ಬೆಂಗಳೂರು: ‘ಪೊಲೀಸರು, ಬಿಬಿಎಂಪಿ ಅಧಿಕಾರಿಗಳು ಬೀದಿಬದಿ ವ್ಯಾಪಾರಿಗಳಿಗೆ ಅತಿಯಾದ ಕಿರುಕುಳ ನೀಡುತ್ತಿದ್ದು, ಸಮಸ್ಯೆ ಮುಂದುವರಿದರೆ ಅದರ ವಿರುದ್ಧ ಸಂಘಟಿತರಾಗಿ ಪ್ರತಿಭಟಿಸಲಾಗುವುದು’ ಎಂದು ಕರ್ನಾಟಕ ಪ್ರಗತಿಪರ ಬೀದಿ ವ್ಯಾಪಾರಿಗಳ ಸಂಘದ ಬೆಂಗಳೂರು ನಗರ ಘಟಕದ ಅಧ್ಯಕ್ಷ ಎಸ್. ಬಾಬು ಹೇಳಿದರು.
ಮಂಗಳವಾರ ನಡೆದ ಕರ್ನಾಟಕ ಪ್ರಗತಿಪರ ಬೀದಿ ವ್ಯಾಪಾರಿಗಳ ಸಂಘದ ಸರ್ವಸದಸ್ಯರ ಸಭೆಯಲ್ಲಿ ಅವರು ಮಾತನಾಡಿದರು.
‘ಬೀದಿ ವ್ಯಾಪಾರಿಗಳ ಸತತ ಹೋರಾಟದಿಂದ ‘ಬೀದಿ ವ್ಯಾಪಾರಿಗಳ ಜೀವನೋಪಾಯದ ರಕ್ಷಣೆ ಹಾಗೂ ನಿಯಂತ್ರಣ ಕಾಯ್ದೆ–2014’ ಜಾರಿಗೆ ಬಂದಿದೆ. ಬೀದಿ ವ್ಯಾಪಾರಿಗಳಿಗೆ ಜೀವನೋಪಾಯದ ರಕ್ಷಣೆ ನೀಡುವುದರ ಜೊತೆಗೆ ಹಕ್ಕುಗಳನ್ನು ಈ ಕಾಯ್ದೆ ನೀಡುತ್ತದೆ. ಈ ಕಾನೂನನ್ನು ಸರಿಯಾಗಿ ಅನುಷ್ಠಾನಗೊಳಿಸುವಂತೆ ಸತತವಾಗಿ ಹೋರಾಟ ನಡೆಯುತ್ತಿದೆ’ ಎಂದು ಹೇಳಿದರು.
ಸಭೆಯಲ್ಲಿ ಬೆಂಗಳೂರು ನಗರ ಘಟಕದ 15 ಸದಸ್ಯರ ಸಮಿತಿಯನ್ನು ರಚಿಸಲಾಯಿತು. ಎಸ್. ಬಾಬು (ಅಧ್ಯಕ್ಷ), ಸೈಯದ್ ಜಮೀರ್ (ಕಾರ್ಯದರ್ಶಿ), ಮಂಜು (ಉಪಾಧ್ಯಕ್ಷ), ಫಯಾಜ್ ಅಲಿ, ವನಜಾ, ಅಶೋಕ್, ರತ್ನಮ್ಮ, ವಿನಯ್, ಲೇಖಾ, ಶಶಿಕಲಾ ಅವರನ್ನು ಜಂಟಿ ಕಾರ್ಯದರ್ಶಿಗಳನ್ನಾಗಿ ಆಯ್ಕೆ ಮಾಡಲಾಯಿತು. ಅಮೀರುಲ್ಲಾ, ಖಾದರ್ವಲಿ, ಶಿವಪ್ಪ ಅವರನ್ನು ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.
ಎಐಸಿಸಿಟಿಯು ರಾಜ್ಯ ಘಟಕದ ಅಧ್ಯಕ್ಷ ಕ್ಲಿಫ್ಟನ್ ಡಿ ರೊಜಾರಿಯೋ, ವಕೀಲ ವಿನಯ್ ಶ್ರೀನಿವಾಸ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.