ್ತು ನೀರಿನ ಸೌಲಭ್ಯವನ್ನು ಹೊಸ ಮನೆಗೆ ವಾಸಕ್ಕೆ ಬಂದ ನಂತರವೇ ಕೊಡುವುದಾಗಿ ಪ್ರಾಧಿಕಾರ ಹೇಳಿದೆ. ಮನೆ ಕಟ್ಟಲು ಕನಿಷ್ಠವೆಂದರೂ ಒಂದರಿಂದ ಒಂದೂವರೆ ವರ್ಷ ಬೇಕಿದೆ. ಬಳಸಲು ಸಾಧ್ಯವೇ ಇಲ್ಲದ ಯುಜಿಡಿ ಹಾಗೂ ನೀರಿನ ಶುಲ್ಕವನ್ನು ಈಗಲೇ ಏಕೆ ಪಾವತಿಸಬೇಕು’ ಎಂದು ಫೋರಂ ಅಧ್ಯಕ್ಷ ಎಂ.ಇ.ಚನ್ನಬಸವರಾಜ ಪ್ರಶ್ನಿಸಿದ್ದಾರೆ.

ADVERTISEMENT

‘ರಸ್ತೆಯನ್ನು ಅಗೆದು ಹಾಳು ಮಾಡುವುದನ್ನು ತಪ್ಪಿಸಲು ಪ್ರತಿಯೊಂದು ನಿವೇಶನಗಳಿಗೂ ನೆಲದಡಿ ವಿದ್ಯುತ್ ಕೇಬಲ್‌, ನೀರಿನ ಪೈಪ್‌, ಒಳಚರಂಡಿ ಸಂಪರ್ಕಗಳನ್ನು ಒದಗಿಸುವ ಕಾಮಗಾರಿ ಮಾಡಲಾಗಿದೆ. ಇದರಿಂದ ಕಟ್ಟಡ ನಿರ್ಮಿಸುವವರು ಮೂಲ ಸೌಕರ್ಯಗಳ ಸಂಪರ್ಕಕ್ಕೆ ರಸ್ತೆ ಅಗೆಯುವ ಅವಶ್ಯಕತೆ ಇಲ್ಲ. ಆದರೆ, ಈ ನಡುವೆ ರಸ್ತೆ ಪುನಶ್ಚೇತನಕ್ಕೆ ಎಂದು ಹೆಚ್ಚುವರಿಯಾಗಿ ಹಣ ವಸೂಲಿ ಮಾಡುತ್ತಿರುವುದು ಖಂಡನಾರ್ಹ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.