ADVERTISEMENT

ಭೀಮಣ್ಣ ಖಂಡ್ರೆ ಜನ್ಮ ಶತಮಾನೋತ್ಸವ ಡಿ. 2ರಂದು

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2023, 16:24 IST
Last Updated 25 ನವೆಂಬರ್ 2023, 16:24 IST
ಭೀಮಣ್ಣ ಖಂಡ್ರೆ
ಭೀಮಣ್ಣ ಖಂಡ್ರೆ   

ಬೆಂಗಳೂರು: ‘ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಗೌರವ ಅಧ್ಯಕ್ಷರಾದ ಭೀಮಣ್ಣ ಖಂಡ್ರೆ ಅವರ ಜನ್ಮಶತಮಾನೋತ್ಸವವನ್ನು ಡಿ. 2ರಂದು ಭಾಲ್ಕಿ ಪಟ್ಟಣದಲ್ಲಿ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಅಭಿನಂದನಾ ಗ್ರಂಥ ‘ಲೋಕನಾಯಕ’ ಲೋಕಾರ್ಪಣೆ ಮಾಡಲಾಗುವುದು’ ಎಂದು ಅಖಿಲ ಭಾರತ ವೀರಶೈವ– ಲಿಂಗಾಯತ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ‘ಬಿಕೆಐಟಿ ಎಂಜಿನಿಯರಿಂಗ್‌ ಕಾಲೇಜಿನ ಆವರಣದಲ್ಲಿ ಅಂದು ಬೆಳಿಗ್ಗೆ 11.30ಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಾರ್ಯಕ್ರಮವನ್ನು ಉದ್ಘಾಟಿಸುವರು. ಗೊ.ರು. ಚನ್ನಬಸಪ್ಪ ಪ್ರಧಾನ ಸಂಪಾದಕತ್ವದಲ್ಲಿ ಸಿದ್ಧಗೊಂಡಿರುವ ಅಭಿನಂದನಾ ಗ್ರಂಥವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಡುಗಡೆ ಮಾಡಲಿದ್ದಾರೆ’ ಎಂದರು.

‘ಕಾರ್ಯಕ್ರಮದಲ್ಲಿ ವಿವಿಧ ಮಠಗಳ ಸ್ವಾಮೀಜಿಗಳು ಭಾಗವಹಿಸಲಿದ್ದಾರೆ. ಸಾಕ್ಷ್ಯ ಚಿತ್ರವನ್ನು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಬಿಡುಗಡೆ ಮಾಡಲಿದ್ದಾರೆ. ಹಾಲಿ, ಮಾಜಿ ಸಚಿವರು ಭಾಗವಹಿಸಲಿದ್ದಾರೆ’ ಎಂದೂ ವಿವರಿಸಿದರು.

ADVERTISEMENT

‘ಎಲ್ಲ ಜಾತಿ, ಧರ್ಮ, ಸಮುದಾಯದ ಏಳಿಗೆಗಾಗಿ ಮತ್ತು ಜನಹಿತಕ್ಕಾಗಿ ಶ್ರಮಿಸಿದ ಭೀಮಣ್ಣ ಖಂಡ್ರೆ ಅವರದು ಶುದ್ಧ ಚಾರಿತ್ರ್ಯ. ನುಡಿದಂತೆ ನಡೆ ಅವರ ವ್ಯಕ್ತಿತ್ವ. ಮಹಾಸಭಾದ 20ನೇ ಅಧ್ಯಕ್ಷರಾಗಿ ಸಭಾದ ಸದಸ್ಯರ ಸಂಖ್ಯೆಯನ್ನು ಕೆಲವು ಸಾವಿರದಿಂದ ಲಕ್ಷಕ್ಕೆ ಹೆಚ್ಚಿಸಿ, ಬೆಂಗಳೂರಿನ ಹೃದಯ ಭಾಗವಾದ ಸದಾಶಿವನಗರದಲ್ಲಿ ಜಾಗ ಖರೀದಿಸಿ ಸ್ವಂತ ಕಟ್ಟಡ ನಿರ್ಮಿಸಲು ಕಾರಣರಾದವರು’ ಎಂದೂ ಬಣ್ಣಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.