ADVERTISEMENT

ಬೆಂಗಳೂರು: ಪತ್ನಿ, ಪ್ರಿಯಕರನ ಕೊಂದು ಪತಿ ಆತ್ಮಹತ್ಯೆ

ಕೋಣನಕುಂಟೆ ಪೊಲೀಸ್‌ ಠಾಣಾ ವ್ಯಾಪ್ತಿಯ ಆರ್‌ಬಿಐ ಲೇಔಟ್‌ನಲ್ಲಿ ಕೃತ್ಯ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2024, 16:13 IST
Last Updated 17 ಅಕ್ಟೋಬರ್ 2024, 16:13 IST
ಲಕ್ಷ್ಮಿ 
ಲಕ್ಷ್ಮಿ    

ಬೆಂಗಳೂರು: ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ ಬಳಿಕ ಪತಿಯೂ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಣನಕುಂಟೆ ಪೊಲೀಸ್‌ ಠಾಣಾ ವ್ಯಾಪ್ತಿಯ ಆರ್‌ಬಿಐ ಲೇಔಟ್‌ನಲ್ಲಿ ನಡೆದಿದೆ.

ಆರ್‌ಬಿಐ ಲೇಔಟ್ ನಿವಾಸಿಗಳಾದ ಕೋಲುಸು ಲಕ್ಷ್ಮಿ (33) ಮತ್ತು ಗಣೇಶ್ ಕುಮಾರ್ (20) ಕೊಲೆಯಾದವರು. ಕೃತ್ಯ ಎಸಗಿದ ಬಳಿಕ ಲಕ್ಷ್ಮಿ ಅವರ ಪತಿ ಕೋಲುಸು ಗೊಲ್ಲಾ (41) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ಮೂವರೂ ಆಂಧ್ರಪ್ರದೇಶದ ಶ್ರೀಕಾಕುಳಂನವರು. ನಗರದಲ್ಲಿ ಕಟ್ಟಡ ಕಾರ್ಮಿಕರಾಗಿ ಕೆಲಸ ಮಾಡಿದ್ದರು. ಇತ್ತೀಚೆಗೆ ಕೋಣನಕುಂಟೆಯ ಆರ್‌ಬಿಐನ ಸೋಮೇಶ್ವರ ಲೇಔಟ್‌ನ ನಿರ್ಮಾಣ ಹಂತದ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದರು. ಅದೇ ಕಟ್ಟಡದ ನೆಲಮಹಡಿಯ ಒಂದೇ ಕೋಣೆಯಲ್ಲಿ ಮೂವರೂ ವಾಸವಾಗಿದ್ದರು ಎಂದು ಪೊಲೀಸರು ತಿಳಿಸಿದರು.

ADVERTISEMENT

‘ಈ ನಡುವೆ ಲಕ್ಷ್ಮಿ ಹಾಗೂ ಗಣೇಶ್ ಕುಮಾರ್ ನಡುವೆ ಆತ್ಮೀಯತೆ ಬೆಳೆದಿತ್ತು. ಈ ವಿಚಾರಕ್ಕೆ ಪತಿ ಹಾಗೂ ಪತ್ನಿ ನಡುವೆ ಗಲಾಟೆ ನಡೆಯುತ್ತಿತ್ತು. ಗಣೇಶ್‌ ಅವರ ಜತೆಗೆ ಓಡಾಟ ನಡೆಸದಂತೆ ತಾಕೀತು ಮಾಡಿದ್ದರು’ ಎಂದು ಪೊಲೀಸರು ಹೇಳಿದರು.

‘ಇಸ್ರೊ ಲೇಔಟ್‌ನಲ್ಲಿ ಕಟ್ಟಡ ಕಾರ್ಮಿಕರಾಗಿದ್ದ ನಾದಿನಿಗೆ ಕರೆ ಮಾಡಿದ್ದ ಕೋಲುಸು ಗೊಲ್ಲಾ, ‘ನಿನ್ನ ಸಹೋದರಿ ಬೇರೊಬ್ಬನ ಜತೆ ಆತ್ಮೀಯವಾಗಿದ್ದಾಳೆ. ಹೀಗೆ ಮುಂದುವರಿದರೆ, ಆಕೆಯನ್ನು ಕೊಂದು, ನಾನೂ ಸಾಯುತ್ತೇನೆ’ ಎಂದು ಬೆದರಿಕೆ ಹಾಕಿದ್ದರು. ಆದರೆ, ಅದನ್ನು ಆಕೆ ಗಂಭೀರವಾಗಿ ಪರಿಗಣಿಸಿರಲಿಲ್ಲ’ ಎಂದು ಪೊಲೀಸರು ತಿಳಿಸಿದರು.

‘ಗುರುವಾರ ದೊಣ್ಣೆಯಿಂದ ಪತ್ನಿ ಮತ್ತು ಆಕೆಯ ಪ್ರಿಯಕರನ ತಲೆಗೆ ಹೊಡೆದು ಕೊಂದ ಆರೋಪಿ, ನಸುಕಿನ ಜಾವ ನಾದಿನಿಗೆ ಕರೆ ಮಾಡಿ ಕೊಲೆಯ ವಿಷಯ ತಿಳಿಸಿದ್ದ. ಬಳಿಕ ಅದೇ ಕಟ್ಟಡದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ’ ಎಂದು ಪೊಲೀಸರು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.