ADVERTISEMENT

ಬೆಂಗಳೂರು: ಕುಂದು ಕೊರತೆ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2023, 20:01 IST
Last Updated 10 ಡಿಸೆಂಬರ್ 2023, 20:01 IST
ಲಕ್ಷ್ಮೀನಾರಾಯಣಪುರದ 4ನೇ ಮುಖ್ಯರಸ್ತೆಯ ದುಃಸ್ಥಿತಿ.
ಲಕ್ಷ್ಮೀನಾರಾಯಣಪುರದ 4ನೇ ಮುಖ್ಯರಸ್ತೆಯ ದುಃಸ್ಥಿತಿ.   

‘ಅರ್ಧಕ್ಕೆ ನಿಂತ ರಸ್ತೆ ಕಾಮಗಾರಿ’

ರಾಜಾಜಿನಗರ ವಿಧಾನಸಭೆ ಕ್ಷೇತ್ರದ ವಾರ್ಡ್‌ ಸಂಖ್ಯೆ 97ರ ಲಕ್ಷ್ಮೀನಾರಾಯಣಪುರದ 4ನೇ ಮುಖ್ಯರಸ್ತೆಯಲ್ಲಿ ಒಂದು ವರ್ಷದಿಂದ ಕಾಮಗಾರಿ ಸ್ಥಗಿತಗೊಳಿಸಲಾಗಿದೆ. ರಸ್ತೆ ನಿರ್ಮಿಸುವ ಉದ್ದೇಶದಿಂದ ಜಲ್ಲಿಕಲ್ಲು ಹಾಕಿ ಹಾಗೆಯೇ ಬೀಡಲಾಗಿದೆ. ಇದರಿಂದ, ವಾಹನ ಸಂಚಾರಕ್ಕೆ ಅನನಕೂಲವಾಗಿದೆ. ಈ ರಸ್ತೆಯಲ್ಲಿ ಪ್ರತಿನಿತ್ಯ ನೂರಾರು ವಾಹನಗಳು ಸಂಚರಿಸುತ್ತಿವೆ. ಇದರಿಂದ ದೂಳಿನ ಸಮಸ್ಯೆ ಹೆಚ್ಚಾಗಿ, ವೃದ್ಧರು ಸೇರಿದಂತೆ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಸ್ಥಳೀಯ ಜನಪ್ರತಿನಿಧಿಗಳು ಮತ್ತು ಬಿಬಿಎಂಪಿ ಅಧಿಕಾರಿಗಳಿಗೆ ಮನವಿ ಮಾಡಿದರೂ ಏನು ಪ್ರಯೋಜನವಾಗುತ್ತಿಲ್ಲ. ಕೂಡಲೇ ರಸ್ತೆ ಕಾಮಗಾರಿ ಪ್ರಾರಂಭಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು.

ಗೋಕುಲರಾಜ್ ಜಿ., ಸ್ಥಳೀಯ ನಿವಾಸಿ

ADVERTISEMENT

--

‘ರಸ್ತೆ ಗುಂಡಿಗಳನ್ನು ಮುಚ್ಚಿ’

ಬಸವನಗುಡಿ ವಿಧಾನಸಭೆ ಕ್ಷೇತ್ರದ ಹನುಮಂತನಗರದ ಗವಿಪುರಕ್ಕೆ ಸಂಪರ್ಕ ಕಲ್ಪಿಸುವ ಅಕ್ಕಮಹಾದೇವಿ ರಸ್ತೆಯಲ್ಲಿ ಗುಂಡಿಗಳು ಬಿದ್ದಿದ್ದು, ವಾಹನ ಸಂಚಾರಕ್ಕೆ ಸಮಸ್ಯೆಯಾಗಿದೆ. ಸುಮಾರು ಮೂರು ತಿಂಗಳಿಂದ ಈ ಸಮಸ್ಯೆ ಹೆಚ್ಚಾಗಿದ್ದು, ಸಾರ್ವಜನಿಕರ ಓಡಾಟಕ್ಕೂ ಅನನಕೂಲವಾಗಿದೆ. ರಸ್ತೆಯಲ್ಲಿ ಗುಂಡಿಗಳು ಬಿದ್ದಿರುವ ಕಾರಣ ಈ ಭಾಗದಲ್ಲಿ ಆಟೊ, ಕ್ಯಾಬ್‌ಗಳು ಬರಲು ಹಿಂದೇಟು ಹಾಕುತ್ತಿವೆ. ಬಂದರೂ ಹೆಚ್ಚಿನ ಬಾಡಿಗೆ ಕೇಳುತ್ತಿದ್ದಾರೆ. ಈ ಬಗ್ಗೆ ಬಿಬಿಎಂಪಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ರಸ್ತೆ ದುರಸ್ತಿಗೊಳಿಸುವ ಕಾರ್ಯಕ್ಕೆ ಮುಂದಾಗಿಲ್ಲ. ಬಿಬಿಎಂಪಿ ಕೂಡಲೇ ರಸ್ತೆ ದುರಸ್ತಿಗೊಳಿಸಲು ಕ್ರಮ ಕೈಗೊಳ್ಳಬೇಕು.

ಬಿ.ಆರ್. ಸುರೇಶ್, ಸ್ಥಳೀಯ ನಿವಾಸಿ

--

‘ರಸ್ತೆಯಲ್ಲಿ ಹರಿಯುವ ತ್ಯಾಜ್ಯ ನೀರು’

ಹಡ್ಸನ್‌ ವೃತ್ತದಲ್ಲಿರುವ ಇಂದಿರಾ ಕ್ಯಾಂಟೀನ್‌ನಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ನೀರು ರಸ್ತೆಯಲ್ಲಿ ಹರಿಯುತ್ತಿದೆ. ಇದರಿಂದ, ಕ್ಯಾಂಟೀನ್‌ಗೆ ಬರುವ ಗ್ರಾಹಕರು ಮೂಗು ಮುಚ್ಚಿಕೊಂಡು ಬರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಜೊತೆಗೆ ಈ ಪ್ರದೇಶದಲ್ಲಿ ಬಿಬಿಎಂಪಿಯ ಕಸ ತುಂಬಿಕೊಂಡಿರುವ ವಾಹನಗಳು ನಿಲ್ಲುತ್ತವೆ. ಈ ವಾಹನಗಳಲ್ಲಿ ತುಂಬಿರುವ ಕಸದಿಂದ ಉತ್ಪತ್ತಿಯಾಗುವ ಕೊಳಚೆ ನೀರು ಸಹ ಇದೇ ರಸ್ತೆಯಲ್ಲಿ ಹರಿಯುತ್ತಿದೆ. ಹಡ್ಸನ್‌ ವೃತ್ತದ ಪಕ್ಕದಲ್ಲಿ ಅನೇಕ ಶಾಲಾ–ಕಾಲೇಜುಗಳಿದ್ದು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಇದರ ಪಕ್ಕದಲ್ಲಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ ಭೇಟಿ ನೀಡುವ ಗ್ರಾಹಕರು ತೊಂದರೆ ಅನುಭವಿಸುತ್ತಿದ್ದಾರೆ.

ಬಾಲಕೃಷ್ಣ ಎ, ಸ್ಥಳೀಯ ನಿವಾಸಿ

--

‘ಹಂಪಿನಗರ: ಗುಂಡಿ ಮುಚ್ಚಿ’

ಹಂಪಿನಗರದ 5ನೇ ಮುಖ್ಯರಸ್ತೆ ಅಂಚೆ ಕಚೇರಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ದೊಡ್ಡ ಗುಂಡಿ ಬಿದ್ದಿದೆ. ಈ ಗುಂಡಿಗೆ ತ್ಯಾಜ್ಯ, ಮರದ ರಂಬೆ–ಕೊಂಬೆಗಳನ್ನು ಹಾಕಿ ಮುಚ್ಚಲಾಗಿದೆ. ಇದರಿಂದ, ವಾಹನ ಸವಾರರು ಆತಂಕದಲ್ಲಿ ಸಂಚಾರ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಬಿಬಿಎಂಪಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಆರು ತಿಂಗಳಾದರೂ ಗುಂಡಿ ಮುಚ್ಚುವ ಕಾರ್ಯಕ್ಕೆ ಮುಂದಾಗಿಲ್ಲ.

ರಾಮಸ್ವಾಮಿ, ಸ್ಥಳೀಯ ನಿವಾಸಿ

––

‘ಸೊಳ್ಳೆಗಳ ಕಾಟ ನಿಯಂತ್ರಿಸಿ’

ಬಸವನಗುಡಿಯ ಎನ್.ಆರ್. ಕಾಲೊನಿಯ ಕೆ.ಜಿ. ಶಾಮಣ್ಣ ಉದ್ಯಾನದಲ್ಲಿ ಇತ್ತೀಚೆಗೆ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಉದ್ಯಾನಕ್ಕೆ ಭೇಟಿ ನೀಡುವ ವೃದ್ಧರಿಗೆ ಹಾಗೂ ಮಕ್ಕಳಿಗೆ ಸೊಳ್ಳೆ ಕಡಿತದಿಂದ ಮಲೇರಿಯಾ, ಡೆಂಗೆ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಉದ್ಯಾನದಲ್ಲಿ ಸೊಳ್ಳೆ ಗಳನ್ನು ನಿಯಂತ್ರಿಸುವ ಔಷಧಿಯನ್ನು ಸಿಂಪಡಿಸುವಂತೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ.

ಬಿ ಎಸ್ ಮನೋಹರ್, ಸ್ಥಳೀಯ ನಿವಾಸಿ

ಗವಿಪುರಕ್ಕೆ ಸಂಪರ್ಕ ಕಲ್ಪಿಸುವ ಅಕ್ಕಮಹಾದೇವಿ ರಸ್ತೆಯಲ್ಲಿ ಗುಂಡಿ ಬಿದ್ದಿರುವುದು. 
ಹಡ್ಸನ್‌ ವೃತ್ತದಲ್ಲಿ ರಸ್ತೆಯಲ್ಲಿ ಹರಿಯುತ್ತಿರುವ ತ್ಯಾಜ್ಯ ನೀರು.
ಹಂಪಿನಗರದ ಮುಖ್ಯರಸ್ತೆಯಲ್ಲಿರುವ ಗುಂಡಿಗೆ ಮರದ ರೆಂಬೆಗಳನ್ನು ಹಾಕಿರುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.